ಧಾರವಾಡದಲ್ಲಿ ಗರಿ ಗರಿ ರಾಜಕೀಯ ಗಿರಮಿಟ್ಟು – ಅಖಾಡ ಹೇಗಿದೆ?

Public TV
6 Min Read

ಧಾರವಾಡ ಒಂದು ರೀತಿಯಲ್ಲಿ ಹೈ ವೋಲ್ಟೇಜ್ ಮ್ಯಾಚ್ ನಡೆಯೋ ಕ್ಷೇತ್ರ. ಈ ಬಾರಿ ಧಾರವಾಡದಲ್ಲಿ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ, ಮಹದಾಯಿ, ಕಳಸಾ-ಬಂಡೂರಿ ಹೋರಾಟಗಳೇ ಹೈಲೈಟ್. ಧರ್ಮಯುದ್ಧದ ಜೊತೆಗೆ ಸೇರಿರೋ ಜಲಯುದ್ಧದ ನಡುವೆ ಗೆಲುವಿನ ಝಂಡಾ ಹಾರಿಸೋರು ಯಾರು ಅನ್ನೋದೇ ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ. ಅಂದ ಹಾಗೆ, ಧಾರವಾಡದ ಮತಬ್ಯಾಂಕ್ ನಲ್ಲಿ ದೊಡ್ಡ ಪ್ರಮಾಣದಲ್ಲಿ ಲಿಂಗಾಯತ ಹಾಗೂ ವೀರಶೈವ ಮತದಾರರೇ ನಿರ್ಣಾಯಕರು. 8 ವಿಧಾನಸಭಾ ಕ್ಷೇತ್ರಗಳಿರೋ ಧಾರವಾಡದಲ್ಲಿ 4ರಲ್ಲಿ ಕಾಂಗ್ರೆಸ್, ಮೂರರಲ್ಲಿ ಬಿಜೆಪಿ ಹಾಗೂ ಒಂದು ಕ್ಷೇತ್ರದಲ್ಲಿಷ್ಟೇ ಜೆಡಿಎಸ್ ತಮ್ಮ ತಮ್ಮ ಅಸ್ತಿತ್ವ ಕಂಡುಕೊಂಡಿವೆ.

ಧಾರವಾಡ…ಅಲ್ಲಲ್ಲ..ದಾರವಾಡ..!
ಅವಳಿ ನಗರದಲ್ಲಿ ಒಂದಾದ ಧಾರವಾಡ ಜಿಲ್ಲೆಗೆ ಈ ಹೆಸರು ಬರೋದ್ರ ಹಿಂದೆ ಒಂದು ಸ್ವಾರಸ್ಯಕರ ಕಥೆ ಇದೆ. ವಿಜಯನಗರ ಕಾಲದಲ್ಲಿ ಧಾರರಾವ್ ಅನ್ನೋನು 1403ರಲ್ಲಿ ಇಲ್ಲಿ ಕೋಟೆ ಕಟ್ಟಿದನಂತೆ. ಹೀಗಾಗಿ ದಾರವಾಡ ಅಂತಾ ಕರೆಯಲಾಯ್ತು. ಕಾಲ ಸರಿದಂತೆ ಇದು ಧಾರವಾಡವಾಗಿ ಜನರ ಬಾಯಲ್ಲಿ ರೂಪಾಂತರವಾಗ್ತಾ ಹೋಯ್ತು. ಶಾಸನಗಳಲ್ಲಿ ದಾರವಾಡ ಅನ್ನೋ ಹೆಸ್ರೇ ಉಲ್ಲೇಖವಾಗಿದೆ.

ಕೇಳಿಸದೆ ಧಾರವಾಡದ ಕಲ್ಲು ಕಲ್ಲಿನಲೂ ಸಂಗೀತ ಸುಧೆ..!
ಧಾರವಾಡ ಕರ್ನಾಟಕದ ಸಾಂಸ್ಕೃತಿಕ ಸ್ವರ ಸಾಮ್ರಾಟ. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ತವರೂರು. ದೇಶ ವಿದೇಶಗಳಲ್ಲಿ ಪ್ರಖ್ಯಾತಿಗಳಿಸಿದ ಪಂಡಿತ ಮಲ್ಲಿಕಾರ್ಜುನ ಮನಸೂರರು, ಡಾ. ಗಂಗೂಬಾಯಿ ಹಾನಗಲ್, ಪಂಡಿತ್ ಬಸವರಾಜ್ ರಾಜಗುರು, ಪಂಡಿತ್ ಭೀಮಸೇನ ಜೋಷಿ, ಮಾಧವಗುಡಿ, ಗಂಗೂಬಾಯಿ ಹಾನಗಲ್, ಕುಮಾರ ಗಂಧರ್ವ, ಸಂಗೀತಾ ಕಟ್ಟಿ, ಕೈವಲ್ಯ ಗುರವ, ಕೊಳಲು ವಾದಕ ಪ್ರವೀಣ್ ಗೊಡ್ಕಿಂಡಿ, ಗೀತಾ ಜಾವಡೇಕರ್, ಹೀಗೆ ಸಂಗೀತ ಕ್ಷೇತ್ರಕ್ಕೆ ಅಗಣಿತ ಕೊಡುಗೆ ಕೊಟ್ಟ ದಿಗ್ಗಜರ ಊರು ಧಾರವಾಡ.

ಇಲ್ಲರಳುವ ಹೂವೂ ಸೂಸುತ್ತೆ ಅಕ್ಷರಗಳ ಕಂಪು..!
ಧಾರವಾಡದ ಜನರಿಗೆ ಸಾಹಿತ್ಯ ಪ್ರೇಮ, ಭಾಷಾ ಪ್ರೀತಿ ತುಸು ಜಾಸ್ತಿ ಅಂತಾನೇ ಅನ್ಸುತ್ತೆ. ಯಾಕಂದ್ರೆ, ಊರು ಸಾಹಿತ್ಯ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಯನ್ನ ಯಾರೂ ಮರೆಯೋ ಹಾಗೇ ಇಲ್ಲ. ಕನ್ನಡ ಸಾಹಿತ್ಯಕ್ಕೆ ಧಾರವಾಡ ಜಿಲ್ಲೆಯ ಕೊಡುಗೆ ಅಪಾರ. ಕನ್ನಡ ಸಾಹಿತ್ಯದ ಅನೇಕ ದಿಗ್ಗಜರ ಕರ್ಮಭೂಮಿ ಧಾರವಾಡ. ದ.ರಾ.ಬೇಂದ್ರೆ ,ಆನಂದಕಂದ (ಬೆಟಗೇರಿ ಕೃಷ್ಣಶರ್ಮ), ಆಲೂರು ವೆಂಕಟರಾಯರು, ಎಂ.ಎಂ.ಕಲಬುರ್ಗಿ, ಕೀರ್ತಿನಾಥ ಕುರ್ತಕೋಟಿ, ಗದಿಗೆಯ್ಯ ಹುಚ್ಚಯ್ಯ ಹೊನ್ನಾಪುರಮಠ, ಗಿರಡ್ಡಿ ಗೋವಿಂದರಾಜ, ಗಿರೀಶ ಕಾರ್ನಾಡ್, ಚಂದ್ರಶೇಖರ ಕಂಬಾರ, ಚಂದ್ರಶೇಖರ ಪಾಟೀಲ, ಚನ್ನವೀರ ಕಣವಿ, ಪಾಟೀಲ ಪುಟ್ಟಪ್ಪ ಹೀಗೆ ಹೇಳ್ತಾ ಹೋದ್ರೆ ದೊಡ್ಡ ಪಟ್ಟಿಯೇ ಬೆಳೆಯುತ್ತಾ ಸಾಗುತ್ತೆ.

ಧಾರವಾಡ ಹೆಸರಿನ ಜೊತೆ ಬೆಸೆದುಕೊಂಡ ಸಿಹಿಯ ನಂಟು..
ಧಾರವಾಡ ಹೆಸರು ಕೇಳಿದ ತಕ್ಷಣ ನೆನಪಾಗೋದು ಧಾರವಾಡ ಪೇಡ. ಈ ಸ್ವಾದ ಧಾರವಾಡಕ್ಕೆ ಬೆಸೆದುಕೊಂಡು 175 ವರ್ಷಗಳೇ ಕಳೆದವು ಅಂದ್ರೆ ನೀವು ನಂಬಲೇಬೇಕು. ಆಂಗ್ಲ ಪದದಿಂದ ಈ ಸಿಹಿಗೆ ಪೇಡಾ ಅನ್ನೋ ಪದ ಬಂತು ಅನ್ನೋ ಉಲ್ಲೇಖಗಳೂ ಸಿಗುತ್ವೆ. ಅಂದ ಹಾಗೆ, ಮೊದಲಿಗೆ ಉತ್ತರ ಭಾರತದಿಂದ ಧಾರವಾಡಕ್ಕೆ ವಲಸೆ ಬಂದ ಠಾಕೂರರು ಈ ಸಿಹಿ ತಿಂಡಿಯನ್ನ ತಮ್ಮ ಹೊಟ್ಟೆ ಪಾಡಿಗಾಗಿ ಮಾಡೋದಕ್ಕೆ ಶುರು ಮಾಡಿದ್ರು. ಮೊದಲಿಗೆ ಠಾಕೂರ ಪೇಡಾ ಅಂತಿದ್ದಿದ್ದು ಕಾಲ ಕ್ರಮೇಣವಾಗಿ ಧಾರವಾಡ ಪೇಡಾ ಆಯ್ತು.

ಕುಂದಗೋಳದಲ್ಲಿ ವಿಜಯದ ಗೋಲ್ ಹೊಡೆಯೋರು ಯಾರು..?
ಕುಂದಗೋಳ ಅಂದ್ರೆ ಒಂದರ್ಥದಲ್ಲಿ ಬರಡು ನೆಲ. ಲಿಂಗಾಯತ ವೀರಶೈವರು, ಕುರುಬರ ಮತಗಳೇ ಇಲ್ಲಿ ನಿರ್ಣಾಯಕ. ಕಳೆದ ಬಾರಿ ಸಿ ಎಸ್ ಶಿವಳ್ಳಿ ಕಾಂಗ್ರೆಸ್ ನಿಂದ ಗೆದ್ದಿದ್ರು. ಈ ಬಾರಿ ಕೂಡಾ ಸಿಎಸ್ ಶಿವಳ್ಳಿಯವ್ರೇ ಕಾಂಗ್ರೆಸ್ ಕ್ಯಾಂಡಿಡೇಟ್. ಕಳೆದ ಬಾರಿ ಬಿಜೆಪಿ ಹಾಗೂ ಕೆಜೆಪಿ ಒಡೆದ ಲಾಭ ಪಡೆದಿದ್ದ ಶಿವಳ್ಳಿ ಗೆ ಈ ಬಾರಿ ಬಿಜೆಪಿ ಪ್ರಬಲ ಪೈಪೋಟಿ ನೀಡೋದ್ರಲ್ಲಿ ಸಂಶಯವೇ ಇಲ್ಲ. ಚಿಕ್ಕನಗೌಡ ಈಶ್ವರಗೌಡ ಬಿಜೆಪಿಯ ಹುರಿಯಾಳು. ಜೆಡಿಎಸ್ ನಿಂದ ಮಲ್ಲಿಕಾರ್ಜುನ ಅಕ್ಕಿ ಕಣದಲ್ಲಿದ್ದಾರೆ. ಕುಂದರಗೋಳದ ಮತದಾರ ಯಾರನ್ನ ಗೆಲುವಿನ ಗಾದಿಯಲ್ಲಿ ಕೂರಿಸ್ತಾನೆ ಅನ್ನೋದೇ ನಿಗೂಢ.

ಗ್ರಾಮೀಣ ಕ್ಷೇತ್ರದಲ್ಲಿ ಮಿಣ ಮಿಣ ಮಿನುಗೋರ್ಯಾರು..?
ಧಾರವಾಡ ಗ್ರಾಮೀಣ ಸಚಿವ ವಿನಯ್ ಕುಲಕರ್ಣಿಯವ್ರ ಕ್ಷೇತ್ರ. ಇಲ್ಲಿ ಅಭಿವೃದ್ಧಿ, ಉತ್ತಮ ಆಡಳಿತ ಕೊಟ್ಟಿದ್ದಾರೆ ಅನ್ನೋದಕ್ಕಿಂತ ಇತ್ತೀಚಿಗಿನ ಕೆಲವೊಂದಷ್ಟು ಬೆಳವಣಿಗೆಗಳಿಗೇ ಈ ಕ್ಷೇತ್ರ ಸುದ್ದಿ ಮಾಡಿತ್ತು. ಯೋಗೇಶ್ ಗೌಡ ಕೊಲೆ ಪ್ರಕರಣ, ಲಿಂಗಾಯತ ಪ್ರತ್ಯೇಕ ಧರ್ಮದ ಗೊಂದಲಗಳು ವಿನಯ್ ಕುಲಕರ್ಣಿಯವ್ರಿಗೆ ಹಿನ್ನಡೆ ತಂದ್ರೆ ಅಚ್ಚರಿ ಏನಿಲ್ಲ. ಇವರಿಗೆ ಪ್ರಬಲ ಪೈಪೋಟಿ ಕೊಡೋದಕ್ಕೆ ಬಿಜೆಪಿಯಿಂದ ಅಮೃತ ದೇಸಾಯಿ ಶಕ್ತಿ ಮೀರಿ ಕ್ಯಾಂಪೇನ್ ನಲ್ಲಿ ತೊಡಗಿದ್ದಾರೆ. ಇಲ್ಲಿ ಇವರಿಬ್ಬರ ನಡುವೆಯೇ ನೇರ ಹಣಾಹಣಿ.

ಹುಬ್ಬಳ್ಳಿ ಧಾರವಾಡ ಪಶ್ಚಿಮದಲ್ಲಿ ಯಾರು ಉತ್ತಮ..?
ಹುಬ್ಬಳ್ಳಿ ಧಾರವಾಡ ಪಶ್ಚಿಮದಲ್ಲಿ 2013ರಲ್ಲಿ ಬಿಜೆಪಿ ಶಾಸಕ ಚಂದ್ರಕಾಂತ ಬೆಲ್ಲದ ರಾಜಕೀಯದಿಂದ ದೂರ ಸರಿದ ಬಳಿಕ ಅವ್ರ ಪುತ್ರ ಅಖಾಡಕ್ಕೆ ಧುಮುಕಿದ್ರು. ದೂರದೃಷ್ಟಿ ಉಳ್ಳ ಹಾಗೆಯೇ ಕೈ ಮತ್ತು ಬಾಯಿ ಶುದ್ಧವಿರೋ ರಾಜಕಾರಣಿ ಅನ್ನೋ ಹೆಗ್ಗಳಿಕೆಯನ್ನೂ ಗಳಿಸಿದ ಅರವಿಂದ ಬೆಲ್ಲದ 2013ರಲ್ಲಿ ಗೆದ್ದಿದ್ರು. ಕಾಂಗ್ರೆಸ್ ನಿಂದ ಮಾಜಿ ಸಚಿವ ಎಸ್.ಆರ್. ಮೋರೆ ಆಕಾಂಕ್ಷಿಯಾಗಿದ್ರೂ ಈ ಬಾರಿ ಮೊಹಮ್ಮದ್ ಇಸ್ಮಾಯಿಲ್ ತಮಟಗಾರ್ ಗೆ ಕಾಂಗ್ರೆಸ್ ಮಣೆ ಹಾಕ್ತು. ಇಲ್ಲಿಯೂ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆಯೇ ತೀವ್ರ ಹಣಾಹಣಿ ಇರೋದು.

ಕಲಘಟಗಿಯ ರಣಭೂಮಿಯಲ್ಲಿ ಗೆಲ್ಲೋನೇ ಗಟ್ಟಿಗ..!
ಬಹುಶಃ ಧಾರವಾಡದ ಜನ ಅದ್ರಲ್ಲೂ ರೈತರು ಹಾಲಿ ಶಾಸಕ ಸಂತೋಷ್ ಲಾಡ್ ರ ಕೆಲಸವನ್ನು ಎಂದಿಗೂ ಮರೆಯೋದಕ್ಕೆ ಸಾಧ್ಯಾನೇ ಇಲ್ಲ. ಒಂದು ರೀತಿಯಲ್ಲಿ ಎಲ್ಲರಿಗೂ ಮಾದರಿ ರಾಜಕಾರಣವನ್ನು ಪರಿಚಯಿಸಿ ಬೆಳೆಸಿದವ್ರು. ಕೊಳವೆ ಬಾವಿ ಕೊರೆಯೋ ಯಂತ್ರ ತರಿಸಿ ರೈತರಿಗೆ ಅನುಕೂಲ ಮಾಡಿಕೊಟ್ರು. ಒಂದು ರೀತಿಯಲ್ಲಿ ಕಲಘಟಗಿ ಕ್ಷೇತ್ರದ ಜನ್ರಿಗೆ ಲಾಡ್ ಲಾರ್ಡ್ ಥರಾ ಭಾಸವಾದ್ರು. ಆದ್ರೆ ಈ ಬಾರಿ ಬಿಜೆಪಿಯಿಂದ ನಿಂತಿರೋ ಸಿಎಂ ನಿಂಬಣ್ಣವರ್ ಹಾಗೂ ಜೆಡಿಎಸ್ ನಿಂದ ಕಂಟೆಸ್ಟ್ ಮಾಡ್ತಿರೋ ಎ.ಎಸ್ ರುದ್ರಪ್ಪ ಯಾವ ರೀತಿಯ ಪೈಪೋಟಿ ಕೊಡ್ತಾರೆ ಅನ್ನೋದಷ್ಟೇ ಸದ್ಯಕ್ಕಿರೋ ಕೌತುಕ.

ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ನಲ್ಲಿ ಗೆಲುವಿನ ಟ್ರಿಣ್ ಟ್ರಿಣ್ ಬಾರಿಸೋರು ಯಾರು..?
ಇಲ್ಲಿ 1994ರಿಂದಲೂ ಜನ ಕಮಲವನ್ನ ಮುದುಡೋಕೆ ಬಿಟ್ಟೇ ಇಲ್ಲ. ಜನ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಿಗೇ ಜೈ ಅನ್ತಾ ಬಂದಿದ್ದಾರೆ. ಅಭಿವೃದ್ಧಿಯ ಮಂತ್ರವನ್ನು ಜಪಿಸ್ತಾನೇ ತಮ್ಮ ಕ್ಷೇತ್ರವನ್ನ ಮತ್ತಷ್ಟು ಬಲಪಡಿಸ್ತಾನೇ ಬಂದಿದ್ದಾರೆ. ಇನ್ನು, ತಾವು ಮುಖ್ಯಮಂತ್ರಿ ಗಾದಿಯಲ್ಲಿ ಕೂತಾಗ್ಲೂ ಒಂದಷ್ಟು ಅಭಿವೃದ್ಧಿ ಪರ ಯೋಜನೆಗಳನ್ನು ಇಂಪ್ಲಿಮೇಟ್ ಮಾಡಿದ್ದಾರೆ. ಇಲ್ಲಿ ಜಗದೀಶ್ ಶೆಟ್ಟರ್ ಜನ್ರೊಂದಿಗೆ ವನ್ ಟು ವನ್ ಸಂಪರ್ಕ ಹೊಂದಿದ್ದಾರೆ. ಹೀಗಾಗಿ ಕಾರ್ಯಕರ್ತರೂ ತಮ್ಮ ನಾಯಕನನ್ನ ಬಿಟ್ಟು ಕೊಡೋ ಪ್ರಶ್ನೆಯೇ ಇಲ್ಲಿ ಉದ್ಭವವಾಗಿಲ್ಲ. ಕಾಂಗ್ರೆಸ್ ಈ ಬಾರಿ ಮಹೇಶ್ ಸಿ ನಲ್ವಾಡ್ ರನ್ನ ತನ್ನ ಹುರಿಯಾಳಾಗಿ ಕಣಕ್ಕಿಳಿಸಿದ್ದು ಪ್ರಬಲ ಪೈಪೋಟಿ ಕೊಡೋದಕ್ಕೆ ರೆಡಿಯಾಗಿದೆ. ಇನ್ನುಳಿದಂತೆ ಜೆಡಿಎಸ್ ನಿಂದ ರಾಜಣ್ಣ ಕೊರವಿ, ಆಮ್ ಆದ್ಮಿ ಪಕ್ಷದಿಂದ ಸಂತೋಷ್ ನರಗುಂದ್ ಹೋರಾಟದ ಅಖಾಡಕ್ಕೆ ಧುಮುಕಿದ್ದಾರೆ.

ಶಿಗ್ಗಾಂವಿಯಲ್ಲಿ ಓಡೋ ಕುದುರೆಗೆ ಲಗಾಮುಹಾಕೋರು ಯಾರು..?
2008ರಿಂದಲೂ ಶಾಸಕ ಸ್ಥಾನದಲ್ಲಿ ಗಟ್ಟಿಯಾಗಿ ಕೂತಿರೋ ಹಾಲಿ ಶಾಸಕ ಬಿಜೆಪಿಯ ಬಸವರಾಜ ಬೊಮ್ಮಾಯಿ ಕೆಲಸಗಳನ್ನೂ ಮಾಡಿದ್ದಾರೆ. ಇವ್ರ ಕೆಲಸಗಳೇ ಈ ಬಾರಿಯೂ ಶ್ರೀರಕ್ಷೆಯಾಗುತ್ತಾ ಅನ್ನೋದೇ ಪ್ರಶ್ನೆ. ಕ್ಷೇತ್ರದಲ್ಲಿ ಮುಸಲ್ಮಾನ ಮತದಾರರ ಸಂಖ್ಯೆ ಜಾಸ್ತಿ ಇರೋದು ಕೂಡಾ ನಿರ್ಣಾಯಕವಾಗುವ ಸಾಧ್ಯತೆಗಳಿವೆ. ಸಯ್ಯೇದ ಅಜಿಂಪಿರ್ ಎಸ್ ಖಾದ್ರಿ ಈ ಬಾರಿ ಕಾಂಗ್ರೆಸ್ನಿಂದ ಕಣಕ್ಕಿಳಿರೋದ್ರಿಂದ ಮುಸಲ್ಮಾನ ಮತಗಳನ್ನು ಸೆಳೆಯೋ ಸಾಧ್ಯತೆಗಳಿವೆ. ಜೆಡಿಎಸ್ ನ ಅಶೋಕ್ ಬೇವಿನಮರದ ಈ ಬಾರಿ ಬಿಜೆಪಿಗೆ ಟಫ್ ಕಾಂಪಿಟೀಶನ್ ಕೊಡೋದ್ರಲ್ಲಿ ಡೌಟೇ ಇಲ್ಲ ಅನ್ನೋ ವಾತಾವರಣ ಸೃಷ್ಟಿಯಾಗಿದೆ.

ಹೋರಾಟದ ನಾಡಲ್ಲಿ ಕದನ ಕಲಿಗಳ ಹೋರಾಟ!
ನವಲಗುಂದ ಅಪ್ಪಟ ಹೋರಾಟದ ಕಿಚ್ಚು ಹತ್ತಿಸಿದ ನೆಲ. ಇಲ್ಲಿನ ಜನ ಹೋರಾಟಗಳನ್ನು ನೋಡಿಕೊಂಡೇ, ಅದ್ರ ನಡುವೆಯೇ ಬೆಳೆದವರು ಅಂದ್ರೂ ತಪ್ಪಾಗೋದಿಲ್ಲ. ಮಹದಾಯಿ, ಕಳಸಾ-ಬಂಡೂರಿ ಯೋಜನೆ ಹೋರಾಟ, ಪೊಲೀಸ್ ದೌರ್ಜನ್ಯ ಇತ್ಯಾದಿಯಿಂದ ಸುದ್ದಿಯಾಗುತ್ತಲೇ ಇರುವ ಕ್ಷೇತ್ರ ಇದು. ಈ ಕ್ಷೇತ್ರದಲ್ಲಿ ಲಿಂಗಾಯತ-ವೀರಶೈವ, ಕುರುಬ ಸಮಾಜದವರ ಮತಗಳೇ ನಿರ್ಣಾಯಕ. ಬಿಜೆಪಿ ಸೋಲಿಸಿದ ಜೆಡಿಎಸ್ ನ ಎನ್.ಎಚ್. ಕೋನರೆಡ್ಡಿ ಹಾಲಿ ಶಾಸಕ. ಕಾಂಗ್ರೆಸ್ ನಿಂದ ವಿನೋದ್ ಎಸ್ ಸೂತಿ ಇಳಿದಿದ್ರೆ, ಬಿಜೆಪಿಯಿಂದ ಶಂಕರಪ್ಪ ಗೌಡ ಪಾಟೀಲ್ ಮುನೇನ್ ಕೊಪ್ಪ ಗಾದಿ ಏರೋ ಪೈಪೋಟಿಯಲ್ಲಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *