ಸ್ವಾತಂತ್ರ್ಯ ಕಾಶ್ಮೀರ, ಮುಷರಫ್ ಹೇಳಿಕೆಗೆ ಬೆಂಬಲ ನೀಡಿದ ಕಾಂಗ್ರೆಸ್ ಮಾಜಿ ಕೇಂದ್ರ ಸಚಿವ

Public TV
2 Min Read

ನವದೆಹಲಿ: ಕಾಶ್ಮೀರ ಸ್ವಾತಂತ್ರ್ಯ ನೀಡುವ ವಿಚಾರದಲ್ಲಿ ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ ನೀಡಿದ್ದ ಹೇಳಿಕೆಗೆ ಕಾಂಗ್ರೆಸ್‍ನ ಮಾಜಿ ಕೇಂದ್ರ ಸಚಿವ ಸೈಫುದ್ದೀನ್ ಸೋಜ್ ಬೆಂಬಲ ನೀಡಿ ಸಮರ್ಥನೆ ನೀಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಸೈಫುದ್ದೀನ್, ಕಾಶ್ಮೀರಕ್ಕೆ ಸ್ವಾತಂತ್ರ್ಯ ನೀಡುವ ವಿಚಾರದಲ್ಲಿ ಮುಷರಫ್ ಸರಿಯಾದ ಹೇಳಿಕೆ ನೀಡಿದ್ದಾರೆ. ಅವರು ಕಾಶ್ಮೀರವನ್ನು ಭಾರತ ಅಥವಾ ಪಾಕಿಸ್ತಾನಕ್ಕೆ ಸೇರುವ ಬದಲು ಸ್ವಾತಂತ್ರ್ಯ ನೀಡಲು ಬಯಸಿದ್ದರು. 2007 ರಲ್ಲಿ ಮುಷರಫ್ ಕಾಶ್ಮೀರದ ಸಮಸ್ಯೆ ಬಗೆಹರಿಸುವ ಕುರಿತು ತಮ್ಮ ಸಲಹೆಗಳನ್ನು ಪಾಕಿಸ್ತಾನದ ಅಧಿಕಾರಿಗಳ ಮುಂದಿಟ್ಟಿದ್ದರು ಎಂದು ಹೇಳಿದ್ದಾರೆ.

ಸದ್ಯ ಸೈಫುದ್ದೀನ್ ಅವರ `ಕಾಶ್ಮೀರ ಗ್ಲಿಂಪ್ಸಸ್ ಆಫ್ ಹಿಸ್ಟರಿ ಹಾಗೂ ಸ್ಟೋರಿ ಆಫ್ ಸ್ಟ್ರಗಲ್’ ಪುಸ್ತಕ ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿದ್ದು, ಈ ಹಿನ್ನೆಲೆ ಮುಷರಫ್ ಅವರ ಹೇಳಿಕೆಗೆ ಸಮರ್ಥನೆ ನೀಡಿದ್ದು ತೀವ್ರ ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಸೈಫುದ್ದೀನ್ ನೀಡಿರುವ ಹೇಳಿಕೆಗೆ ಶಿವಸೇನೆ ಸೇರಿದಂತೆ ಹಲವು ಪಕ್ಷಗಳ ನಾಯಕರು ಕಿಡಿಕಾರಿದ್ದಾರೆ.

ಮುಷರಫ್ ಏನು ಹೇಳಿದ್ದರು?
ಒಂದು ವೇಳೆ ಕಾಶ್ಮೀರ ಜನರಿಗೆ ಅವಕಾಶ ಲಭಿಸಿದರೆ ಅವರು ಪಾಕಿಸ್ತಾನಕ್ಕೆ ಸೇರುವುದಿಲ್ಲ, ಅಲ್ಲದೇ ಸ್ವಾತಂತ್ರವಾಗಿರಲು ಬಯಸುತ್ತಾರೆ. ಕಾಶ್ಮೀರ ಸಮಸ್ಯೆ ಬಗೆ ಹರಿಸಲು ಇರುವುದು ಇದು ಒಂದೇ ಮಾರ್ಗ ಎಂದು 2007 ರಲ್ಲಿ ಹೇಳಿದ್ದರು.

ಸದ್ಯ ಸೈಫುದ್ದೀನ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಶಿವಸೇನಾ ನಾಯಕಿ ಮನಿಷಾ ಕಯಾಂಡೆ, ಎಐಸಿಸಿ ಅಧ್ಯಕ್ಷರು ಸೈಫುದ್ದೀನ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಬೇಕು, ಅಲ್ಲದೇ ಪಾಕಿಸ್ತಾನ ಹಾಗೂ ಮುಷರಫ್ ಬಗ್ಗೆ ಅವರು ಅಷ್ಟು ಕಳಜಿ ಹೊಂದಿದ್ದರೆ, ಅವರು ವಲಸೆ ಹೋಗಿ ಗುಲಾಮರಾಗಬಹುದು ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ ಅವರು ಕಾಂಗ್ರೆಸ್ ಹೇಳಿಕೆ ವಿರುದ್ಧ ಕಿಡಿಕಾರಿದ್ದು, ಕೇಂದ್ರ ಮಂತ್ರಿಯಾಗಿ ಸೈಫುದ್ದೀನ್ ಸೋಜ್ ತಮ್ಮ ಮಗಳನ್ನು ಜೆಕೆಎಲ್‍ಎಫ್ ನಿಂದ ಅಪಹರಿಸಲ್ಪಟ್ಟಾಗ ಕೇಂದ್ರದ ಅಧಿಕಾರದಿಂದ ಪ್ರಯೋಜನ ಪಡೆದಿದ್ದಾರೆ. ಆದರೆ ತಮ್ಮ ಅಧಿಕಾರದ ಅವಧಿಯಲ್ಲಿ ಅಲ್ಲಿನ ಜನರಿಗೆ ಯಾವುದೇ ಸಹಾಯ ಮಾಡಿಲ್ಲ. ಭಾರತದಲ್ಲಿ ಇರಲು ಇಚ್ಛಿಸುವವರು ಸಂವಿಧಾನ ಪಾಲಿಸಬೇಕು, ಇಲ್ಲವಾದರೆ ಅವರಿಗೆ ಪಾಕಿಸ್ತಾನಕ್ಕೆ ತೆರಳಲು ಟಿಕೆಟ್ ನೀಡಬೇಕು ಎಂದು ತಿರುಗೇಟು ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *