ಚಿಕ್ಕಬಳ್ಳಾಪುರ: ಭಾರೀ ಬಿರುಗಾಳಿಗೆ ಬೃಹತ್ ಗಾತ್ರದ ಅರಳಿ ಮರದ ಕೊಂಬೆಯೊಂದು ಮುರಿದು ಬಿದ್ದ ಪರಿಣಾಮ, ಯುವಕನೊರ್ವ ಮೃತಪಟ್ಟ ಘಟನೆ ಗೌರಿಬಿದನೂರಿನಲ್ಲಿ ನಡೆದಿದೆ.
ಹಿರೇಬಿದನೂರು ನಿವಾಸಿ ಅಂಜುಂ (20) ಮೃತ ಯುವಕ. ಗೌರಿಬಿದನೂರು-ಚಿಕ್ಕಬಳ್ಳಾಪುರ ಮಾರ್ಗದ ಸುಮಂಗಲಿ ಕಲ್ಯಾಣ ಮಂಟಪದ ಸಮೀಪದಲ್ಲಿ ಘಟನೆ ನಡೆದಿದೆ.
ಅರಳಿ ಮರವು ಸುಮಾರು ನೂರು ವರ್ಷದ ಮರವಾಗಿದ್ದು, ಬಿರುಗಾಳಿಗೆ ಮೊದಲ ಬಾರಿ ಕೊಂಬೆ ಬಿದ್ದಾಗ ಯಾವುದೇ ಪ್ರಾಣ ಹಾನಿಯಾಗಿರಲಿಲ್ಲ. ಆದರೆ, ತೂಗು ಬಿದ್ದಿದ್ದ ಮತ್ತೊಂದು ಕೊಂಬೆ ಮುರಿದು ಬಿದ್ದ ಪರಿಣಾಮ ಕೆಳಗೆ ಹೋಗುತ್ತಿದ್ದ ಅಂಜುಂ ಸಿಲುಕಿಕೊಂಡಿದ್ದಾರೆ. ಗಂಭೀರವಾಗಿ ಗಾಯವಾಗಿದ್ದ ಅಂಜುಂನನ್ನು ಬೆಂಗಳೂರಿನ ನಿಮ್ಹಾನ್ಸ್ ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಂಜುಂ ಮೃತಪಟ್ಟಿದ್ದಾರೆ.
ಮೃತ ಅಂಜುಂ ಸಂಬಂಧಿಕರು, ಸ್ನೇಹಿತರು, ಗೌರಿಬಿದನೂರು-ಚಿಕ್ಕಬಳ್ಳಾಪುರ ಮಾರ್ಗದ ರಸ್ತೆ ಸಂಚಾರ ತಡೆದು, ಪ್ರತಿಭಟನೆ ನಡೆಸಿದ್ದು, ಮೃತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿದ್ದರು. ಸ್ಥಳಕ್ಕೆ ಆಗಮಿಸಿದ ನಗರಸಭೆ ಅಧ್ಯಕ್ಷ ಪ್ರತಿಭಟನಾಕಾರರ ಮನವೊಲಿಸಿ, ಪರಿಹಾರ ಕೊಡಿಸವುದಾಗಿ ಭರವಸೆ ನೀಡಿದ್ದರಿಂದ ಮೃತನ ಸಂಬಂಧಿಕರು ಪ್ರತಿಭಟನೆ ವಾಪಾಸ್ ಪಡೆದಿದರು.