ಇಯರ್ ಫೋನ್ ಹಾಕಿ ಡ್ರೈವಿಂಗ್: 13 ಶಾಲಾ ಮಕ್ಕಳ ಬಲಿ ಪಡೆದ ಡ್ರೈವರ್

Public TV
1 Min Read

ಲಕ್ನೋ: ಉತ್ತರ ಪ್ರದೇಶದ ಖುಷಿ ನಗರದಲ್ಲಿ ನಡೆದ ಶಾಲಾ ಬಸ್ ಹಾಗೂ ರೈಲಿನ ನಡುವಿನ ಅಪಘಾತಕ್ಕೆ ಶಾಲಾ ಬಸ್ ಚಾಲಕ ಇಯರ್ ಫೋನ್ ಧರಿಸಿದ್ದೆ ಕಾರಣ ಎಂದು ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.

ಅಪಘಾತದಲ್ಲಿ ಇದುವರೆಗೂ 13 ಜನ ಶಾಲಾ ಮಕ್ಕಳು ಸಾವನ್ನಪ್ಪಿದ್ದು, ಘಟನೆಯಲ್ಲಿ ಗಾಯಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.

ಶಾಲಾ ವಾಹನಕ್ಕೆ ಥವೆ ಕಪ್ತಗಂಜ್ ನಡುವಿನ ಪ್ಯಾಸೆಂಜರ್ ರೈಲು (55075) ಡಿಕ್ಕಿ ಹೊಡೆದಿದ್ದು, ಮಾನವ ರಹಿತ ರೈಲ್ವೇ ಹಳಿ ಕ್ರಾಸಿಂಗ್ ವೇಳೆ ದುರ್ಘಟನೆ ಸಂಭವಿಸಿದೆ.

ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಭೇಟಿ ನೀಡಿದ್ದ ಸಿಎಂ ಯೋಗಿ ಆದಿತ್ಯನಾಥ್ ಘಟನೆಯಲ್ಲಿ ಗಾಯಗೊಂಡ ಅವರನ್ನು ಮಕ್ಕಳ ಚಿಕಿತ್ಸೆಗೆ ಬೇಕಾದ ಎಲ್ಲಾ ಸೌಲಭ್ಯ ನೀಡುವಂತೆ ಆದೇಶಿಸಿದರು. ಅಲ್ಲದೇ ಸರ್ಕಾರದ ವತಿಯಿಂದ ಘಟನೆಯಲ್ಲಿ ಮೃತಪಟ್ಟ ಶಾಲಾ ಮಕ್ಕಳ ಕುಟುಂಬಗಳಿಗೆ ಸಾಂತ್ವನ ಹೇಳಿ 2 ಲಕ್ಷ ರೂ. ಪರಿಹಾರ ಘೋಷಿಸಿದರು. ಅಲ್ಲದೇ ಘಟನೆಯ ಕುರಿತು ತನಿಖೆ ನಡೆಸಲು ರೈಲ್ವೇ ಕೇಂದ್ರ ಸಚಿವ ಪೀಯೂಷ್ ಗೋಯಲ್ ಅವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು.

ಘಟನೆ ಕುರಿತು ಸಂಪೂರ್ಣ ತನಿಖೆಯನ್ನು ನಡೆಸಲಾಗುವುದು ಅಲ್ಲದೇ ಶಾಲಾ ಬಸ್ ಚಾಲಕನ ವಯಸ್ಸಿನ ಕುರಿತು ಸಹ ಖಚಿತ ಮಾಹಿತಿ ಇಲ್ಲ. ಘಟನೆಗೆ ಕಾರಣರಾದ ಎಲ್ಲರನ್ನು ಕಠಿಣ ಶಿಕ್ಷೆ ಒಳಪಡಿಸಲಾಗುವುದು. ಈ ಮೂಲಕ ಇಂತಹ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಯೋಗಿ ಆದಿತ್ಯನಾಥ್ ತಿಳಿಸಿದರು.

ಘಟನೆ ನಡೆದ ವೇಳೆ ಶಾಲಾ ವಾಹನದಲ್ಲಿ 25 ಮಂದಿ ಮಕ್ಕಳು ಇದ್ದು, ಎಲ್ಲರು 10 ವರ್ಷಕ್ಕಿಂತ ಕೆಳಗಿನವರು. ಈ ವೇಳೆ 7 ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನು ಬಿಆರ್ ಡಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೇಂದ್ರ ರೈಲ್ವೇ ವಕ್ತಾರ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *