ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ – ಬರೋಬ್ಬರಿ 47 ಕೋಟಿ ರೂ. ವಂಚನೆ!

Public TV
1 Min Read

ಚಾಮರಾಜನಗರ: ಒಂದು ಕಡೆ ರಾಜ್ಯದಲ್ಲಿ ರೈತರ ಸಾಲ ಮನ್ನಾ ಕುರಿತು ವ್ಯಾಪಕ ಚರ್ಚೆಗಳು ವ್ಯಕ್ತವಾಗುತ್ತಿದ್ದರೆ, ಇನ್ನೊಂದೆಡೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕಳೆದ ಒಂದೂವರೆ ವರ್ಷದಿಂದ ರೈತರಿಗೆ ಬೆಳೆ ನಷ್ಟದಲ್ಲಿ ತಲುಪಬೇಕಾದ 47 ಕೋಟಿ ರೂಪಾಯಿಯನ್ನು ನೀಡದೇ ಜಿಲ್ಲೆಯ ರೈತರಿಗೆ ವಂಚನೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.

2016 ರ ಹಿಂಗಾರಿನಲ್ಲಿ ಜಿಲ್ಲೆಯಲ್ಲಿ ನಷ್ಟವಾದ ಬೆಳೆಗೆ 49,132 ರೈತರಿಗೆ 36.67 ಕೋಟಿ ರೂ. ಹಣ ನೀಡಬೇಕಿದೆ. ಇನ್ನೂ 2017ರ ಮುಂಗಾರಿನಲ್ಲಿ ನಷ್ಟವಾದ ಬೆಳೆಗೆ 23,305 ರೈತರಿಗೆ 10.75 ಕೋಟಿ ರೂ. ಹಣವನ್ನು ನೀಡದೇ ಬೆಳೆ ವಿಮಾ ಕಂಪನಿಗಳು ರೈತರಿಗೆ ಸತಾಯಿಸುತ್ತಿವೆ.

ಯುನೈಟೆಡ್ ಇಂಡಿಯಾ ವಿಮಾ ಕಂಪನಿ ಹಾಗೂ ಯೂನಿವರ್ಸಲ್ ಸೊಂಪೋ ಜನರಲ್ ವಿಮಾ ಕಂಪನಿಗೆ ಜಿಲ್ಲೆಯ ರೈತರು ಕೃಷಿ ಇಲಾಖೆ ಮುಖಾಂತರ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆಯನ್ನು ಕಟ್ಟಿದ್ದರು. ಆ ವೇಳೆ ಸರಿಯಾದ ಮಳೆ ಬರದ ಕಾರಣ ಜಿಲ್ಲೆಯ ಫಸಲು ನಾಶವಾಗಿದೆ. ಹೀಗಾಗಿ ರೈತರಿಗೆ ಈ ವಿಮಾ ಕಂಪನಿಗಳು ಕೋಟ್ಯಾಂತರ ರೂಪಾಯಿ ಹಣವನ್ನು ನೀಡಬೇಕಿದೆ.

ಒಂದೂವರೆ ವರ್ಷವಾದರೂ ಸಹ ರೈತರಿಗೆ ಸಲ್ಲಬೇಕಾದ ಹಣವನ್ನು ನೀಡುತ್ತಿಲ್ಲ. ಈ ಬಗ್ಗೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕರನ್ನು ಕೇಳಿದರೆ ತಾಂತ್ರಿಕ ಕಾರಣದ ಸಬೂಬು ಹೇಳುತ್ತಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *