ರಾಜಕಾರಣಿಗಳ ಎಲೆಕ್ಷನ್ ರಿಸಲ್ಟ್ ಹೇಳುತ್ತೆ ಈ ವಿಸ್ಮಯಕಾರಿ ಕಲ್ಲು!

Public TV
2 Min Read

ಸಾಮಾನ್ಯ ಮನುಷ್ಯನೊಬ್ಬನಿಗೆ ಭವಿಷ್ಯತ್ತಿನಲ್ಲಿ ಆಗಿಹೋಗೋ ಘಟನೆಗಳ ಬಗ್ಗೆ ಕಲ್ಪನೆ ಇರೋಕೆ ಸಾಧ್ಯಾನಾ? ಅಥವಾ ನಾಳೆ ಏನಾಗುತ್ತೆ ಅನ್ನೋದನ್ನ ಇಂದೇ ಊಹಿಸೋದಕ್ಕೆ ಸಾಧ್ಯಾನಾ? ಖಂಡಿತಾ ಇಲ್ಲ. ಇಂತಹಾ ಒಂದು ಶಕ್ತಿ ಸಿದ್ಧಿಸಿದ್ರೆ, ಅದನ್ನ ಅತೀಂದ್ರಿಯ ಅಂತಾರೆ. ಇಂಥದ್ದೇ ಒಂದು ಪವಾಡ ಧಾರವಾಡದಲ್ಲಿ ನಡೀತಿದೆ. ಧಾರವಾಡದ ರಾಯಣ್ಣ ಅನ್ನೋ ವ್ಯಕ್ತಿ ತಮ್ಮ ಜೀವನದ 18 ವರ್ಷಗಳನ್ನ ದೇಶ ಸೇವೆಯಲ್ಲೇ ಕಳೆದವರು. ಏರ್ ಫೋರ್ಸ್ ನ ನಿವೃತ್ತ ಅಧಿಕಾರಿಯಾಗಿ ಸೇವೆ ಸಲ್ಲಿಸಿದವರು.

1958ನಿಂದ ದೇಶಸೇವೆಗೆ ಕಟಿಬದ್ಧರಾಗಿ ನಿಂತ ರಾಯಣ್ಣ ನಂತರ ಪ್ಯಾರಚೂಟ್ ಜಂಪಿಂಗ್ ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡಿದ್ರು. ಈಗ ನಿವೃತ್ತಿ ತೆಗೆದುಕೊಂಡು ತಮ್ಮ ಪರಿವಾರದ ಜೊತೆ ನೆಮ್ಮದಿಯ ಜೀವನ ನಡೆಸ್ತಿದ್ದಾರೆ. ಅದೊಂದು ದಿನ ರಾಯಣ್ಣರಿಗೆ ವಿಸ್ಮಯಕಾರಿ ವಸ್ತುವೊಂದು ಕಣ್ಣಿಗೆ ಬಿತ್ತು. ಅದುವೇ ಇಲ್ಲಿ ಕಾಣ್ತಿರೋ ದೊಡ್ಡ ಕಲ್ಲು. ಹಾಗಂತ ಇದು ಬರೀ ಕಲ್ಲು ಅಂತಾ ಹೇಳಿ ಹಾಗೇ ಸುಮ್ಮನೆ ದಾರಿಯಲ್ಲಿ ಬಿಡೋ ಹಾಗಿರ್ಲಿಲ್ಲ. ಅದೇನನಿಸಿತೋ ಏನೋ. ರಾಯಣ್ಣ ಗಟ್ಟಿ ನಿರ್ಧಾರ ಮಾಡೇ ಬಿಟ್ರು. ಅದನ್ನು ನೇರವಾಗಿ ಮನೆಗೆ ತಂದಿಟ್ರು.

ಹೀಗೆ ಮನೆಗೆ ಕಲ್ಲನ್ನ ತಂದಿಟ್ಟ ನಂತ್ರ, ರಾಯಣ್ಣನವರ ಬದುಕಿನಲ್ಲಿ, ಮನೆಯಲ್ಲಿ ಅನೇಕ ಬದಲಾವಣೆಗಳಾಗ್ತಿರೋದು ಗಮನಕ್ಕೆ ಬಂತು. ಒಂದು ರೀತಿಯ ಸಕಾರಾತ್ಮಕ ಶಕ್ತಿ ತುಂಬ್ತಾ ಇರೋದನ್ನ ರಾಯಣ್ಣ ಗಮನಿಸಿದ್ರು. ಮನೆಯವರಿಗೂ ಇದು ಅನುಭವಕ್ಕೆ ಬಂದಿತ್ತು. ಹೀಗಾಗಿ, ಈ ಕಲ್ಲಿಗೆ ನಿತ್ಯ ಪೂಜೆ ಮಾಡೋಕೆ ಶುರು ಮಾಡಿದ್ರು. ಅಷ್ಟೇ. ಆ ಬಳಿಕ ಅನೇಕ ವಿಸ್ಮಯಗಳು ನಡೆಯೋದಕ್ಕೆ ಶುರುವಿಟ್ಕೊಳ್ತು. ಅಂದ ಹಾಗೆ, ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮೊದಲು ಚಾಯ್ ವಾಲಾ ಆಗಿದ್ರು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಆದ್ರೆ, ಇದೇ ಟೀ ಮಾರ್ತಿದ್ದ ವ್ಯಕ್ತಿ ಮುಂದೊಂದು ದಿನ ಪ್ರಧಾನಿಯಾಗ್ತಾರೆ ಅಂತಾ ಹೇಳಿದ್ದು ಇದೇ ಕಲ್ಲು ಅಂದ್ರೆ ನೀವು ನಂಬ್ಲೇಬೇಕು. ಅಂದು ಚುನಾವಣೆಯಲ್ಲಿ ಭರ್ಜರಿ ಬಹುಮತದೊಂದಿಗೆ ನರೇಂದ್ರ ಮೋದಿಯವರು ಗೆಲ್ತಾರೆ ಅಂತ ಈ ಕಲ್ಲು ಮೊದಲೇ ಭವಿಷ್ಯ ನುಡಿದಿತ್ತಂತೆ.

ಪ್ರಧಾನಿ ನರೇಂದ್ರ ಮೋದಿ ಮಾತ್ರವಲ್ಲ. ಆರ್ಟ್ ಆಫ್ ಲೀವಿಂಗ್ ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಕೂಡಾ ಈ ಆದಿಶಕ್ತಿಯ ಪವಾಡಗಳನ್ನು ನೋಡಿ ಬೆರಗಾಗಿದ್ದಾರೆ. ಧಾರವಾಡಕ್ಕೆ ಬಂದು ದರ್ಶನ ಕೂಡಾ ಪಡೆದುಕೊಂಡಿದ್ದಾರೆ. ರಾಯಣ್ಣನವರನ್ನು ತಮ್ಮ ಆಶ್ರಮಕ್ಕೂ ಆಹ್ವಾನಿಸಿ ತಮ್ಮ ಭಕ್ತರಿಗೂ ಇದ್ರ ಬಗ್ಗೆ ಹೇಳಿದ್ರು. ಇನ್ನು ಅಡ್ವಾಣಿ, ಅರುಣ್ ಜೇಟ್ಲಿ, ಕಿರಣ್ ಬೇಡಿ ಹೀಗೆ ಸಾಕಷ್ಟು ಜನ ಈ ದೇವಿಯ ಚಮತ್ಕಾರವನ್ನು ಕಂಡು ಚಕಿತರಾಗಿದ್ದಾರೆ.

ಹಾಗಂತ ಈ ಕಲ್ಲು ಮಾತಾಡುತ್ತಾ ಅಂತಾ ನೀವ್ ಕೇಳ್ಬೋದು. ಖಂಡಿತಾ ಮಾತಾಡಲ್ಲ. ರಾಯಣ್ಣ ಅವ್ರ ದೇಹದಲ್ಲಿ ಆವಾಹಿಸಲ್ಪಡೋ ದೇವಿ ಮಾತಾಡ್ತಾಳೆ. ರಾಯಣ್ಣ ಹೇಳೋ ಪ್ರಕಾರ ಈ ಆದಿಶಕ್ತಿಯ ಸ್ವರೂಪವಾದ ಕಲ್ಲು ಪ್ರಪಂಚದ ಎಲ್ಲಾ ಭಾಷೆಗಳನ್ನೂ ಗ್ರಹಿಸಬಲ್ಲದು. ರಾಯಣ್ಣ ತಮಗೆ ಸಿದ್ಧಿಸಿದ ಈ ಅತಿಮಾನುಷ ಶಕ್ತಿಯಿಂದ ಆದಿಶಕ್ತಿಯ ಜೊತೆ ಮಾತಾಡೋಕೆ ಶುರು ಮಾಡಿದ್ರಂತೆ. ಉದಾಹರಣೆಗೆ, ಈ ವರ್ಷ ತನಗೆ ಒಳ್ಳೆ ಕೆಲಸ ಸಿಗುತ್ತಾ ಇಲ್ವಾ ಅಂತಾ ಯಾರಾದ್ರೂ ಪ್ರಶ್ನೆ ಕೇಳಿದ್ರು ಅಂತಿಟ್ಕೊಳ್ಳಿ. ಒಂದ್ವೇಳೆ ಕೆಲಸ ಆಗುತ್ತೆ ಅಂತಂದ್ರೆ, ಈ ಕಲ್ಲನ್ನ ಸುಲಭವಾಗಿ ಎತ್ತೋಕೆ ಸಾಧ್ಯ. ಒಂದು ವೇಳೆ ನೀವು ಯೋಚಿಸ್ತಿರೋ ಕೆಲಸ ಆಗಲ್ಲ ಅಂತಾದ್ರೆ, ಈ ಕಲ್ಲು ಜಪ್ಪಯ್ಯ ಅಂದ್ರೂ ಇರೋ ಜಾಗದಿಂದ ಒಂದಿಂಚೂ ಕದಲೋದಿಲ್ಲ. ಇದೊಂದೇ ಅಲ್ಲ, ಅನೇಕ ಸಮಸ್ಯೆಗಳಿಗೂ ಇಲ್ಲಿ ಪರಿಹಾರ ಸಿಗುತ್ತೆ. ಎಲೆಕ್ಷನ್ ಸಂದರ್ಭದಲ್ಲಂತೂ ಈ ಕಲ್ಲಿಗೆ ಸಿಕ್ಕಾಪಟ್ಟೆ ಡಿಮಾಂಡ್ ಕ್ರಿಯೇಟ್ ಆಗಿದೆ.

-ಕ್ಷಮಾ ಭಾರದ್ವಾಜ್, ಉಜಿರೆ

Share This Article
Leave a Comment

Leave a Reply

Your email address will not be published. Required fields are marked *