ಶಿರೂರುಶ್ರೀಗಳ ಹುಟ್ಟುಹಬ್ಬಕ್ಕೆ ಶಿವಮಣಿ ಡ್ರಮ್ ಬೀಟ್- ಸಂಗೀತ ಗುರುಕುಲಕ್ಕೆ ಶಂಕುಸ್ಥಾಪನೆ

Public TV
2 Min Read

ಉಡುಪಿ: ಇಲ್ಲಿನ ಶಿರೂರು ಮಠಾಧೀಶ ಲಕ್ಷ್ಮೀವರ ತೀರ್ಥ ಸ್ವಾಮೀಜಿ ತನ್ನ ಜನ್ಮ ನಕ್ಷತ್ರವನ್ನು ವಿಭಿನ್ನವಾಗಿ ಆಚರಿಸಿಕೊಂಡರು. ವಿಶ್ವದ ಖ್ಯಾತ ಡ್ರಮ್ಮರ್ ಶಿವಮಣಿ ಮಠಕ್ಕೆ ಬಂದು ಸ್ವಾಮೀಜಿಯ ಜನ್ಮನಕ್ಷತ್ರದಲ್ಲಿ ಪಾಲ್ಗೊಂಡರು.

ಉಡುಪಿಯ ಕೃಷ್ಣಮಠದ ಅಧೀನದಲ್ಲಿರುವ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ ಅವರು ಧಾರ್ಮಿಕ ಕಾರ್ಯಕ್ರಮದ ಜೊತೆ ಸಾಂಸ್ಕೃತಿಕವಾಗಿಯೂ ತೊಡಗಿಸಿಕೊಂಡವರು. ಈ ಬಾರಿಯ ತನ್ನ ಹುಟ್ಟು ಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡರು. ಡ್ರಮ್ಸ್ ಮಾಂತ್ರಿಕ ಶಿವಮಣಿಯೇ ಮಠಕ್ಕೆ ಬಂದು ಮುಖ್ಯಪ್ರಾಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸ್ವಾಮೀಜಿಗೆ ಅಮೆರಿಕದಿಂದ ತಂದ ವಾಚನ್ನು ಗಿಫ್ಟ್ ಮಾಡಿದ್ರು. ಶಿರೂರು ಮಠದ ಆವರಣದಲ್ಲಿ ಶಿವಮಣಿಯ ನೇತೃತ್ವದಲ್ಲಿ ಆರಂಭವಾಗಲಿರುವ ಡ್ರಮ್ಸ್ ತರಬೇತಿ ಕೊಡುವ ಗುರುಕುಲಕ್ಕೆ ಅಡಿಗಲ್ಲು ಹಾಕಿದ್ದಾರೆ.

ಮಠಕ್ಕೆ ಆಗಮಿಸಿದ ಶಿವಮಣಿ ಸುಮಾರು ಅರ್ಧಗಂಟೆಗಳ ಕಾಲ ಡ್ರಮ್ಸ್ ಬಾರಿಸಿದರು. ಭಾರತದ ಹಲವು ರಾಜ್ಯಗಳ ಬೀಟ್ಗಳನ್ನು ನುಡಿಸಿದರು. ಶಿರೂರು ಸ್ವಾಮೀಜಿ ಶಿವಮಣಿಯ ಬೀಟ್ ಗೆ ಸಾಥ್ ನೀಡಿದರು. ಸ್ವಾಮೀಜಿಗೆ ಶಿವಮಣಿ ಶುಭಕೋರಿದರು. ಆಂಜನೇಯನ ಸನ್ನಿಧಿಯಲ್ಲಿ ಕಲಾ ಪ್ರದರ್ಶನ ಮಾಡಿದ್ದು ಪುಣ್ಯದ ಕೆಲಸ ಅಂತ ಹೇಳಿದರು.

ಡ್ರಮ್ಮರ್ ಶಿವಮಣಿ ಈ ಸಂದರ್ಭ ಮಾತನಾಡಿ, ಸ್ವಾಮೀಜಿಗೆ ಶುಭಾಷಯ. ಆಂಜನೇಯ ಸ್ವಾಮೀಜಿ ಮುಂದೆ ನಾನು ಕಾರ್ಯಕ್ರಮ ಕೊಟ್ಟದ್ದು ಬಹಳ ಖುಷಿಯಾಗಿದೆ. ಸ್ವಾಮೀಜಿ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು. ಸಂಗೀತ ಗುರುಕುಲ ಸ್ವಾಮೀಜಿಯ ಕನಸು. ಅದನ್ನು ಆದಷ್ಟು ಬೇಗ ಸಾಕಾರ ಮಾಡುತ್ತೇನೆ. ನನ್ನ ಡ್ರಮ್ಮರ್ ಗಳ ತಂಡ ಇಲ್ಲೇ ಇದ್ದು ಶಾಲೆಯನ್ನು ನಡೆಸುತ್ತದೆ. ನಾನು ಕೂಡಾ ಆಗಾಗ ಬಂದು ಪಾಠ ಮಾಡುತ್ತೇನೆ. ಸಂಗೀತ ಅನ್ನೋದು ಒಂದು ಸಾಗರ. ಕಲಿತು ಮುಗಿಯುವಂತದ್ದಲ್ಲ. ಶಿರೂರಿನ ಸಂಗೀತ ಶಾಲೆಗೆ ಭೂಮಿ ಪೂಜೆ ಆಗಿದೆ. 2-3 ವರ್ಷದಲ್ಲಿ ಗುರುಕುಲ ಆರಂಭವಾಗುತ್ತದೆ. ಸ್ವಾಮೀಜಿ ಜೊತೆ ಹಲವಾರು ವರ್ಷಗಳಿಂದ ಒಡನಾಟ ಇದೆ. ಅವರು ಕೂಡಾ ಸಂಗೀತಗಾರ ಎಂಬೂದೇ ಖುಷಿ ಎಂದರು.

ಲಕ್ಷ್ಮೀವರತೀರ್ಥ ಸ್ವಾಮೀಜಿ ಮಾತನಾಡಿ, ಮನುಷ್ಯನಿಗೆ ಮನಸ್ಸಿಗೆ ಶಾಂತಿ ಮುಖ್ಯ. ಸಂಗೀತ ಶಾಂತಿಯನ್ನು ಕೊಡುತ್ತದೆ. ನನ್ನ ಜನ್ಮ ನಕ್ಷತ್ರಕ್ಕೆ ಬಂದಿರುವುದು ಬಹಳ ಖುಷಿ ಕೊಟ್ಟಿದೆ. ದೇವರಿಗೂ ಸಂಗೀತ ಬಹಳ ಇಷ್ಟ. ಹಾಡು ಹಾಡಿ, ಗಂಟೆ ಬಾರಿಸಿ ದೇವರನ್ನು ಸಂತೃಪ್ತಿಗೊಳಿಸುತ್ತೇವೆ. ಶಿವಮಣಿಗೆ ವಿಶ್ವವೇ ಮನ್ನಣೆ ಕೊಟ್ಟಿದೆ. ಅವರು ಇಲ್ಲಿ ಬಂದು ಸಂಗೀತ ಗುರುಕುಲಕ್ಕೆ ಅಡಿಗಲ್ಲು ಹಾಕಲಾಗಿದೆ. ಮುಖ್ಯಪ್ರಾಣನ ಸನ್ನಿಧಾನಕ್ಕೆ ಬಂದಿದ್ದು ನನಗೆ ಬಹಳ ಸಂತೋಷವಾಗಿದೆ ಎಂದು ಹೇಳಿದರು.

ಶಿರೂರು ಮಠದ ಪಿಯು ಕಾಲೇಜು, ಗೋಶಾಲೆಗೆ ಇದೇ ಸಂದರ್ಭದಲ್ಲಿ ಶಂಕುಸ್ಥಾಪನೆ ಮಾಡಲಾಯ್ತು. ಉಡುಪಿಯ ಸಂವೇದನಾ ಫೌಂಡೇಶನ್ಗೆ ಶಿರೂರು ಮಠದ 13 ಎಕ್ರೆ ಜಮೀನನ್ನು ಕಾಡು ಬೆಳೆಸಲು ದಾನ ನೀಡಿದರು. ಈ ಜಮೀನಿನಲ್ಲಿ ಹಣ್ಣುಹಂಪಲುವಿನ ಗಿಡಗಳು, ಮರಗಳನ್ನು ಬೆಳೆಸಲಾಗುತ್ತದೆ.

ಶಿವಮಣಿಯ ಹುಟ್ಟುಹಬ್ಬಕ್ಕೆ ಉಡುಪಿ ಕೃಷ್ಣಮಠ, ಕೊಲ್ಲೂರು ಮೂಕಾಂಬಿಕೆಯ ಕ್ಷೇತ್ರಕ್ಕೆ ಶಿವಮಣಿ ಭೇಟಿಕೊಟ್ಟು ಸಂಗೀತ ಸೇವೆ ನೀಡುತ್ತಾರೆ. ಈ ಬಾರಿ ಶಿರೂರು ಸ್ವಾಮೀಜಿಯ ಹುಟ್ಟುಹಬ್ಬಕ್ಕೆ ಶಿವಮಣಿ ಬಂದರು. ಶಿರೂರು ನೂರಾರು ಮಂದಿ ಶಿವಮಣಿಯ ಡ್ರಮ್ಸ್ ವಾದನ ಕಣ್ತುಂಬಿಕೊಂಡರು.

Share This Article
Leave a Comment

Leave a Reply

Your email address will not be published. Required fields are marked *