ನನ್ನನ್ನು ಸೋಲಿಸಲು ಡಿಕೆಶಿ ಹಣದ ಹೊಳೆ ಹರಿಸಿದ್ದಾರೆ: ಯೋಗೇಶ್ವರ್

Public TV
2 Min Read

ರಾಮನಗರ: ಕರ್ನಾಟಕ ವಿಧಾನ ಸಭಾ ಚುನಾವಣೆಯ ಮತದಾನ ಮುಗಿದಿದೆ. ಆದರೆ ಚುನಾವಣಾ ಫಲಿತಾಂಶಕ್ಕೆ ಒಂದು ದಿನ ಬಾಕಿ ಇರುವಾಗಲೇ ಚನ್ನಪಟ್ಟಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಪಿ ಯೋಗೀಶ್ವರ್ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ.

ಫಲಿತಾಂಶದ ವಿಚಾರವಾಗಿ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮತನಾಡಿದ ಅವರು, ಸುಪಾರಿ ಕಿಲ್ಲರ್ ಎಚ್.ಎಂ ರೇವಣ್ಣ, ಸುಪಾರಿ ಕೊಟ್ಟಿದ್ದು ಡಿಕೆ ಬ್ರದರ್ಸ್, ಎಚ್‍ಡಿಕೆ ನೇರ ಎದುರಾಳಿ, ರೇವಣ್ಣ ನೆಪ ಮಾತ್ರದ ಅಭ್ಯರ್ಥಿ. ಯಾರೇ ಗೆದ್ದರೂ ಎರಡು ಸಾವಿರ ಅಥವಾ ಮೂರು ಸಾವಿರದಿಂದ ಅಷ್ಟೇ. ಚುನಾವಣೆ ಫಲಿತಾಂಶದಲ್ಲಿ ಯಾವುದೇ ನಿರ್ಧಾರಕ್ಕೆ ಬರಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದರು.

ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹರಿಸಿರುವ ಹಣದ ಹೊಳೆ ನನ್ನನ್ನು ಸೋಲುಂಟು ಮಾಡುತ್ತದೆ. ಅವರು ಕೊನೆಯ ಗಳಿಗೆಯಲ್ಲಿ ಆಟವನ್ನು ಆಡಿದ್ದಾರೆ. ಮತದಾರರಿಗೆ ಹಣದ ಹೊಳೆಯನ್ನೇ ಹರಿಸಿದ್ದಾರೆ. ಅವರು ಹರಿಸಿರುವ ಕಪ್ಪು ಹಣ ಕೆಲಸವನ್ನು ಮಾಡಿದರೆ ನನ್ನ ಸೋಲು ಖಂಡಿತ. ಇದು ವ್ಯವಸ್ಥಿತವಾಗಿ ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂದು ಅವರು ತೀರ್ಮಾನ ಮಾಡಿದ್ದಾರೆ ಎಂದು ಆರೋಪಿಸಿದರು.

 

ನಾನು ಇನ್ನು 24 ಗಂಟೆ ಕಾದು ನೋಡುತ್ತೇನೆ. ಬೂತು ಕಾಯುವ ಪಕ್ಷದ ಮುಖಂಡರನ್ನೇ ತಮ್ಮತ್ತ ಸೆಳೆದುಕೊಂಡಿದ್ದಾರೆ. ನನ್ನ ಜೊತೆಯಲ್ಲಿ ಇದ್ದ ಮುಖಂಡರು ಹಣದ ವ್ಯಾಮೋಹಕ್ಕಾಗಿ ಬೇರೆಯವರ ಜೊತೆಯಲ್ಲಿ ಹೋಗಿದ್ದಾರೆ. ನನ್ನ ಪರ ಇದ್ದ ಮತದಾರರನ್ನು ಕಾಂಗ್ರೆಸ್ ನವರು ತಮ್ಮತ್ತ ಸೆಳೆದುಕೊಂಡಿದ್ದಾರೆ. ನಾನು ಬೇರೆ ಪಕ್ಷದಲ್ಲಿ ಇದ್ದರೇ ನನ್ನ ಗೆಲುವು ನಿಶ್ಚಿತವಾಗಿರುತಿತ್ತು. ನಾನು ಅಭಿವೃದ್ಧಿಯಲ್ಲಿ ಡಿ.ಕೆ.ಶಿವಕುಮಾರ್ ಹಾಗೂ ಕುಮಾರಸ್ವಾಮಿ ಅವರಿಗೆ ಫೈಟ್ ಕೊಡಬಲ್ಲೆ. ಆದರೆ ಅವರ ತೋಳ್ಬಲ ಹಾಗೂ ಹಣದ ಬಲದಲ್ಲಿ ಅವರನ್ನು ನಾನು ಎದುರಿಸಲು ಆಗುವುದಿಲ್ಲ ಎಂದ್ರು.

ಕ್ಷೇತ್ರದಲ್ಲಿ ಜಾತಿ ಬಲ, ಹಣದ ಬಲ ಕೆಲಸವನ್ನು ಮಾಡಿದೆ. ನಾನು ಜಾತಿ ರಾಜಕೀಯವನ್ನು ಯಾವತ್ತೂ ಮಾಡಿಲ್ಲ. ನಾನು ಎರಡು ಶಕ್ತಿಯ ಜೊತೆಯಲ್ಲಿ ಹೋರಾಟವನ್ನು ಮಾಡಿದ್ದೇನೆ. ಕುಮಾರಸ್ವಾಮಿ ಹಾಗೂ ರೇವಣ್ಣ ಬಂದಿದಕ್ಕೆ ನನಗೆ ನಷ್ಟವಾಗಿದೆ. ದಲಿತರ ಮತವನ್ನು ರೇವಣ್ಣ ಸೆಳೆದುಕೊಂಡಿದ್ದಾರೆ. ರೇವಣ್ಣ ಅವರು ಬಂದಿದ್ದರಿಂದ ನನಗೆ ಒಂದು ಕಡೆ ಹಿನ್ನಡೆಯಾಗಿದೆ. ಇನ್ನು ಬಿಜೆಪಿ ಎಷ್ಟು ಸೀಟು ಬರುತ್ತೇ ಅನ್ನೂ ಪ್ರಶ್ನೆಗೆ, ಅಯ್ಯೋ ಮೊದಲು ನನ್ನದು ನೋಡಣ್ಣ ಆಮೇಲೆ ನೋಡೋಣ. ಸುಪಾರಿ ರೇವಣ್ಣ, ಸುಪಾರಿ ಕಿಲ್ಲರ್ ಡಿ.ಕೆ.ಬ್ರದರ್ಸ್, ನನಗೆ ಮೈನಸ್ ಆದರೆ, ಕುಮಾರಸ್ವಾಮಿ ಅವರಿಗೆ ಪ್ಲಸ್ ಆಗುತ್ತೆ. ನನಗೆ ನನ್ನ ಮನಸ್ಥಿತಿ ಹೇಳುತ್ತಿದೆ. ನನಗೆ ಒಂದು ಕಡೆ ಈ ಬಾರಿ ಹಿನ್ನಡೆಯಾಗುತ್ತದೆ ಅಂತಾ ಹೇಳಿದ್ದಾರೆ.

ಡಿ.ಕೆ.ಶಿವಕುಮಾರ್ ಹಾಗೂ ಕುಮಾರಸ್ವಾಮಿ ಎಷ್ಟು ಜನರನ್ನ ಬಲಿ ತೆಗೆದುಕೊಂಡಿದ್ದಾರೆ. ಈ ಬಾರಿ ಸೋಲನ್ನು ನಾನು ಒಪ್ಪಿಕೊಂಡಿದ್ದೇನೆ. ಕುಮಾರಸ್ವಾಮಿ ಅವರ ಮುಖ, ಕಾಂಗ್ರೆಸ್ ನವರ ದುಡ್ಡು ಕ್ಷೇತ್ರದ ಜನರನ್ನು ಮಂಕು ಮಾಡಿದೆ ಎಂದ ಯೋಗೇಶ್ವರ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *