ಉಡುಪಿ: ಈ ಹಿಂದೆ ಜುಲೈ 31 ಕ್ಕೆ ಶ್ರೀಗಳ ಆರಾಧನಾ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಪೊಲೀಸರು ತನಿಖೆ ಪೂರ್ಣಗೂಳ್ಳದ ಕಾರಣ ಶಿರೂರು ಮೂಲಮಠ ಪೊಲೀಸ್ ಸುಪರ್ದಿಯಲ್ಲಿ ಇದ್ದಿದರಿಂದ ಕಾರ್ಯಕ್ರಮವನ್ನು ಮುಂದೂಡಿದ್ದಾರೆ.
ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಸಂಪ್ರದಾಯದ ಪ್ರಕಾರ ಶಿರೂರು ಲಕ್ಷ್ಮೀವರ ತೀರ್ಥರು ವೃಂದಾವನಸ್ಥರಾಗಿ 13 ನೇ ದಿನಕ್ಕೆ ಆರಾಧನೆ ನಡೆಯಬೇಕು. ಆದ್ರೆ ಪೊಲೀಸ್ ತನಿಖೆ ಪೂರ್ಣಗೊಳ್ಳದ ಕಾರಣ ಆರಾಧನಾ ಪ್ರಕ್ರಿಯೆ ಜುಲೈ 31 ಕ್ಕೆ ನಡೆಯುತ್ತಿಲ್ಲ. ಶಿರೂರು ಮೂಲಮಠ ಪೊಲೀಸ್ ಸುಪರ್ಧಿಯಲ್ಲಿದ್ದು, ದ್ವಂದ್ವ ಮಠಾಧೀಶ ಸೋದೆ ಶ್ರೀ ವಿಶ್ವವಲ್ಲಭರು ಆರಾಧನೆ ನಡೆಸಲು ಪೊಲೀಸರಲ್ಲಿ ಅವಕಾಶ ಕೇಳಿದ್ದರು. ತನಿಖೆ ಪೂರ್ಣಗೊಳ್ಳದ ಮತ್ತು ಎಫ್ ಎಸ್ ಎಲ್ ವರದಿ ಬಾರದ ಕಾರಣ ಪೊಲೀಸರು ಮೂಲಮಠದಲ್ಲಿ ಆರಾಧನೆ ನಡೆಸಲು ಅವಕಾಶ ನೀಡಿಲ್ಲ.
ಆರಾಧನೆ ನಡೆದರೆ ಸಾವಿರಾರು ಮಂದಿ ಭಕ್ತರು ಮಠಕ್ಕೆ ಬರಬೇಕಾಗುತ್ತದೆ. ಪೂಜೆ ಪುನಸ್ಕಾರ, ಅನ್ನದಾನ ನಡೆಯುತ್ತದೆ. ಈ ಎಲ್ಲಾ ಪ್ರಕ್ರಿಯೆಯಿಂದ ಸಾಕ್ಷ್ಯ ನಾಶವಾಗಿ, ತನಿಖೆಗೆ ಹಿನ್ನಡೆಯಾಗಬಹುದು. ಹಾಗಾಗಿ ಪೊಲೀಸರು ಆರಾಧನೆಗೆ ಅವಕಾಶ ಕೊಟ್ಟಿಲ್ಲ ಎಂದು ಹೇಳಲಾಗಿದೆ. ತನಿಖೆ ಸಂಪೂರ್ಣ ಆದ ಮೇಲೆ ಎಫ್ ಎಸ್ ಎಲ್ ವರದಿ ಬಂದ ನಂತರ ಒಳ್ಳೆಯ ದಿನ ಗೊತ್ತುಪಡಿಸಿ ಆರಾಧನೆ ಪ್ರಕ್ರಿಯೆ ಮಾಡುವುದಾಗಿ ಸೋದೆ ಸ್ವಾಮೀಜಿಗಳು ಹೇಳಿದ್ದಾರೆ.