ಮಕ್ಕಳೆಂದರೆ ಎಲ್ಲಿಲ್ಲದ ಪ್ರೀತಿ – ಸಮಾಜ ಸೇವೆಯಲ್ಲೇ ನಿಸ್ವಾರ್ಥ ಜೀವನ

Public TV
1 Min Read

ಬೆಂಗಳೂರು: ಕೆಲವರು ಮಕ್ಕಳಾಗಲಿಲ್ಲ ಎಂದು ತಮ್ಮ ಜೀವನವನ್ನೇ ಶಪಿಸುತ್ತಾರೆ. ಆದರೆ ಇಲ್ಲೊಬ್ಬರು ಸಮಾಜ ಸೇವೆಯಲ್ಲೇ ತಮ್ಮ ಮಕ್ಕಳನ್ನು ಕಾಣುತ್ತಿದ್ದಾರೆ.

ನೆಲಮಂಗಲ ಪಟ್ಟಣ ನಿವಾಸಿ ಮುನೀರ್ ಪಾಷಾ ಮಕ್ಕಳಾಗಲಿಲ್ಲ ಎಂಬ ಒಂದೇ ಕಾರಣಕ್ಕೆ ಸಮಾಜ ಸೇವೆಯ ಮೂಲಕ ಮಕ್ಕಳನ್ನು ಕಾಣುತ್ತಿದ್ದಾರೆ.

ಅಪ್ಪಟ ದೇಶಾಭಿಮಾನಿ, ಪ್ರಾಣಿಪಕ್ಷಿ ಪ್ರಿಯರಾಗಿರುವ ಇವರು ತಾವು ಈ ಹಿಂದೆ ಕೆಲಸ ಮಾಡುತ್ತಿದ್ದ ಖಾಸಗಿ ಕಂಪನಿಗೆ ಗುಡ್‍ಬೈ ಹೇಳಿ ಸಮಾಜ ಸೇವೆಗೆ ಮುಂದಾಗಿದ್ದಾರೆ. ಯಾರೊಬ್ಬರಿಂದ ಒಂದು ರೂ. ಹಣ ಪಡೆಯದೆ ಸ್ವಂತ ಹಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲಾ ಸರ್ಕಾರಿ ಇಲಾಖೆ, ತಾಲೂಕು ಇಲಾಖೆ, ಆಸ್ಪತ್ರೆ, ತುರ್ತು ಸೇವೆಗಳ ಮಾಹಿತಿ, ಬ್ಯಾಂಕ್, ಅಂಚೆ ಕಛೇರಿ, ಗ್ಯಾಸ್ ಏಜೆನ್ಸಿ, ಮಾಧ್ಯಮ ಪ್ರತಿನಿಧಿಗಳ ಮಾಹಿತಿ, ಬ್ಲಡ್ ಬ್ಯಾಂಕ್‍ಗಳ ಮಾಹಿತಿ, ತುರ್ತು ಸಂದರ್ಭದ ಸಹಾಯದ ಮಾಹಿತಿಗಳು ಸೇರಿದಂತೆ ಪ್ರತಿನಿತ್ಯ ಜನ ಸಾಮಾನ್ಯರಿಗೆ ಅವಶ್ಯವಿರುವ ಎಲ್ಲಾ ಮಾಹಿತಿ ಮೊಬೈಲ್ ನಂಬರ್ ಗಳನ್ನು ಒಳಗೊಂಡ ಮಾಹಿತಿಯನ್ನು ಪ್ರತಿ ಮನೆ ಹಾಗೂ ಸಾರ್ವಜನಿಕರಿಗೆ ರವಾನಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ನಂಬರ್ ಗಳನ್ನೊಳಗೊಂಡ ಮಾಹಿತಿಯನ್ನು ಗೋಡೆಗಳಿಗೆ ಅಂಟಿಸಿ ನಾಗರಿಕರಿಗೆ ನೆರವಾಗಿದ್ದಾರೆ.

ರಾಷ್ಟ್ರೀಯ ಹಾಗೂ ನಾಡ ಹಬ್ಬಗಳ ಆಚರಣೆ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳಿಗೆ ತೆರಳಿ ಎಲ್ಲಾ ಶಾಲೆಯ ಮಕ್ಕಳಿಗೆ ದೇಶದ ಭಾವುಟ ಹಾಗೂ ಸಿಹಿಯನ್ನು ಹಂಚುವ ಮೂಲಕ ತಮ್ಮ ಜೀವನವನ್ನು ಕಳೆಯುತಿದ್ದಾರೆ. ಅಲ್ಲದೆ ರಾಷ್ಟ್ರೀಯ ಭಾವೈಕ್ಯತೆಯನ್ನ ಪ್ರತಿಯೊಬ್ಬರಲ್ಲೂ ಸಾರಿ ಯಾವುದೇ ಜಾತಿ, ಮತ, ಪಂಥ ಭೇದವಿಲ್ಲದೆ ವೃದ್ಧಾಪ್ಯದ ಕಾಲವನ್ನು ಕಳೆಯುತ್ತಿದ್ದಾರೆ.

ಪ್ರಾಣಿಪಕ್ಷಿ ಪ್ರಿಯರಾಗಿರುವ ಮುನೀರ್ ಪಾಷಾ, ಬೀದಿಯಲ್ಲಿ ಸಿಗುವ ನಾಯಿ, ಹಸು, ಕಾಗೆ ಮುಂತಾದವುಗಳಿಗೆ ಆಹಾರ ನೀಡಿ ತಮ್ಮ ಸುಖಃ ಜೀವನವನ್ನು ಸಮಾಜದೊಂದಿಗೆ ಕಳೆಯುತ್ತಿದ್ದಾರೆ. ಶಾಲಾ ಪುಟಾಣಿಗಳಲ್ಲಿ ಮುನೀರ್ ಅಂಕಲ್ ಎಂದೇ ಚಿರಪರಿಚಿತರಾಗಿರುವ ಇವರು ಶಾಲಾ ಆವರಣಕ್ಕೆ ಆಗಮಿಸುತ್ತಲೇ ವಿದ್ಯಾರ್ಥಿಗಳು ಸುತ್ತುವರಿದು ಪ್ರೀತಿ ಅಭಿಮಾನವನ್ನು ತೋರಿಸುತ್ತಾರೆ.

ಜಾತ್ಯಾತೀತತೆ ಎಂದು ಬೊಬ್ಬೆ ಹೊಡೆಯುವ ನಮ್ಮ ದೇಶದಲ್ಲಿ ಮುನೀರ್ ಪಾಷಾ ರಿಯಲ್ ಜಾತ್ಯಾತೀತ ಹೀರೋವಾಗಿ ಇಂದು ಹೊರಹೊಮ್ಮಿ ಉತ್ತಮ ಸಮಾಜಜೀವಿಯಾಗಿ ತಮ್ಮ ಇಳಿವಯಸ್ಸಿನ ಜೀವನವನ್ನು ಕಳೆಯುತ್ತಿದ್ದಾರೆ.

https://www.youtube.com/watch?v=jFSqATg29rY

Share This Article
Leave a Comment

Leave a Reply

Your email address will not be published. Required fields are marked *