ಚಿಕ್ಕೋಡಿಯಲ್ಲಿ ವರುಣನ ಆರ್ಭಟ – ದೇವಸ್ಥಾನಕ್ಕೆ ನುಗ್ಗಿದ ನೀರು, 6 ಸೇತುವೆಗಳು ಜಲಾವೃತ, ಉಕ್ಕಿ ಹರಿದ ಪಂಚಾನದಿ

Public TV
1 Min Read

ಬೆಳಗಾವಿ: ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ನದಿಗಳು ಉಕ್ಕಿ ಹರಿಯುತ್ತಿದೆ.

ಮಳೆಯಿಂದಾಗಿ ಚಿಕ್ಕೋಡಿ ತಾಲೂಕಿನ ಕಾರದಗಾ ಗ್ರಾಮದ ಗ್ರಾಮದೇವತೆ ಬಂಗಾಳಿ ಬಾಬಾ ದೇವಸ್ಥಾನ ಆವರಣದಲ್ಲಿ ನದಿ ನೀರು ನುಗ್ಗಿದೆ. ಈ ದೇವಸ್ಥಾನ ದೂದ ಗಂಗಾ ನದಿ ಸಮೀಪದಲ್ಲಿದೆ. ಕೊಲ್ಹಾಪುರ ಜಿಲ್ಲೆಯಲ್ಲಿ ಪ್ರಸಿದ್ಧ ದೇವಸ್ಥಾನ ನರಸಿಂಹವಾಡಿಯ ಗರ್ಭಗುಡಿ, ಪಂಚ ಗಂಗಾ ಮತ್ತು ಕೃಷ್ಣಾ ನದಿಯ ಸಂಗಮ ಸ್ಥಳದ ದೇವಸ್ಥಾನಕ್ಕೂ ನದಿ ನೀರು ನುಗ್ಗಿದೆ.

ಕೃಷ್ಣಾ ನದಿ ಹಾಗೂ ಉಪನದಿಗಳ ನೀರಿನ ಒಳ ಹರಿವಿನಲ್ಲಿ ಹೆಚ್ಚಳವಾಗಿದೆ. ಕೃಷ್ಣಾ, ದೂದಗಂಗಾ, ವೇದಗಂಗಾ ಹಾಗೂ ಪಂಚಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಕೃಷ್ಣಾ ಸೇರಿ ಉಪ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿರುವ ಒಟ್ಟು 6 ಸೇತುವೆಗಳು ಜಲಾವೃತಗೊಂಡಿವೆ. ಕೊಲ್ಲಾಪೂರ ಹಾಗೂ ಸಾಂಗಲಿ ಜಿಲ್ಲೆಯ ಸುಮಾರು 54 ಕೆಳ ಹಂತದ ಸೇತುವೆಗಳು ಜಲಾವೃತಗೊಂಡಿವೆ.

ಕೃಷ್ಣಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಲ್ಲೋಳ- ಯಡೂರು ಸೇತುವೆ, ವೇದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಕಾರದಗಾ-ಭೋಜ ಸೇತುವೆ, ಭೋಜವಾಡಿ-ಕುನ್ನೂರು, ಅಕ್ಕೋಳ-ಸಿದ್ನಾಳ, ಜತ್ರಾಟ-ಭಿವಶಿ ಮತ್ತು ದೂದಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ದತ್ತವಾಡ – ಮಲಿಕವಾಡ ಗ್ರಾಮಗಳ ಸೇತುವೆಗಳು ಜಲಾವೃತಗೊಂಡಿವೆ. ಇದರಿಂದ ಚಿಕ್ಕೋಡಿಯ 12 ಗ್ರಾಮದ ಜನರು ಪರ್ಯಾಯ ಮಾರ್ಗವಾಗಿ ಸಂಚಾರ ಮಾಡುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *