ಸಹಾಯಕ ಇಂಜಿನಿಯರ್ ಅಮಾನತಿಗೆ ಮಾಜಿ ಸಿಎಂ ಸೂಚನೆ – ಸಿದ್ದರಾಮಯ್ಯ ಎದುರಲ್ಲೇ ಕಣ್ಣೀರು ಹಾಕಿದ ಅಧಿಕಾರಿ

Public TV
1 Min Read

ಬಾಗಲಕೋಟೆ: ಕರ್ತವ್ಯ ಲೋಪ ಎಸಗಿದ್ದ ನೀರು ಸರಬರಾಜು ಇಲಾಖೆ ಸಹಾಯಕ ಇಂಜಿನಿಯನ್ ರನ್ನು ಅಮಾನತು ಮಾಡಲು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಿರಿಯ ಅಧಿಕಾರಿಗೆ ಸೂಚಿಸಿದ್ದರು. ಈ ವೇಳೆ ಅಧಿಕಾರಿ ಅಮಾನತು ಮಾಡದಂತೆ ಕಣ್ಣೀರು ಹಾಕಿದ ಘಟನೆ ಜಿಲ್ಲೆಯ ಬದಾಮಿ ತಾಲೂಕಿನ ಅಧಿಕಾರಿಗಳ ಸಭೆಯಲ್ಲಿ ನಡೆಯಿತು.

ಇಂದು ಬದಾಮಿ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಕ್ಷೇತ್ರದ ಅಧಿಕಾರಿಗಳ ಕಾರ್ಯದ ಬಗ್ಗೆ ಸ್ಥಳೀಯ ಶಾಸಕರಾಗಿರುವ ಸಿದ್ದರಾಮಯ್ಯ ಮಾಹಿತಿ ಪಡೆದರು. ಈ ವೇಳೆ ಬದಾಮಿ ತಾಲೂಕು ನೀರು ಸರಬರಾಜು ಇಲಾಖೆ ಸಹಾಯಕ ಇಂಜಿನಿಯರ್ ಅವರು ಇಲಾಖೆ ಕಾರ್ಯಗಳನ್ನು ಸಮರ್ಥವಾಗಿ ನಿಭಾಯಿಸದಿರುವುದು ಕಂಡು ಬಂದಿತ್ತು. ಇದಕ್ಕೆ ಗರಂ ಆದ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಯನ್ನು ಅಮಾನತ್ತು ಮಾಡಲು ಜಿಲ್ಲಾ ಪಂಚಾಯತಿ ಸಿಇಓ ವಿಕಾಸ ಸುರಳ್ಕರ್ ಗೆ ಫೋನ್ ಮೂಲಕ ಸೂಚಿಸಿದರು.

ತಾಲೂಕಿನಲ್ಲಿ 165 ನೀರು ಶುದ್ಧೀಕರಣ ಘಟಕಗಳು ನಿರ್ಮಿಸಲಾಗಿದ್ದು, ಆದರೆ ಇವುಗಳಲ್ಲಿ 163 ಘಟಕಗಳು ಕಾರ್ಯನಿರ್ವಹಿಸುತ್ತಿರಲಿಲ್ಲ. ಈ ಕುರಿತು ಸಮರ್ಪಕ ಉತ್ತರ ನೀಡಲು ಸಹಾಯಕ ಇಂಜಿನಿಯರ್ ವೆಂಕಟೇಶ್ ನಾಯಕ್ ವಿಫಲರಾದರು. ಈ ವೇಳೆ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ ಅವರು, ನೀವೇ ನನ್ನ ಸ್ಥಾನದಲ್ಲಿ ಇದಿದ್ದರೆ ಏನು ಮಾಡುತ್ತಿದ್ದೀರಿ? ನಿಮ್ಮ ಕೆಲಸ ನಿಮಗೇ ತೃಪ್ತಿ ತಂದಿದ್ದೀಯಾ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರ ಪ್ರಶ್ನೆಗೆ ಉತ್ತರಿಸಲಾಗದೆ ತಮ್ಮ ಕರ್ತವ್ಯ ಲೋಪವನ್ನು ಒಪ್ಪಿಕೊಂಡ ಅಧಿಕಾರಿ ಮುಂದಿನ ದಿನಗಳಲ್ಲಿ ಈ ರೀತಿ ನಡೆಯದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು. ಆದರೆ ಅಧಿಕಾರಿಗಳ ಯಾವುದೇ ಮಾತಿಗೆ ಸಮಾಧಾನಗೊಳ್ಳದ ಸಿದ್ದರಾಮಯ್ಯ ಅವರು ಅಮಾನತು ಮಾಡುವಂತೆ ಸೂಚನೆ ನೀಡಿದರು. ಈ ವೇಳೆ ಅಧಿಕಾರಿ ತಮ್ಮನ್ನು ಅಮಾನತು ಮಾಡದಂತೆ ಭಾವುಕರಾಗಿ ಕಣ್ಣೀರು ಹಾಕಿ ಮನವಿ ಮಾಡಿದರು, ಅದರು ಸಿದ್ದರಾಮಯ್ಯ ಅವರು ತಮ್ಮ ಸೂಚನೆಯನ್ನು ಹಿಂಪಡೆಯದೆ, ಯಾವುದೇ ಅಧಿಕಾರಿ ಸಹ ಮುಂದಿನ ದಿನಗಳಲ್ಲಿ ಕರ್ತವ್ಯ ಲೋಪ ಎಸಗಿದರೆ ಕಠಿಣ ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಅಂದ ಹಾಗೇ ನೀರು ಸರಬರಾಜು ಇಲಾಖೆ ಸಹಾಯಕ ಇಂಜಿನಿಯರ್ ವೆಂಕಟೇಶ್ ನಾಯಕ್ ಅವರು ಮೂಲತಃ ಮುಧೋಳ ತಾಲೂಕಿನ ಮಂಟೂರ ಗ್ರಾಮದರಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *