ತೇವವಾದ ಮಣ್ಣು ದಾರಿಯಲ್ಲಿ ಬೈಕ್ ರೈಡರ್ಸ್ ರಿಂದ ಸಾಹಸಮಯ ಪ್ರದರ್ಶನ

Public TV
1 Min Read

ಹಾಸನ: ಜೋರು ಮಳೆಗಾಲ ಸಂದರ್ಭದಲ್ಲಿ ಯಾವುದೇ ಆಟ ಅಥವಾ ಸ್ಪರ್ಧೆ ನಡೆಯೋದು ಕಡಿಮೆ. ಆದರೆ ಹಾಸನದಲ್ಲಿ ಅದೇ ಮಳೆಯ ನಡುವೆ ರಾಜ್ಯಮಟ್ಟದ ಬೈಕ್ ರೇಸ್ ಸ್ಪರ್ಧೆ ನಡೆದಿದ್ದು, ಅಪಾರ ಮಂದಿಯ ಎದೆಯಲ್ಲಿ ಚಳಿ ಬದಲಿಗೆ ಬಿಸಿ ಹೆಚ್ಚಿಸಿತು.

ಹಾಸನದ ಅಂಬೇಡ್ಕರ್ ಯುವ ಬ್ರಿಗೇಡ್ ಹಾಗೂ ಬಿ.ಝಡ್ ಸಂಘಟನೆ ಆಶ್ರಯದಲ್ಲಿ ಶನಿವಾರ ಕಾರ್ ರೇಸ್ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಮುಂದುವರಿದು ಭಾನುವಾರ ಆಯೋಜನೆ ಮಾಡಿದ್ದ ರಾಜ್ಯಮಟ್ಟದ ಬೈಕ್ ರೇಸ್ ಸ್ಪರ್ಧೆ ನಿಜಕ್ಕೂ ಅದ್ಭುತವಾಗಿತ್ತು.

ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ರಾಜ್ಯ ಮಾತ್ರವಲ್ಲದೇ ಹೊರ ರಾಜ್ಯಗಳಿಂದಲೂ ನೂರಾರು ಮಂದಿ ರೇಡರ್ ಗಳು ಬಂದಿದ್ದರು. ಭಾನುವಾರದ ರಜೆ ಮೂಡ್‍ನಲ್ಲಿ ಬಂದಿದ್ದ ಸಾವಿರಾರು ಮಂದಿ ರೇಡರ್ ಗಳ ಸಾಹಸಮಯ ಪ್ರದರ್ಶನ ನೋಡಿ ಎಂಜಾಯ್ ಮಾಡಿದ್ದಾರೆ. ಬೈಕ್ ರೇಡರ್ ಗಳ ಸ್ಪೀಡ್ ಮತ್ತು ಬ್ಯಾಲೆನ್ಸ್ ನಿಂದ ನೋಡುಗರನ್ನು ರೋಮಾಂಚನಗೊಳಿಸಿತ್ತು. ಒಬ್ಬರನ್ನು ಹಿಂದಿಕ್ಕಿ ಮತ್ತೊಬ್ಬರು ಗೆಲ್ಲಲು ನಡೆಸಿದ ಪೈಪೋಟಿ ಕ್ರೀಡಾಸಕ್ತರಿಗೆ ಹೊಸದೊಂದು ಥ್ರಿಲ್ ನೀಡಿತು. ಯುವಕರು ಮಾತ್ರವಲ್ಲದೇ ಸ್ಪರ್ಧೆ ನೋಡಲು ಆಗಮಿಸಿದ್ದ ಹಳ್ಳಿ ಜನರು ಸಖತ್ ಎಂಜಾಯ್ ಮಾಡಿದರು ಎಂದು ಪ್ರೇಕ್ಷಕರು ಹೇಳಿದ್ದಾರೆ.

ವಿವಿಧೆಡೆಗಳಿಂದ ಆಗಮಿಸಿದ್ದ ರೈಡರ್ ಗಳು, ಅಂಕು-ಡೊಂಕಾದ ತಿರುವಿನ ತೇವವಾದ ಮಣ್ಣ ದಾರಿಯಲ್ಲಿ ಕೆಸರು ಹಾರಿಸುತ್ತ ಚಂಗನೆ ಹಾರಿದಂತೆ, ಬಳುಕಾಡುತ್ತಾ ಮಿಂಚಿನ ವೇಗದಲ್ಲಿ ಸಾಗಿದ ದೃಶ್ಯ ಅಬ್ಬಾಬ್ಬಾ ಎನಿಸಿತು. ಗೆದ್ದವರು ಸಖತ್ ಖುಷಿಯಿಂದ ಬೀಗಿದರು. ಈಗಾಗಲೇ ನಡೆದಿದ್ದ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನಕ್ಕೆ ಕೊರಳೊಡ್ಡಿದ್ದವರು, ತಮ್ಮ ಬಹುಮಾನಗಳ ಪಟ್ಟಿಯನ್ನು ಹಿಗ್ಗಿಸಿಕೊಂಡು ಸಂಭ್ರಮಿಸಿದರು. ಮಳೆಯಿಂದ ಟ್ರ್ಯಾಕ್ ತುಸು ಕ್ಲಿಷ್ಟಕರವಾಗಿದ್ದರೂ, ಸಾಹಸ ಪಟ್ಟು ರೈಡರ್ ಗಳು ಗುರಿಮುಟ್ಟಿ ಸಂತಸಪಟ್ಟರು.

ಬೆಂಗಳೂರಿನ ಸೊಹೇಲ್ ಅಹಮದ್ 4 ಸ್ಟ್ರೋಕ್ ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದು ಗಮನ ಸೆಳೆದಿದ್ದಾರೆ. ಸ್ಪರ್ಧೆ ಕಣ್ತುಂಬಿಕೊಳ್ಳಲು ಆಗಮಿಸಿದ್ದ ಮಹಿಳೆಯರು, ಮಕ್ಕಳು ಹಾಗೂ ಕ್ರೀಡಾ ಪ್ರೇಮಿಗಳು ಬೈಕ್ ಸವಾರರ ಮಿಂಚಿನ ಸಂಚಾರಕ್ಕೆ ಮಾರು ಹೋಗಿದ್ದು, ಕೆಲವರು ತಮ್ಮ ತಮ್ಮ ನೆಚ್ಚಿನ ರೈಡರ್ಸ್ ಗಳನ್ನು ಹುರಿದುಂಬಿಸಿ ತಾವೂ ಖುಷಿಪಟ್ಟರು.

Share This Article
Leave a Comment

Leave a Reply

Your email address will not be published. Required fields are marked *