ಸೋದರ ಮಾವನಿಂದಲೇ ಅವಳಿ ಮಕ್ಕಳ ಹತ್ಯೆ!

Public TV
1 Min Read

ಹೈದರಾಬಾದ್: ಇಬ್ಬರು ಬುದ್ಧಿಮಾಂದ್ಯ ಮಕ್ಕಳನ್ನು ಸೋದರಮಾವನೇ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಹೈದರಾಬಾದ್‍ನ ಚೈತನ್ಯಪುರಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

12 ವರ್ಷದ ಸೃಜನಾ ರೆಡ್ಡಿ ಹಾಗೂ ವಿಷ್ಣುವರ್ಧನ ರೆಡ್ಡಿ ಕೊಲೆಯಾದ ಅವಳಿ ಮಕ್ಕಳು. ಶುಕ್ರವಾರ ಅವಳಿ ಮಕ್ಕಳನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ತನ್ನ ಸೋದರ ಮಾವನೇ ಮಕ್ಕಳನ್ನು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಏನಿದು ಪ್ರಕರಣ?
ಮಲ್ಲಿಕಾರ್ಜುನ ರೆಡ್ಡಿಯು ಹೈದರಾಬಾದ್‍ನ ಚೈತನ್ಯಪುರದ ಬಾಡಿಗೆ ಮನೆಯ ವಾಸಿಯಾಗಿದ್ದು, ಶುಕ್ರವಾರ ತನ್ನ ತಂಗಿ ಮಕ್ಕಳನ್ನು ಈಜು ಕಲಿಸುವುದಾಗಿ ಹೇಳಿ ನಲ್ಗೋಂಡ ಜಿಲ್ಲೆಯಿಂದ ಕರೆದುಕೊಂಡು ಬಂದಿದ್ದಾನೆ. ಮನೆಗೆ ಬಂದ ಮಕ್ಕಳನ್ನು ತನ್ನ ಸ್ನೇಹಿತ, ಮನೆಯಲ್ಲಿದ್ದ ಜೊತೆಗಾರ ಟ್ಯಾಕ್ಸಿ ಚಾಲಕನೊಂದಿಗೆ ಸೇರಿ ಹತ್ಯೆ ಮಾಡಿದ್ದಾನೆ. ಇಂದು ಬೆಳಗ್ಗೆ ಮಕ್ಕಳ ಮೃತದೇಹವನ್ನು ಕಾರಿನಲ್ಲಿ ಸಾಗಿಸುವಾಗ ಮನೆಯ ಮಾಲೀಕ ಗಮನಿಸಿ ಪೊಲೀಸರಿಗೆ ಸುದ್ದಿ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಪೊಲೀಸರು ಹತ್ಯೆಯ ಹಿಂದೆ ಪೋಷಕರ ಕೈವಾಡ ಶಂಕೆ ವ್ಯಕ್ತವಾಗಿ ಲಕ್ಷ್ಮೀ ಹಾಗೂ ಶ್ರೀನಿವಾಸ್‍ರವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆ ತನ್ನ ಅಣ್ಣ ಈಜು ಕಲಿಸುವ ಸಲುವಾಗಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದಾನೆ. ಇಬ್ಬರೂ ಅವಳಿ ಮಕ್ಕಳಾಗಿದ್ದು ಹುಟ್ಟಿನಿಂದಲೂ ಬುದ್ಧಿಮಾಂದ್ಯರಾಗಿದ್ದರು, ಅಲ್ಲದೇ ಇಬ್ಬರಿಗೂ ಮಾತು ಸಹ ಬರುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಪೊಲೀಸರು, ಶನಿವಾರ ಬೆಳಗ್ಗೆ ಮಕ್ಕಳ ಹತ್ಯೆ ಕುರಿತು ಆರೋಪಿ ಮಲ್ಲಿಕಾರ್ಜುನ ರೆಡ್ಡಿ ಹಾಗೂ ಕೃತ್ಯಕ್ಕೆ ಸಹಾಯ ಮಾಡಿದ ಟ್ಯಾಕ್ಸಿ ಚಾಲಕನನ್ನು ಬಂಧಿಸಿದ್ದೇವೆ. ಕೃತ್ಯದಲ್ಲಿ ಆರೋಪಿ ತಂಗಿಯ ಕೈವಾಡ ಶಂಕೆ ವ್ಯಕ್ತವಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿಯ ನಂತರ ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *