ಹಸ್ತಕ್ಷೇಪ ಮಾಡಿಲ್ಲ, ನನ್ನನ್ನು ಬ್ಲಾಕ್‍ಮೇಲ್ ಮಾಡಿದ್ರೆ ಹೆದರಿ ಓಡಿಹೋಗಲ್ಲ : ಡಿಕೆಶಿ ವಿರುದ್ಧ ರೇವಣ್ಣ ಪರೋಕ್ಷ ವಾಗ್ದಾಳಿ

Public TV
1 Min Read

ಹಾಸನ: ಸರ್ಕಾರದ ಇತರೇ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡಿದರೆ ನೇರವಾಗಿ ಕರೆದು ಮಾತನಾಡಲಿ. ನನ್ನನ್ನು ಬ್ಲಾಕ್ ಮೇಲ್ ಮಾಡಿದರೆ ಹೆದರಿ ಓಡಿ ಹೋಗಲ್ಲ ಎಂದು ಲೋಕೋಪಯೋಗಿ ಸಚಿವ ಹೆಚ್‍ಡಿ ರೇವಣ್ಣ ಗರಂ ಆಗಿಯೇ ಹೇಳಿಕೆ ನೀಡಿದ್ದಾರೆ.

ನಗರದಲ್ಲಿ ಅಧಿಕಾರಿಗಳ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನಗೂ ಸ್ವಾಭಿಮಾನ ಇದೆ. ಇಂಥ ಸುಳ್ಳು ಆರೋಪದಿಂದ ನಾನು ಹೆದರಿ ಓಡಿ ಹೋಗಲ್ಲ. ನಾನು ಬೇರೆ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿದ್ದೇನೆ ಎಂಬ ಬಗ್ಗೆ ಮಾಹಿತಿ ಇದ್ದರೆ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ ಅಥವಾ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ಕರೆದು ಮಾತನಾಡಬಹುದು ಎಂದು ಹೇಳಿದರು.

ಇದೇ ವೇಳೆ ಸ್ವತಃ ಸಚಿವ ಡಿಕೆ ಶಿವಕುಮಾರ್ ಅವರಿಗೂ ಸವಾಲು ಎಸೆದ ಅವರು, ಸ್ವತಃ ಡಿಕೆಶಿ ಅವರೇ ಕರೆದು ನೇರವಾಗಿ ಮಾತನಾಡಲಿ. ಮುಖಾಮುಖಿ ಸ್ಪಷ್ಟನೆ ನೀಡಲು ನಾನು ಸಿದ್ಧನಿದ್ದೇನೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ನನ್ನ ಹೆಸರು ಜೋರಾಗಿಯೇ ಓಡುತ್ತಿದೆ. ಹೀಗಾಗಿ ಮಾಧ್ಯಮದವರು ಸುಖಾಸುಮ್ಮನೆ ಏನೇನೋ ಹೇಳುತ್ತಿದ್ದಾರೆ. ಈ ಸರಕಾರ ಚೆನ್ನಾಗಿ ನಡೆಯಬಾರದು ಎಂದು ಹೀಗೆಲ್ಲಾ ಮಾಡಲಾಗುತ್ತಿದೆ ಎಂದು ಮಾಧ್ಯಮದತ್ತಲೇ ಬೊಟ್ಟು ಮಾಡಿದರು. ರಾಜ್ಯದಲ್ಲಿ ಕೋಮುವಾದಿ ಶಕ್ತಿ ಅಧಿಕಾರಕ್ಕೆ ಬರಬಾರದು ಎಂದು ದೇವೇಗೌಡರು ಜಾತ್ಯಾತೀತ ಪಕ್ಷದ ಕೈಜೋಡಿಸಿದ್ದಾರೆ. ಅದಕ್ಕೆ ಬದ್ಧರಾಗಿ ಎಲ್ಲರೂ ನಡೆದು ಕೊಂಡು ಹೋಗಬೇಕು ಎಂದು ರೇವಣ್ಣ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *