ಸರ್ಕಾರ ರಚನೆಗೆ ಮುನ್ನವೇ ಸಂಪುಟ ಸಂಕಟ – ಅಧಿಕಾರ ಹಂಚಿಕೆಯಲ್ಲಿ ಇನ್ನೂ ಮೂಡಿಲ್ಲ ಒಮ್ಮತ!

Public TV
1 Min Read

ಬೆಂಗಳೂರು: ಬುಧವಾರ ಹೆಚ್‍ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಆದ್ರೆ ಅದಕ್ಕೂ ಮುನ್ನವೇ ಸಂಪುಟ ರಚನೆ ಸಂಕಟ ಎದುರಾಗಿದೆ.

ಅಧಿಕಾರ ಹಂಚಿಕೆ ವಿಚಾರದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಒಮ್ಮತ ಮೂಡಿಲ್ಲ. ಮೊದಲು ಭೇಷರತ್ ಬೆಂಬಲ ಘೋಷಿಸಿದ್ದ ಕಾಂಗ್ರೆಸ್, ಇದೀಗ ಮೆಲ್ಲಗೆ ಷರತ್ತುಗಳನ್ನು ಒಡ್ಡಲು ಮುಂದಾಗುತ್ತಿದೆ. ಏಕಪಕ್ಷೀಯ ತೀರ್ಮಾನಗಳನ್ನು ಕೈಗೊಳ್ಳಬಾರದು ಎನ್ನುತ್ತಿದೆ ಅಂತ ತಿಳಿದುಬಂದಿದೆ

ಎಷ್ಟು ಡಿಸಿಎಂ ಸ್ಥಾನ ಸೃಷ್ಟಿಸಬೇಕು?ಒಂದೋ ಎರಡೋ? ಕಾಂಗ್ರೆಸ್‍ನವರಿಗೆ ಯಾವ ಖಾತೆಗಳನ್ನು ನೀಡಬೇಕು. ಎಷ್ಟು ಸಚಿವ ಸ್ಥಾನಗಳನ್ನು ನೀಡಬೇಕು ಎಂಬ ಬಗ್ಗೆ ಉಭಯ ಪಕ್ಷಗಳು ಅಂತಿಮ ತೀರ್ಮಾನಕ್ಕೆ ಬಂದಿಲ್ಲ. ಇಂದು ಮಧ್ಯಾಹ್ನ ಎಚ್‍ಡಿ ಕುಮಾರಸ್ವಾಮಿ ನವದೆಹಲಿ ತಲುಪಲಿದ್ದು, ಸೋನಿಯಾ ಮತ್ತು ರಾಹುಲ್ ಗಾಂಧಿ ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಜೊತೆಗೆ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಸೇರಿ ಹಲವು ನಾಯಕರನ್ನು ಬುಧವಾರ ಪ್ರಮಾಣ ವಚನ ಸಮಾರಂಭಕ್ಕೆ ಬನ್ನಿ ಅಂತಾ ಆಹ್ವಾನ ನೀಡಿ ಸಂಜೆ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.

ಈ ನಡುವೆ ಇಂದು ದೆಹಲಿಗೆ ಹೊರಟಿದ್ದ ಪರಮೇಶ್ವರ್ ಮತ್ತು ಇತರ ನಾಯಕರಿಗೆ, ಸರ್ಕಾರ ಅಸ್ತಿತ್ವಕ್ಕೆ ಬರೋವರೆಗೂ ನೀವು ಇಲ್ಲಿಗೆ ಬರಲೇಬೇಡಿ ಎಂದು ಹೈಕಮಾಂಡ್ ಸೂಚನೆ ನೀಡಿದೆ. ಹೀಗಾಗಿ ಕೈ ನಾಯಕರ ದೆಹಲಿ ಯಾತ್ರೆ ರದ್ದಾಗಿದೆ.

ಒಟ್ಟಿನಲ್ಲಿ ಎಚ್‍ಡಿ ಕುಮಾರಸ್ವಾಮಿ ಬುಧವಾರ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸೋದು ಪಕ್ಕಾ ಆಗಿದೆ. ಆದ್ರೆ ಅವರೊಂದಿಗೆ ಒಂದಿಷ್ಟು ಮಂದಿ ಸಚಿವರಾಗಿ ಪ್ರತಿಜ್ಞೆ ಸ್ವೀಕರಿಸ್ತಾರೆ ಅನ್ನೋ ಸುದ್ದಿ ಹರಿದಾಡ್ತಿತ್ತು. ಆದ್ರೆ ಇದಕ್ಕೆ ಫುಲ್ ಸ್ಟಾಪ್ ಬಿದ್ದಿದೆ. ಕೇವಲ ಕುಮಾರಸ್ವಾಮಿ ಮಾತ್ರ ಶಪಥ ತೆಗೆದುಕೊಳ್ಳಲಿದ್ದಾರೆ. ಗುರುವಾರ ಸದನದಲ್ಲಿ ಬಹುಮತ ಸಾಬೀತುಪಡಿಸಿದ ಮಾರನೇ ದಿನ ಅಂದ್ರೆ ಶುಕ್ರವಾರ ಸಂಪುಟ ರಚೆನಯಾಗೋ ಸಾಧ್ಯತೆಗಳು ಹೆಚ್ಚಿವೆ. ಯಾಕಂದ್ರೆ, ಸಚಿವ ಸ್ಥಾನದ ಆಕಾಂಕ್ಷಿಗಳು ಎರಡೂ ಪಕ್ಷಗಳಲ್ಲಿ ಹೆಚ್ಚಿದ್ದಾರೆ. ಒಂದು ವೇಳೆ ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ಯಾರಾದ್ರೂ ಕೈಕೊಟ್ಟರೆ ಕಷ್ಟ ಎನ್ನುವ ಕಾರಣಕ್ಕಾಗಿ ಉಭಯ ಪಕ್ಷಗಳ ನಾಯಕರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *