ರಾಷ್ಟ್ರೀಯ ನಾಗರಿಕ ನೋಂದಣಿ ಮಾಡಿಸಲು 40 ಲಕ್ಷ ಮಂದಿ ವಿಫಲ: ಏನಿದು ಎನ್‌ಆರ್‌ಸಿ? ಅಸ್ಸಾಂನಲ್ಲೇ ಮಾತ್ರ ಏಕೆ?

Public TV
3 Min Read

ನವದೆಹಲಿ: ಅಸ್ಸಾಂ ರಾಜ್ಯದಲ್ಲಿ ನಡೆದ `ರಾಷ್ಟ್ರೀಯ ನಾಗರಿಕ ನೋಂದಣಿ’ (ಎನ್‌ಆರ್‌ಸಿ) ಎರಡನೇ ಕರಡು ಪಟ್ಟಿ ಬಿಡುಗಡೆಯಾಗಿದ್ದು, 40.07 ಲಕ್ಷ ಮಂದಿ ಎನ್‌ಆರ್‌ಸಿ  ಮಾಡಿಕೊಳ್ಳಲು ವಿಫಲರಾಗಿದ್ದಾರೆ. 3.29 ಕೋಟಿ ನಿವಾಸಿಗಳ ಪೈಕಿ ಸೋಮವಾರ 2.9 ಕೋಟಿ ಜನರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಅಸ್ಸಾಂ ನಲ್ಲಿ ಮಾತ್ರ ಏಕೆ: ಅಸ್ಸಾಂ ರಾಜ್ಯವೂ ನೆರೆಯ ಮುಸ್ಲಿಂ ರಾಷ್ಟ್ರವಾದ ಬಾಂಗ್ಲಾದೇಶದೊಂದಿಗೆ ಗಡಿ ಹಂಚಿಕೊಂಡಿದೆ. ಹೀಗಾಗಿ ಇಲ್ಲಿ ಇಲ್ಲಿ ಬಾಂಗ್ಲಾದೇಶಿಯರ ಹಾವಳಿ ಹೆಚ್ಚಾಗಿದೆ. ಅಕ್ರಮ ವಲಸಿಗರಿಂದ ಇಲ್ಲಿ ಹೆಚ್ಚಿನ ಹಿಂಸಾಚಾರದ ಗಲಭೆಗಳು ನಡೆಯುತ್ತಿತ್ತು. ಇದರಿಂದ ರಾಜ್ಯದ ವಸ್ತುಸ್ಥಿತಿಯೇ ಬದಲಾಗಿತ್ತು. ಇದನ್ನು ಗಮನಿಸಿದ ಸರ್ಕಾರ ಸುಪ್ರೀಂ ಕೋರ್ಟ್ ನಿಗಾದಲ್ಲಿ ಅಸ್ಸಾಂನಲ್ಲಿ ಮಾತ್ರ ಎನ್‌ಆರ್‌ಸಿ ನೊಂದಣಿ ಕಾರ್ಯನಡೆಸಿತ್ತು. ಈಗಾಗಲೇ ಮೊದಲ ಬಾರಿಗೆ ಜನವರಿ 1 ರಂದು ಮೊದಲ ಕರಡು ಬಿಡುಗಡೆ ಮಾಡಲಾಗಿತ್ತು.

ಅಂತಿಮ ಪಟ್ಟಿಯಲ್ಲ: ಸದ್ಯ ಬಿಡುಗಡೆಯಾಗಿರುವ ಪಟ್ಟಿ ಅಂತಿಮವಲ್ಲ ಎಂದು ಆಸ್ಸಾಂ ಸಿಎಂ ಸರ್ಬಾನಂದ ಸೋನೋವಲ್ ತಿಳಿಸಿದ್ದಾರೆ. 2ನೇ ಪಟ್ಟಿಯಲ್ಲಿ ಹೆಸರು ಇಲ್ಲದ ಮಂದಿ ಆಗಸ್ಟ್ 7 ರಿಂದ ಸೆಪ್ಟೆಂಬರ್ 28 ರವರೆಗೂ ನಡೆಯುವ ಅಂತಿಮ ನೋಂದಣಿ ಕಾರ್ಯದಲ್ಲಿ ಅರ್ಜಿ ಸಲ್ಲಿಸಿ ತಮ್ಮ ಹೆಸರು ಬಿಟ್ಟು ಹೋಗಿರುವ ಕಾರಣ ತಿಳಿಯಬಹುದು. ಬಳಿಕ ಅಧಿಕಾರಿಗಳ ಬಳಿ ಆಗಸ್ಟ್ 30 ರಿಂದ ಸೆಪ್ಟೆಂಬರ್ 28 ವೇಳೆಗೆ ಸೂಕ್ತ ದಾಖಲೆ ನೀಡಿ ಮರು ನೋಂದಣಿ ಮಾಡಬಹುದಾಗಿದೆ. ಪಟ್ಟಿಯಲ್ಲಿ ಸ್ಥಾನ ಪಡೆದ ನಾಗರಿಕರಿಗೆ ಹೆಸರು, ವಿಳಾಸ ಹಾಗೂ ಫೋಟೋ ಹೊಂದಿರುವ ಗುರುತು ಪತ್ರ ನೀಡಲಾಗುತ್ತದೆ.

ಹೆಚ್ಚಿನ ಭದ್ರತೆ: ಸದ್ಯ ಬಿಡುಗಡೆಯಾಗಿರುವ ಎನ್‌ಆರ್‌ಸಿ ಪಟ್ಟಿಯಲ್ಲಿ ನೋಂದಣಿಯಾಗದ ಜನರು ಅಸ್ಸಾಂ ನಲ್ಲಿ ಹಿಂಸಾಚಾರ ಸೃಷ್ಟಿಮಾಡುವ ಸಾಧ್ಯತೆ ಇರುವುದರಿಂದ ರಾಜ್ಯ ಸರ್ಕಾರ 22 ಸಾವಿರ ಪ್ಯಾರಾ ಮಿಲಿಟರಿ ಯೋಧರನ್ನು ಹೆಚ್ಚಿನ ಭದ್ರತೆಗೆ ನಿಯೋಜಿಸಲಾಗಿದೆ.

ಮಾರ್ಚ್ 25, 1971 ಯಾಕೆ?
1971 ರಲ್ಲಿ ಬಾಂಗ್ಲಾದೇಶ ಸ್ವಾತಂತ್ರ್ಯ ಹೋರಾಟದ ಆರಂಭವಾಗಿ ಹಿಂಸಾಚಾರ ಹೆಚ್ಚಾಗಿತ್ತು. ಇದರಿಂದ ಹೆದರಿದ ಬಾಂಗ್ಲಾ ಪ್ರಜೆಗಳು ಅಸ್ಸಾಂನತ್ತ ವಲಸೆ ಬಂದರು. 1971 ಮಾರ್ಚ್ 26 ರಂದು ಬಾಂಗ್ಲಾ ಸ್ವತಂತ್ರ ರಾಷ್ಟ್ರವಾಗಿ ಉದಯವಾಯಿತು. ಹೀಗಾಗಿ ಬಾಂಗ್ಲಾ ಸ್ವಾಂತಂತ್ರ್ಯ ಗಳಿಸಿದ ಒಂದು ದಿನದ ಮುಂಚಿತ ದಿನವಾದ ಮಾರ್ಚ್ 25ನ್ನು ಕಟಾಫ್ ದಿನಾಂಕ ಮಾಡಲಾಯಿತು. 1985 ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಅಸ್ಸಾಂ ಅಸೋಂ ಗಣ ಪರಿಷತ್ ಸರ್ಕಾರಗಳು ಕಟಾಫ್ ದಿನಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡಿದ್ದವು. ಮಾರ್ಚ್ 25, 1971 ರ ಮೊದಲು ಅಸ್ಸಾಂನಲ್ಲಿ ವಾಸಿಸುವ ಎಲ್ಲ ನಾಗರಿಕರನ್ನು ಈ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ಅಸ್ಸಾಂ ಸರ್ಕಾರ ಈ ಹಿಂದೆ ಹೇಳಿತ್ತು. 1951ರ ನಂತರ ದಾಖಲೆಗಳನ್ನು ಸಲ್ಲಿಸಿದರೆ ಈ ಪಟ್ಟಿಯಲ್ಲಿ ಸೇರಿಸಲಾಗುವುದು. ನಿಜವಾದ ಪ್ರಜೆಗಳು ಭಯಪಡುವ ಅಗತ್ಯವಿಲ್ಲ ಎಂದು ತಿಳಿಸಿತ್ತು.

ಪಟ್ಟಿಯಲ್ಲಿಲ್ಲದವರು ಗಡೀಪಾರು?
ಎನ್‌ಆರ್‌ಸಿ ಪಟ್ಟಿಯಲ್ಲಿ ನೋಂದಣಿ ಮಾಡಿರದ ಮಂದಿಯನ್ನು ಗಡೀಪಾರು ಮಾಡುವ ಸಂಭವವಿದೆ. ಆದರೆ ಇದಕ್ಕೂ ಮುನ್ನ ಕೇಂದ್ರ ಸರ್ಕಾರ ಬಾಂಗ್ಲಾದೇಶದೊಂದಿಗೆ ಗಡಿಪಾರು ಒಪ್ಪಂದ ಮಾಡಿಕೊಳ್ಳಬೇಕಿದೆ. ಅಸ್ಸಾಂನಲ್ಲಿ ಕೇವಲ ಬಾಂಗ್ಲಾ ಅಕ್ರಮ ವಲಸಿಗರು ಮಾತ್ರವಲ್ಲದೇ ನೇಪಾಳದಿಂದ ಬಂದಿರುವ ಮಂದಿಯೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಕಾಂಗ್ರೆಸ್, ಟಿಎಂಸಿ ಅಸಮಾಧಾನ: ಅಸ್ಸಾಂ ಸರ್ಕಾರ ಬಿಡುಗಡೆ ಮಾಡಿರುವ ಪಟ್ಟಿಯ ಕುರಿತು ತೃಣಮೂಲ ಕಾಂಗ್ರೆಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರ ಉದ್ದೇಶ ಪೂರ್ವಕವಾಗಿಯೇ 40 ಲಕ್ಷ ಮಂದಿ ಅಲ್ಪಸಂಖ್ಯಾತರ ಹೆಸರನ್ನು ಪಟ್ಟಿಯಿಂದ ಹೊರಗಿಟ್ಟಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಬೇಕು ಎಂದು ಟಿಎಂಸಿ ಪಕ್ಷದ ವಕ್ತಾರ ಎಸ್‍ಎಸ್ ರಾಯ್ ಆಗ್ರಹಿಸಿದ್ದಾರೆ.

40 ಲಕ್ಷ ಮಂದಿ ಹೆಸರು ಪಟ್ಟಿಯಿಂದ ಹೊರಗಿಟ್ಟಿರುವುದು ಅಚ್ಚರಿ ತಂದಿದೆ. ಈ ವರದಿ ಸಿದ್ಧಪಡಿಸುವ ವೇಳೆ ಹಲವು ಅಕ್ರಮಗಳು ನಡೆದಿದೆ. ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿ ಚರ್ಚೆ ನಡೆಸಲಾಗುವುದು. ಈ ಹಿಂದೆ ಬಿಜೆಪಿಯ ರಾಜಕೀಯ ದುರುದ್ದೇಶ ಅಡಗಿದೆ ಎಂದು ಕಾಂಗ್ರೆಸ್ ಅಸ್ಸಾಂ ಮುಖ್ಯಸ್ಥ ರಿಪನ್ ಬೋರಾ ದೂರಿದ್ದಾರೆ.

ಅಸ್ಸಾಂ ನಲ್ಲಿ ಬಿಡುಗಡೆಯಾಗಿರುವ ಎನ್‌ಆರ್‌ಸಿ ಪಟ್ಟಿಯ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಪಟ್ಟಿಯಲ್ಲಿ ಹೆಸರು ಬಿಟ್ಟುಹೋಗಿರುವ ಜನರು ಆತಂಕ ಪಡುವ ಅಗತ್ಯವಿಲ್ಲ. ಯಾರ ಮೇಲೂ ಸರ್ಕಾರ ಯಾವುದೇ ಕ್ರಮಕೈಗೊಳ್ಳುವುದಿಲ್ಲ. ಆದರೆ ಕೆಲ ಮಂದಿ ಉದ್ದೇಶ ಪೂರ್ವಕವಾಗಿ ಆತಂಕ ಸೃಷ್ಟಿ ಮಾಡುತ್ತಿದ್ದಾರೆ. ವರದಿ ನಿಷ್ಪಕ್ಷಪಾತವಾಗಿದೆ. ಅಲ್ಲದೇ ಇದು ಅಂತಿಮ ಪಟ್ಟಿಯಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *