ಚಿಕ್ಕಮಗಳೂರಲ್ಲಿ ಆಲಿಕಲ್ಲು ಮಳೆ- ಪುತ್ತೂರಲ್ಲಿ ಸಿಡಿಲು ಬಡಿದು ಬಾಲಕಿಗೆ ಗಾಯ!

Public TV
1 Min Read

ಬೆಂಗಳೂರು: ಚಿಕ್ಕಮಗಳೂರು ಜಿಲ್ಲೆ ತರೀಕೆರೆಯಲ್ಲಿ ಆಲಿಕಲ್ಲು ಮಳೆಯಾಗಿದೆ. ಸಂಜೆ ಸುರಿದ ಭಾರಿ ಮಳೆಯಲ್ಲಿ 10 ರಿಂದ 15 ಕೆಜಿಯ ಬೃಹತ್ ಗಾತ್ರದ ಆಲಿಕಲ್ಲು ಗಡ್ಡೆಗಳು ಬಿದ್ದಿದೆ.

ಸುಮಾರು ಒಂದು ಗಂಟೆಯ ಕಾಲ ಎಡೆಬಿಡದೆ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಅಲ್ಲದೇ ಅಡಿಕೆ ಹಾಗೂ ತೆಂಗಿನ ಮರಗಳು ಧರೆಗುರುಳಿದೆ. ವಿಟ್ಲಾಪುರ ಗ್ರಾಮದಲ್ಲಿ ಮದುವೆಗೆ ಹಾಕಿದ್ದ ಸ್ಟೇಜ್ ಸೆಟ್ ಕುಸಿದಿದ್ದು, ಶಾಮಿಯಾನ ಹಾರಿ ಹೋಗಿದೆ. ಬಳಿಕ ಮದುವೆ ಬೇರೆಡೆಗೆ ಸ್ಥಳಾಂತರಿಸಲಾಯಿತು. ಇನ್ನೂ ಲಕ್ಕವಳ್ಳಿ ಭಾಗದಲ್ಲೂ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಸಿಡಿಲು ಬಡಿದು 8 ವರ್ಷದ ಬಾಲಕಿ ಗಾಯಗೊಂಡಿರುವ ಘಟನೆ ಕಡಬ ಸಮೀಪದ ಅಲಂಕಾರಿನ ಪಲ್ಲತ್ತಡ್ಕ ಎಂಬಲ್ಲಿ ನಡೆದಿದೆ. ಭವ್ಯ (8) ಗಾಯಗೊಂಡ ಬಾಲಕಿ. ಸದ್ಯ ಭವ್ಯ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬ ಪರಿಸರದಾದ್ಯಂತ ಭಾರೀ ಮಳೆ, ಗಾಳಿ, ಬೀಸಿದ್ದು, ಗಾಳಿಗೆ ಹಲವು ಮರಗಳು, ವಿದ್ಯುತ್ ಕಂಬಗಳು ಧರೆ ಉರುಳಿವೆ.

ಉಡುಪಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಮಿಂಚು ಗುಡುಗು ಸಹಿತ ಭಾರಿ ಮಳೆಯಾಗಿದೆ. ಒಂದು ಗಂಟೆಯಿಂದ ಧಾರಾಕಾರ ಮಳೆ ಸುರಿದಿದ್ದು, ಪಾದಾಚಾರಿ, ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಇನ್ನೂ ಜಡಿಮಳೆಗೆ ಉಡುಪಿಯಲ್ಲಿ ಪವರ್ ಕಟ್ ಆಗಿದ್ದು, ಮೋಡ ಆವರಿಸಿದ್ದು ಮಳೆ ಮುಂದುವರೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾರ್ಕಳ, ಕುಂದಾಪುರದಲ್ಲೂ ವಿಪರೀತ ಮಳೆ ಸುರಿದಿದೆ.

Share This Article
Leave a Comment

Leave a Reply

Your email address will not be published. Required fields are marked *