ಚಿನ್ನಸ್ವಾಮಿಯಲ್ಲಿ ರನ್ ಮಳೆ- ರಾಜಸ್ಥಾನಕ್ಕೆ 19 ರನ್ ಗೆಲುವು

Public TV
3 Min Read

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದಲ್ಲಿ ರಾಜಸ್ಥಾನ 19 ರನ್ ಜಯ ಪಡೆದಿದೆ. ರಾಜಸ್ಥಾನ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ ಸ್ಯಾಮ್ಸನ್ ಸಿಕ್ಸರ್ ಗಳ ಮಳೆಗೈದು 92 ರನ್ ಗಳಿಸಿ ಮಿಂಚಿದರು.

ಟಾಸ್ ಸೋತು ಮೊಸಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರಾಜಸ್ಥಾನ ಆರಂಭಿಕರಾದ ನಾಯಕ ರಹಾನೆ ಹಾಗೂ ಶಾರ್ಟ್ ಜೋಡಿ 49 ರನ್ ಗಳಿಸಿ ಮೊದಲ ವಿಕೆಟ್ ಗೆ ಉತ್ತಮ ಆರಂಭ ನೀಡಿತು. ಈ ವೇಳೆ 36 ರನ್ ಗಳಿಸಿದ್ದ ರಹಾನೆ (20 ಎಸೆತ, 6 ಬೌಂಡರಿ, 1 ಸಿಕ್ಸರ್) ವೋಕ್ಸ್ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ಔಟಾದರು. ಬಳಿಕ 11 ರನ್ ಗಳಿಸಿದ್ದ ಶಾಟ್, ಚಹಾಲ್ ಗೆ ವಿಕೆಟ್ ಒಪ್ಪಿಸಿದರು.

ಈ ಬಿರುಸಿನ ಬ್ಯಾಟಿಂಗ್ ನಡೆಸಿದ ಸ್ಯಾಮ್ಸನ್ ಮತ್ತು ಬೆನ್ ಸ್ಟೋಕ್ಸ್ (27) ತಂಡದ ಮೊತ್ತವನ್ನು 11 ಓವರ್ ಗಳ ವೇಳೆ 100 ರನ್ ಗಡಿ ದಾಟಿಸಿದರು. ಈ ವೇಳೆ ಚಹಾಲ್ ತಮ್ಮ ಬೌಲಿಂಗ್ ನಲ್ಲಿ ಸ್ಟೋಕ್ಸ್ ವಿಕೆಟ್ ಪಡೆದರು. ಬಳಿಕ ಬಂದ ಬಟ್ಲರ್ 23 ರನ್ ಕಾಣಿಕೆ ನೀಡಿ ಪೆವಿಲಿಯನ್ ಸೇರಿದರು. 18 ನೇ ಓವರ್ ಬಳಿಕ ಸ್ಯಾಮ್ಸನ್ ರನ್ನು ಕೂಡಿಕೊಂಡ ತ್ರಿಪಾಠಿ ಕೇವಲ 5 ಎಸೆತಗಳಲ್ಲಿ ತಲಾ ಒಂದು ಬೌಂಡರಿ, ಸಿಕ್ಸರ್ ನೆರವಿನಿಂದ 14 ರನ್ ಸಿಡಿಸಿ ಅಜೇಯರಾಗಿ ಉಳಿದರು. ರಾಜಸ್ಥಾನದ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ ಸ್ಯಾಮ್ಸನ್ ಕೇವಲ 45 ಎಸೆಗಳಲ್ಲಿ 92 ರನ್ (2 ಬೌಂಡರಿ, 10 ಸಿಕ್ಸರ್) ಸಿಡಿಸಿ ಅಜೇಯರಾಗಿ ಉಳಿದರು. 20 ಓವರ್ ಗಳ ಅಂತ್ಯದ ವೇಳೆಗೆ ರಾಜಸ್ಥಾನ ನಷ್ಟಕ್ಕೆ 217 ರನ್ ಗಳ ಬೃಹತ್ ಮೊತ್ತ ಗಳಿಸಿತ್ತು.

ಆರ್ ಸಿಬಿ ಪರ ಚಹಾಲ್ ಮತ್ತು ವೋಕ್ಸ್ ತಲಾ ಎರಡು ವಿಕೆಟ್ ಪಡೆದರು. ಪಂಜಾಬ್ ವಿರುದ್ಧ ಪಂದ್ಯದಲ್ಲಿ 4 ವಿಕೆಟ್ ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದ ಯಾದವ್ ಈ ಪಂದ್ಯದಲ್ಲಿ 4 ಓವರ್ ಗಳಲ್ಲಿ 59 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು.

ರಾಜಸ್ಥಾನದ ಬೃಹತ್ ಮೊತ್ತವನ್ನು ಬೆನ್ನತ್ತಿದ ಆರ್ ಸಿಬಿ ತಂಡಕ್ಕೆ ಮೊದಲ ಓವರ್ ನಲ್ಲೇ ಮೆಕ್ಲಮ್ (4) ವಿಕೆಟ್ ಪಡೆಯುವ ಮೂಲಕ ಕನ್ನಡಿಗ ಕೃಷ್ಣಪ್ಪ ಗೌತಮ್ ಅಘಾತ ನೀಡಿದರು. ಬಳಿಕ ಡಿ ಕಾಕ್ ರನ್ನು ಸೇರಿಕೊಂಡ ಕೊಹ್ಲಿ ತಂಡ ಬಿರುಸಿನ ಆಟಕ್ಕೆ ಮುಂದಾದರು. ಮೊದಲ ಪವರ್ ಪ್ಲೇ ಮುಕ್ತಾಯದ ವೇಳೆಗೆ ಆರ್ ಸಿಬಿ 64 ರನ್ ಗಳಿಸಿತ್ತು. ಈ ವೇಳೆ ನಿಧಾನ ಗತಿಯ ಬ್ಯಾಟಿಂಗ್ ನಡೆಸುತ್ತಿದ್ದ ಡಿ ಕಾಕ್ 26 ರನ್ ಗಳಿಸಿ ಶಾರ್ಟ್ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಕೇವಲ 30 ಎಸೆತಗಳಲ್ಲಿ 57 ರನ್ (7 ಬೌಂಡರಿ, 2 ಸಿಕ್ಸರ್) ಗಳಿಸಿದ್ದ ನಾಯಕ ಕೊಹ್ಲಿ, ಗೋಪಾಲ್ ಬೌಲಿಂಗ್ ನಲ್ಲಿ ವಿಕೆಟ್ ಒಪ್ಪಿದರು. ಪಂಜಾಬ್ ವಿರುದ್ಧ ಭರ್ಜರಿ ಬ್ಯಾಟಿಂಗ್ ನಡೆಸಿದ ಎಬಿ ಡಿವಿಲಿಯರ್ಸ್ (20) ವಿಕೆಟ್ ಪಡೆಯುವ ಮೂಲಕ ಗೋಪಾಲ್ ಪಂದ್ಯಕ್ಕೆ ತಿರುವು ನೀಡಿದರು. ಬಳಿಕ ಮನ್ ದೀಪ್ ಸಿಂಗ್ (47), ಸುಂದರ್ (35) ಗೆಲುವಿಗಾಗಿ ಹೋರಾಟ ನಡೆಸಿದರು ಆರ್ ಸಿಬಿ ಅಂತಿಮ ವಾಗಿ 20 ಓವರ್ ಗಳಲ್ಲಿ 198 ರನ್ ಗಳಿಸಲಷ್ಟೇ ಶಕ್ತವಾಯಿತು. ರಾಜಸ್ಥಾನ ಪರ ಗೋಪಾಲ್ 2, ಸ್ಟೋಕ್ಸ್, ಶಾರ್ಟ್, ಬೆನ ತಲಾ ವಿಕೆಟ್ ಪಡೆದರು.

ಈ ಪಂದ್ಯದಲ್ಲಿ ಭಾನುವಾರ ವಿಶೇಷವಾಗಿ ಪರಿಸರ ಸ್ನೇಹಿ ಉದ್ದೇಶದಿಂದ ಆರ್ ಸಿಬಿ ತಂಡ ಆಟಗಾರರು ಹಸಿರು ಬಣ್ಣದ ಸಮವಸ್ತ್ರ ಧರಿಸಿ ಕಣಕ್ಕೆ ಇಳಿದಿದ್ದರು.

Share This Article
Leave a Comment

Leave a Reply

Your email address will not be published. Required fields are marked *