ಮೊಬೈಲ್‍ನಲ್ಲಿ ಗೇಮ್ ಆಡ್ಬೇಡ ಅಂದಿದ್ದೆ ತಪ್ಪಾಯ್ತು – ಅಂಕಲ್‍ನನ್ನೇ ಇರಿದು ಕೊಲೆ ಮಾಡಿದ್ರು ಅಮ್ಮ, ಮಗ

Public TV
2 Min Read

ಬೆಂಗಳೂರು: ಸದಾ ಮೊಬೈಲ್ ಅಲ್ಲಿ ಗೇಮ್ ಆಡುತ್ತಾ ಕಾಲ ಕಳೆಯುತ್ತಿದ್ದ ಸ್ನೇಹಿತನ ಮಗನಿಗೆ ಬುದ್ಧಿವಾದ ಹೇಳಿದ್ದಕ್ಕೆ ಆ ಯುವಕ ತನ್ನ ತಾಯಿಯೊಂದಿಗೆ ಸೇರಿ ಆ ವ್ಯಕ್ತಿಯನ್ನು ಕೊಲೆ ಮಾಡಿರುವ ಘಟನೆ ನಗರದ ಸೋಲದೇವನ ಹಳ್ಳಿಯಲ್ಲಿ ನಡೆದಿದೆ.

ಬಷೀರ್ ಅಹಮ್ಮದ್ (47) ಕೊಲೆಯಾದ ವ್ಯಕ್ತಿಯಾಗಿದ್ದು, ರೋಷನ್ (20) ಹಾಗೂ ಆತನ ತಾಯಿ ಜೈನಾಬಿ (42) ಕೊಲೆ ಮಾಡಿದ ಆರೋಪಿಗಳು. ಸಣ್ಣ ವಿಚಾರಕ್ಕೆ ಕೊಲೆ ಮಾಡಿ ಅಮ್ಮ, ಮಗ ಇಬ್ಬರು ಪರಪ್ಪನ ಅಗ್ರಹಾರ ಜೈಲು ಸೇರಿದ್ದಾರೆ.

ಏನಿದು ಪ್ರಕರಣ?
ನಗರದ ಸೋಲದೇವನಹಳ್ಳಿಯಲ್ಲಿ ವಾಸಿಸುತ್ತಿದ್ದ ಬಷೀರ್ ಅಹಮ್ಮದ್ ಹಾಗೂ ಇಲಿಯಾಜ್ ಕಳೆದ 15 ವರ್ಷಗಳಿಂದ ಪ್ರಾಣ ಸ್ನೇಹಿತರು. ವಿಜಯಪುರ ಮೂಲದ ಬಷೀರ್ ರನ್ನು ಇಲಿಯಾಜ್ ತನ್ನ ಮನೆಯಲ್ಲೇ ಇಟ್ಟುಕೊಂಡು ಕೆಲಸ ಮಾಡುತ್ತಾ ಒಟ್ಟಿಗೆ ವಾಸಿಸುತ್ತಿದ್ದರು.

ಕಳೆದ ಜೂನ್ 30 ರಂದು ಇಲಿಯಾಜ್ ಕೆಲಸದ ನಿಮಿತ್ತ ಬೇರೊಂದು ಊರಿಗೆ ಹೋಗಿದ್ದು, ಈ ವೇಳೆ ಇಲಿಯಾಜ್ ಮಗ ರೋಷನ್ ಸದಾ ಮೊಬೈಲ್ ನಲ್ಲಿ ಗೇಮ್ ಆಡುವ ಹುಚ್ಚು ಬೆಳೆಸಿಕೊಂಡು ಕಾಲ ಕಳೆಯುವುದನ್ನು ಕಂಡು ಬುದ್ಧಿವಾದ ಹೇಳಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು, ಮಗ ರೋಷನ್ ಆತನ ತಾಯಿ ಜೈನಾಬಿ ಸೇರಿ ಬಷೀರ್ ರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು.

ಕೊಲೆ ಮಾಡಿ ನಾಪತ್ತೆ ದೂರು ದಾಖಲಿಸಿದ್ರು: ಬಷೀರ್ ನನ್ನು ಕೊಲೆ ಮಾಡಿದ ಆರೋಪಿಗಳು ಬಳಿಕ ಮೃತ ದೇಹವನ್ನು ಕಾರಿನಲ್ಲಿ ಮೈಸೂರಿನ ಕೆಆರ್ ನಗರದ ಬಳಿ ತೆಗೆದುಕೊಂಡು ಹೋಗಿ ನದಿಯೊಂದಕ್ಕೆ ಎಸೆದು ಬಂದಿದ್ದರು. ಆದರೆ ಇದಾದ ಎರಡು ದಿನದ ನಂತರ ಯಾರಿಗೂ ಅನುಮಾನ ಬರದೇ ಇರಲಿ ಎಂದು ತಾವೇ ಹೋಗಿ ಪೊಲೀಸ್ ಠಾಣೆಯಲ್ಲಿ ಬಷೀರ್ ನಾಪತ್ತೆಯಾಗಿದ್ದಾಗಿ ದೂರು ದಾಖಲಿಸಿದ್ದರು.

ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಸೋಲದೇವನಹಳ್ಳಿ ಠಾಣೆ ಪೊಲೀಸರು ಅಮ್ಮ ತನಿಖೆ ನಡೆಸಿದ್ದರು. ಪ್ರಕರಣದ ತನಿಖೆ ವೇಳೆ ಕೊಲೆಯಾದ ದಿನ ಆರೋಪಿ ರೋಷನ್ ಹಾಗೂ ಜೈನಾಬಿ ಮೊಬೈಲ್ ನೇಟ್ ವರ್ಕ್ ಲೋಕೇಷನ್ ಕೆಆರ್ ನಗರಕ್ಕೆ ಹೋಗಿದ್ದರ ಬಗ್ಗೆ ಸುಳಿವು ದೊರೆತಿತ್ತು. ಅಲ್ಲದೇ ಆರೋಪಿಗಳಿಬ್ಬರ ವರ್ತನೆ ಕಂಡು ಅನುಮಾನಗೊಂಡ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಕೊಲೆ ಮಾಡಿದ ಕುರಿತು ಬಾಯ್ಬಿಟ್ಟಿದ್ದಾರೆ.

ಸ್ನೇಹಿತ ಬಷೀರ್ ನನ್ನು ಸ್ವತಃ ಪುತ್ರ ಹಾಗೂ ಪತ್ನಿಯೇ ಕೊಲೆ ಮಾಡಿದ ವಿಷಯ ತಿಳಿದ ಇಲಿಯಾಜ್ ಶಾಕ್ ಆಗಿದ್ದು. ಕೊಲೆ ಮಾಡಿ ಸಿಕ್ಕಿಬಿದ್ದ ಆರೋಪಿಗಳು ಜೈಲು ಸೇರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *