ಅಥರ್ವ ನಾಯಕ ಪವನ್ ತೇಜಾಗೆ ಅರ್ಜುನ್ ಸರ್ಜಾ ಹೇಳಿದ್ದ ಕಿವಿ ಮಾತೇನು?

Public TV
1 Min Read

ಬೆಂಗಳೂರು: ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಅರ್ಜುನ್ ಸರ್ಜಾ ಕುಟುಂಬದ ಚಿರಂಜೀವಿ ಸರ್ಜಾ, ಧೃವ ಸರ್ಜಾ ಮುಂತಾದವರು ನೆಲೆ ಕಂಡುಕೊಂಡಿದ್ದಾರೆ. ಇದೀಗ ಬಿಡುಗಡೆಗೆ ತಯಾರಾಗಿರುವ ಅಥರ್ವ ಚಿತ್ರದ ಮೂಲಕ ಅರ್ಜುನ್ ಸರ್ಜಾ ಅವರ ಮತ್ತೋರ್ವ ಅಳಿಯ ಪವನ್ ತೇಜಾ ಕೂಡಾ ಹೀರೋ ಆಗಿ ಹೊರ ಹೊಮ್ಮಲಿದ್ದಾರೆ. ಮಾವನ ಬುದ್ಧಿಮಾತುಗಳನ್ನು ಪರಿಪಾಲಿಸುತ್ತಾ ಹೀರೋ ಆಗುವ ಕನಸನ್ನು ನನಸು ಮಾಡಿಕೊಳ್ಳೋ ಹಾದಿಯಲ್ಲಿರೋ ಪವನ್ ತೇಜಾ ಆರಂಭ ಪ್ರಯತ್ನದಲ್ಲಿಯೇ ವಿಶಿಷ್ಟವಾದೊಂದು ಕಥೆಯ ಮೂಲಕ ಅನಾವರಣಗೊಳ್ಳುತ್ತಿದ್ದಾರೆ.

ಅರುಣ್ ನಿರ್ದೇಶನದ ಅಥರ್ವ ಚಿತ್ರವನ್ನು ರಕ್ಷಯ್ ಎಸ್.ವಿ ನಿರ್ಮಾಣ ಮಾಡಿದ್ದಾರೆ. ಮನುಷ್ಯ ಜೀವನದ ಆರಂಭ ಮತ್ತು ಅಂತ್ಯಗಳ ನಡುವಿನ ಯಾನದ ಕಥಾನಕ ಹೊಂದಿರೋ ಈ ಚಿತ್ರ ಈಗಾಗಲೇ ನಾನಾ ರೀತಿಯಲ್ಲಿ ಜನಮನ ಸೆಳೆದುಕೊಂಡಿದೆ. ಬಹುಶಃ ಪವನ್ ತೇಜಾ ಅರ್ಜೆಂಟು ಮಾಡಿದ್ದರೆ ಅದ್ಯಾವತ್ತೋ ಹೀರೋ ಆಗುತ್ತಿದ್ದರು. ಖುದ್ದು ಪವನ್ ಗೇ ಅಂಥಾದ್ದೊಂದು ಅವಸರ ಇತ್ತಂತೆ. ಆದರೆ ಅದನ್ನೆಲ್ಲ ತಡೆದುಕೊಂಡು ಸಂಪೂರ್ಣ ಕಸರತ್ತು ಮುಗಿಸಿಕೊಂಡೇ ಚಿತ್ರರಂಗಕ್ಕೆ ಬರುವಂತೆ ಮಾಡಿದ್ದು ಅವರ ಮಾವ ಅರ್ಜುನ್ ಸರ್ಜಾ ಅವರ ಬುದ್ಧಿಮಾತು!

ಸಿನಿಮಾ ವಾತಾವರಣದಲ್ಲಿಯೇ ಬೆಳೆದಿದ್ದ ಪವನ್ ಗೆ ಕಾಲೇಜು ದಿನಗಳಲ್ಲಿಯೇ ಹೀರೋ ಆಗುವ ತುಡಿತ ಇತ್ತಂತೆ. ಇದನ್ನು ತಡೆದುಕೊಳ್ಳಲಾಗದೆ ತನ್ನ ಮಾವ ಅರ್ಜುನ್ ಸರ್ಜಾ ಅವರ ಮುಂದೆ ಅದನ್ನು ಹೇಳಿಕೊಂಡಾಗ ಅವರಿಂದ ‘ಹೀರೋ ಆಗೋ ಕನಸು ಎಲ್ಲರಿಗೂ ಇರುತ್ತೆ. ಆದ್ರೆ ಅದಕ್ಕೆ ತಯಾರಿ ಬೇಕಾಗುತ್ತೆ. ಅಂಥಾ ತಯಾರಿ ಮಾಡಿಕೊಂಡು ಬಾ’ ಅಂದಿದ್ದರಂತೆ. ಆ ಕ್ಷಣದಿಂದಲೇ ನಾಟಕಗಳತ್ತ ಮುಖ ಮಾಡಿದ್ದ ಪವನ್ ರಂಗಭೂಮಿಯಲ್ಲಿ ಸಕ್ರಿಯರಾಗಿ ಇಪ್ಪತೈದಕ್ಕೂ ಹೆಚ್ಚು ಪ್ರದರ್ಶನಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡ ನಂತರವಷ್ಟೇ ಮಾವನ ಮಾತಿನಂತೆ ಹೀರೋ ಆಗಲು ಅಣಿಯಾಗಿದ್ದರಂತೆ.

ಇದೀಗ ಅರುಣ್ ಅವರ ವಿಶಿಷ್ಟ ಕಥೆ ಮತ್ತು ಚಾಲೆಂಜಿಂಗ್ ಆದ ಪಾತ್ರದ ಮೂಲಕ ಪವನ್ ನಾಯಕನಾಗಿ ಪ್ರೇಕ್ಷಕರ ಮುಂದೆ ಬರುವ ಸನ್ನಾಹದಲ್ಲಿದ್ದಾರೆ! ಇದೇ ಜುಲೈ 13ರಂದು ರಾಜ್ಯಾದ್ಯಂತ ಈ ಚಿತ್ರ ತೆರೆಗೆ ಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *