ಕುಂತ್ರು ನಿಂತ್ರು ಬಿಡಂಗಿಲ್ಲ, ಊಟನೂ ತಿನ್ನಂಗಿಲ್ಲ- ಮುಳಬಾಗಿಲು ಜನತೆಗೆ ಮುಕ್ತಿ ಎಂದು?

Public TV
1 Min Read

ಕೋಲಾರ: `ಈಗ’ ಸಿನಿಮಾದಲ್ಲಿ ನೊಣದ ಕಾಟವನ್ನು ಸುದೀಪ್ ಎದುರಿಸಿದಂತೆ ಸದ್ಯ ಕೋಲಾರ ಜಿಲ್ಲೆ ಮುಳಬಾಗಿಲು ತಾಲೂಕಿನ ಯಳಗೊಂಡಹಳ್ಳಿ ಜನರು ಎದುರಿಸುತ್ತಿದ್ದಾರೆ.

ಕಳೆದ ಹದಿನೈದು ದಿನಗಳಿಂದ ಜನರು ರಾತ್ರಿ ನಿದ್ದೆ ಮಾಡುತ್ತಿಲ್ಲ, ಕೂತಲ್ಲಿ ಕೂರುತ್ತಿಲ್ಲ, ನಿಂತಲ್ಲಿ ನಿಲ್ಲುತ್ತಿಲ್ಲ. ಮನೆ ಬಾಗಿಲನ್ನು ತಗೆದು ಒಳಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ನೊಣಗಳ ದಾಳಿಯಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಒಂದು ಕಡೆ ಕುಳಿತು ಊಟ ಮಾಡುವಂತಿಲ್ಲಾ, ನೀರು ಕುಡಿಯುವಂತಿಲ್ಲ. ಮನೆಯಿಂದ ಹೊರಗೆ ಬಂದರೆ ಸಾಕು, ಲಕ್ಷಾಂತರ ನೊಣಗಳು ಜನರ ಮೇಲೆ ದಾಳಿ ಮಾಡುತ್ತವೆ. ಅಡುಗೆ ಮನೆಯಲ್ಲೂ ಸಹ ನೊಣಗಳ ಕಾಟ ಹೆಚ್ಚಾಗಿದೆ.

ಸಮಯಕ್ಕೆ ಸರಿಯಾಗಿ ಊಟ ನಿದ್ದೆಯಿಲ್ಲದೆ ಗ್ರಾಮಸ್ಥರು ಅಸ್ವಸ್ಥಗೊಂಡಿದ್ದಾರೆ. ನೊಣಗಳ ದಾಳಿಯಿಂದ ಏನೆಲ್ಲಾ ರೋಗ ಬರುತ್ತದೋ ಎನ್ನುವ ಭೀತಿಯನ್ನು ಗ್ರಾಮಸ್ಥರು ಎದುರಿಸುತ್ತಿದ್ದಾರೆ. ಸದ್ಯ ಗ್ರಾಮದ ಕೆಲವರು ವಿವಿಧ ಕಾಯಿಗಳಿಗೆ ತುತ್ತಾಗಿದ್ದು, ಮತ್ತಷ್ಟು ಆತಂಕದ ವಾತಾವರಣ ನಿರ್ಮಾಣವಾಗಿದೆ.

ನೋಣ ಹೆಚ್ಚಾಗಿದ್ದು ಏಕೆ:
ನೊಣಗಳ ಕಾಟ ಹೆಚ್ಚಾಗಲು ಕಾರಣ ಗ್ರಾಮದ ಬಳಿಯ ಆರ್.ವಿ.ಬ್ರೀಡಿಂಗ್ ಕೋಳಿ ಫಾರ್ಮ್. ಈ ಕುರಿತು ಕೋಳಿ ಫಾರ್ಮ್ ಮಾಲೀಕರಿಗೆ ತಿಳಿಸಿದ್ದರೂ ಅವರು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇಷ್ಟೇ ಅಲ್ಲದೇ ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯ್ತಿಗೆ ದೂರು ಕೊಟ್ಟಿದ್ದೇವೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಒಂದು ವೇಳೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಕೋಳಿ ಫಾರ್ಮ್ ಮಾಲೀಕರು ಕ್ರಮ ಕೈಗೊಳ್ಳದಿದ್ದರೆ, ಬಲವಂತವಾಗಿ ಕೋಳಿ ಫಾರ್ಮ್ ಅನ್ನು ಖಾಲಿ ಮಾಡಿಸಬೇಕಾಗುತ್ತದೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *