ಶೂಟ್ ಮಾಡ್ಕೋಂಡು ಆತ್ಮಹತ್ಯೆಗೆ ಶರಣಾದ ಆಧ್ಯಾತ್ಮಿಕ ಗುರು!

Public TV
1 Min Read

ಭೋಪಾಲ್: ವಿವಾದಾತ್ಮಕ ದೇವಮಾನವ ಹಾಗೂ ಆಧ್ಯಾತ್ಮಿಕ ಗುರು ಬಯ್ಯೂಜಿ ಮಹಾರಾಜ್‍ರವರು ಇಂದು ಮಧ್ಯಾಹ್ನ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದಿದೆ.

ಇಂದು ಮಧ್ಯಾಹ್ನ ಬಯ್ಯೂಜಿ ಮಹಾರಾಜ್ ತನ್ನ ನಿವಾಸದಲ್ಲಿ ತಲೆಗೆ ಗುಂಡಿಕ್ಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಅವರನ್ನು ಇಂದೋರ್ ನ ಸ್ಥಳೀಯ ಬಾಂಬೆ ಆಸ್ಪತ್ರೆಗೆ ದಾಖಲಿಸಲಾಯಿತು. ತೀವ್ರ ಗಾಯಗೊಂಡ ಹಿನ್ನೆಲೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾರಾಷ್ಟ್ರ ಮತ್ತು ಮಧ್ಯ ಪ್ರದೇಶಗಳಲ್ಲಿ ಹೆಚ್ಚು ಜನಪ್ರಿಯರಾಗಿದ್ದು ಅನೇಕ ಗಣ್ಯರಿಗೆ ಆಧ್ಯಾತ್ಮಿಕ ಗುರುಗಳಾಗಿದ್ದರು. ಘಟನೆ ತಿಳಿಯುತ್ತಿದ್ದಂತೆ ಅಪಾರ ಭಕ್ತರು ಆಸ್ಪತ್ರೆ ಮುಂದೆ ಜಮಾಯಿಸಿದ್ದಾರೆ.

ಇಂದೋರ್ ನಲ್ಲಿ ಆಶ್ರಮ ನಡೆಸುತ್ತಿದ್ದು, ಅನೇಕ ಗಣ್ಯರು ಇವರ ಅನುಯಾಯಿಗಳಾಗಿದ್ದರು. ಮಹಾರಾಷ್ಟ್ರದ ಮುಖ್ಯಮಂತ್ರಿಯಾದ ದೇವೇಂದ್ರ ಫಡ್ನವಿಸ್ ಹಾಗೂ ಬಾಲಿವುಡ್‍ನ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಕೂಡ ಇವರ ಅನುಯಾಯಿಗಳಾಗಿದ್ದಾರೆ.

ಕಳೆದ ವರ್ಷ ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಗುರೂಜಿಗೆ ಸಚಿವ ಸ್ಥಾನದ ಬೇಡಿಕೆಯನ್ನು ನೀಡಿದ್ದರು. ಆದರೆ ಬಯ್ಯೂಜಿಯವರು ಅದನ್ನು ತಿರಸ್ಕರಿಸಿದ್ದರು.

ಬಯ್ಯೂಜಿ ಮಹಾರಾಜರ ಮೂಲ ಹೆಸರು ಉದಯ್ ಸಿಂಗ್ ದೇಶ್‍ಮುಖ್ ಆಗಿದೆ. ಕೌಟುಂಬಿಕ ಕಲಹದಿಂದಾಗಿ ಇವರು ಹೆಚ್ಚಿನ ಒತ್ತಡ ಹಾಗೂ ಖಿನ್ನತೆಗೆ ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಇಂದೋರ್ ನ ಪೊಲೀಸ್ ಆಯುಕ್ತರಾದ ಹೆಚ್ ಸಿ ಮಿಶ್ರ ಶಂಕೆ ವ್ಯಕ್ತಪಡಿಸಿದ್ದಾರೆ.

ಆತ್ಮಹತ್ಯೆಗೂ ಮುಂಚೆ 1.57ರಲ್ಲಿ ಟ್ಟಿಟ್ಟರ್‍ನಲ್ಲಿ ತಮ್ಮ ಅಭಿಮಾನಿಗಳಿಗೆ ಶಿವರಾತ್ರಿಯ ಶುಭಾಶಯವನ್ನು ಕೋರಿದ್ದಾರೆ. ಅಣ್ಣಾ ಅಜಾರೆಯವರು ನಡೆಸಿದ ಭ್ರಷ್ಟಾಚಾರದ ವಿರುದ್ಧದ ಪ್ರತಿಭಟನೆಯಲ್ಲಿ ಬಯ್ಯೂಜಿಯವರು ಸಕ್ರೀಯವಾಗಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *