ಮೈತ್ರಿ ಸರ್ಕಾರಕ್ಕೆ ಸದನದಲ್ಲಿ ಸೆಡ್ಡು ಹೊಡೆಯಲು ಬಿಜೆಪಿ ಪ್ಲಾನ್!

Public TV
1 Min Read

ಬೆಂಗಳೂರು: ಅಧಿವೇಶನ ಆರಂಭಗೊಂಡ ಹಿನ್ನೆಲೆಯಲ್ಲಿ ಬಿಎಸ್ ಯಡಿಯೂರಪ್ಪನವರು ಸಮ್ಮಿಶ್ರ ಸರ್ಕಾರದ ವಿರುದ್ಧ ಪಕ್ಷದ ಹೋರಾಟ ಯಾವ ರೀತಿ ಇರಬೇಕು ಎನ್ನುವುದನ್ನು ಶಾಸಕರಿಗೆ ಹೇಳಿದ್ದಾರೆ.

ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಬಹುತೇಕ ಶಾಸಕರು ಭಾಗಿಯಾಗಿದ್ದರು. ಮಂಗಳವಾರದಿಂದ ಸದನದಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಹಿನ್ನೆಲೆಯಲ್ಲಿ ಮೈತ್ರಿ ಸರ್ಕಾರದ ವಿರುದ್ದ ಯಾವೆಲ್ಲಾ ವಿಚಾರಗಳನ್ನು ಪ್ರಸ್ತಾಪಿಸಬೇಕೆಂಬ ಮಹತ್ವದ ಚರ್ಚೆ ನಡೆಸಲಾಯಿತು ಅಲ್ಲದೇ ನೂತನ ಶಾಸಕರಿಗೆ ಸದನದಲ್ಲಿ ಪಕ್ಷವನ್ನು ಹೇಗೆ ಸಮರ್ಥಿಸಿಕೊಳ್ಳಬೇಕು ಎನ್ನುವುದನ್ನು ಬಿಎಸ್‍ವೈ ಸಲಹೆ ನೀಡಿದರು ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿದೆ.

ಕಾಂಗ್ರೆಸ್ ನಿಂದ ಬಿಜೆಪಿ ಶಾಸಕರ ಸಂಪರ್ಕದ ಬಗ್ಗೆ ಚರ್ಚೆ ನಡೆಸಿದರು. ನಮ್ಮ ಐದಾರು ಶಾಸಕರನ್ನ ಕಾಂಗ್ರೆಸ್ ನವರು ಸಂಪರ್ಕ ಮಾಡಿರೋದು ನನಗೆ ಗೊತ್ತಾಗಿದೆ. ನಮ್ಮ ಶಾಸಕರು ಎಲ್ಲೂ ಹೋಗಲ್ಲ ಅನ್ನೋದು ಗೊತ್ತಿದೆ. ಆದರೂ ನಾವು ಹುಷಾರಾಗಿರೋದು ಒಳ್ಳೆಯದು ಎಂದು ಶಾಸಕರಿಗೆ ಬಿಎಸ್‍ವೈ ಕಿವಿಮಾತು ಹೇಳಿದರು.

ಈ ಸಂದರ್ಭದಲ್ಲಿ ನೂತನ ಶಾಸಕರಿಗೆ ಕ್ಲಾಸ್ ತೆಗೆದುಕೊಂಡ ಯಡಿಯೂರಪ್ಪ, ಹೆಚ್ಚು ಕಲಾಪದಲ್ಲಿ ಪಾಲ್ಗೊಳ್ಳಿ, ಸಾಧ್ಯವಾದಷ್ಟು ಸದನದಲ್ಲಿ ಕುಳಿತುಕೊಳ್ಳುವುದು ಅಭ್ಯಾಸ ಮಾಡಿಕೊಳ್ಳಿ. ರಮೇಶ್ ಕುಮಾರ್ ಸ್ಪೀಕರ್ ಆಗಿರುವ ಕಾರಣ ಹೊಸಬರಿಗೆ ಅವಕಾಶ ಕೊಡುತ್ತಾರೆ. ಸದನಕ್ಕೆ ಬರುವಾಗ ವಿಷಯದ ಬಗ್ಗೆ ಅಧ್ಯಯನ ಮಾಡಿಕೊಂಡು ಬನ್ನಿ. ಕೇವಲ ನಿಮ್ಮ ನಿಮ್ಮ ಕ್ಷೇತ್ರದ ಸಮಸ್ಯೆಗಳಿಗೆ ಮಾತ್ರ ಸೀಮಿತವಾಗದೇ, ನಿಮ್ಮ ಕ್ಷೇತ್ರದಾಚೆಗೂ ಅಧ್ಯಯನ ಮಾಡಿಕೊಂಡು ಸದನದಲ್ಲಿ ಮಾತನಾಡಿ ಎಂದು ಕಿವಿಮಾತು ಹೇಳಿದರು.

ಸಭೆ ಬಳಿಕ ಮಾತನಾಡಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ರಾಜ್ಯ ಸರ್ಕಾರ ಬಜೆಟ್ ಮಂಡನೆ ಮಾಡಲಿ. ಬಜೆಟ್ ನಲ್ಲಿ ಘೋಷಣೆಯಾಗುವ ಅಂಶಗಳನ್ನು ಗಮನಿಸಿ ಹೋರಾಟ ನಿರ್ಧಾರದ ಬಗ್ಗೆ ಚರ್ಚೆಯಾಗಿದೆ. ನಮ್ಮ ಪಾತ್ರವನ್ನೂ ಸದನದಲ್ಲಿ ಡಿ.ಕೆ.ಶಿವಕುಮಾರ್ ನಿರ್ವಹಿಸುತ್ತಿದ್ದಾರೆ ಎಂದು ಜಲಸಂಪನ್ಮೂಲ ಸಚಿವರಿಗೆ ಟಾಂಗ್ ನೀಡಿದರು. ಅವರು ಹೇಳಿದಂತೆ ನಾವಿನ್ನೂ ಟೇಕಾಫ್ ಆಗಿಲ್ಲ. ಆದರೆ ನಾವು ಟೇಕಾಫ್ ಆದ ದಿನ ಅವರು ರೂಲಿಂಗ್ ಪಾರ್ಟಿಯಲ್ಲಿ ಉಳಿಯಲ್ಲ ಎಂದು ವ್ಯಂಗ್ಯವಾಡಿದರು.

Share This Article
Leave a Comment

Leave a Reply

Your email address will not be published. Required fields are marked *