ಜನಾರ್ದನ ರೆಡ್ಡಿಗೂ ಪಕ್ಷಕ್ಕೂ ಸಂಬಂಧವಿಲ್ಲ: ಶ್ರೀರಾಮುಲು

Public TV
1 Min Read

ಬಾಗಲಕೋಟೆ: ಗೆಳತನಕ್ಕಾಗಿ ಮಾತ್ರ ನನ್ನ ಪರ ಜನಾರ್ದನರೆಡ್ಡಿ ಅವರು ಪ್ರಚಾರಕ್ಕೆ ಆಗಮಿಸಿದ್ದಾರೆ ವಿನಃ ಪಕ್ಷಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ ಎಂದು ಬಾದಾಮಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಹೇಳಿದ್ದಾರೆ.

ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಂತೆ ಬಾದಾಮಿಯಲ್ಲಿ ಎರಡನೇ ಹಂತದ ಚುನಾವಣೆ ಪ್ರಚಾರ ಆರಂಭಿಸಿದ್ದ ಶ್ರೀ ರಾಮುಲು ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದರು. ಬಾದಾಮಿಯಲ್ಲಿ ಜನರಿಂದ ದೊಡ್ಡ ಮಟ್ಟದ ಬೆಂಬಲ ವ್ಯಕ್ತವಾಗುತ್ತಿದೆ. ಎರಡು ಕ್ಷೇತ್ರದಲ್ಲೂ ಪಕ್ಷದ ಪರ ಗೆಲುವು ಸಾಧಿಸುತ್ತೇನೆ. ಸಿಎಂ ಸಿದ್ದರಾಮಯ್ಯ ಅವರು ಲಿಂಗಾಯತರನ್ನು ಒಡೆದಿರುವ ಸತ್ಯ ಎಲ್ಲಾ ಜನರಿಗೂ ತಿಳಿದಿದೆ. ಕ್ಷೇತ್ರದಲ್ಲಿ ಪಕ್ಷದ ಸ್ಥಳೀಯ ನಾಯಕರು ಗೆಲುವಿಗಾಗಿ ಪೂರ್ಣ ಬೆಂಬಲ ನೀಡಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಮಾಡಿರುವ ಭ್ರಷ್ಟಚಾರ ಅಂಶಗಳನ್ನು ಮುಂದಿಟ್ಟು ಪ್ರಚಾರ ನಡೆಸುತ್ತಿದ್ದೇನೆ. ಅವರ ಆಡಳಿತಾವಧಿಯಲ್ಲಿ ಐಎಎಸ್ ಅಧಿಕಾರಿಗಳು, ಪೊಲೀಸರು, ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಅವರಿಗೆ ಸವಾಲು ನೀಡುತ್ತೇನೆ. ಬಹಿರಂಗ ಚರ್ಚೆಗೆ ಸಿದ್ಧವಿದ್ದು, ರಾಜ್ಯದ 224 ಕ್ಷೇತ್ರದ ಯಾವುದೇ ಸ್ಥಳಕ್ಕೆ ಕರೆದರೂ ಆಗಮಿಸುತ್ತೇನೆ ಎಂದರು.

ಚುನಾವಣೆಯಲ್ಲಿ ಮೊಳಕಾಲ್ಮೂರು ಹಾಗೂ ಬಾದಾಮಿ ಎರಡು ಕ್ಷೇತ್ರದಲ್ಲಿ ಜಯ ಸಾಧಿಸಿದರೆ ಯಾವ ಕ್ಷೇತ್ರದವನ್ನು ಉಳಿಸಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ, ಪಕ್ಷದ ನಾಯಕರು ತನ್ನನ್ನು ಬಾದಾಮಿಗೆ ಕಳುಹಿಸಿದ್ದಾರೆ. ಅವರು ಮುಂದಿನ ದಿನಗಳಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಕಾದು ನೋಡಬೇಕಿದೆ. ಬಾದಾಮಿಯಲ್ಲಿ ತಾನು ಬಾಡಿಗೆ ಮನೆ ಮಾಡುತ್ತಿಲ್ಲ, ಮುಂದಿನ ದಿನಗಳಲ್ಲಿ ಸ್ವಂತ ಮನೆ ನಿರ್ಮಾಣ ಮಾಡಲಾಗುತ್ತದೆ ಎಂದರು.

ಈ ಬಾರಿ ಪ್ರಧಾನಿ ಮೋದಿ ಅವರ ಅಭಿವೃದ್ಧಿ ಕಾರ್ಯ ಹಾಗೂ ಬಿಎಸ್‍ವೈ ಅಡಳಿತ ಅವಧಿಯಲ್ಲಿ ಜಾರಿಗೆ ಮಾಡಿರುವ ಯೋಜನೆಗಳನ್ನು ತಿಳಿಸಿ ಅಧಿಕಾರ ಪಡೆಯುತ್ತೇವೆ. ರಾಜ್ಯದಲ್ಲಿ ಪಕ್ಷದ ಅಧಿಕಾರಕ್ಕೆ ತರುವುದು ಹಾಗೂ ಬಿಎಸ್‍ವೈ ಅವರನ್ನು ಮುಖ್ಯಮಂತ್ರಿ ಮಾಡುವುದು ನಮ್ಮ ಗುರಿ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *