ಕಾರವಾರ: ಅನುಮಾನಾಸ್ಪದವಾಗಿ ಚಿರತೆಯೊಂದು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.
ನಗರದ ಹುತ್ಗಾರ್ ರಸ್ತೆ ಪಕ್ಕದಲ್ಲಿ ಎರಡು ವರ್ಷದ ಚಿರತೆ ಮೃತಪಟ್ಟಿದೆ. ಚಿರತೆ ರಸ್ತೆ ಬದಿ ಬಿದ್ದಿರುವುದನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ನಂತರ ಕೂಡಲೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಶವಪರೀಕ್ಷೆ ನಡೆಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.
ಆದರೆ ಚಿರತೆ ಸಾವು ಹಲವು ಅನುಮಾನ ಹುಟ್ಟಿಸಿದ್ದು, ಈ ಭಾಗದಲ್ಲಿ ಈ ತಿಂಗಳು ಸಾವನ್ನಪ್ಪಿದ ಮೂರನೇ ಚಿರತೆ ಇದಾಗಿದೆ. ಮರ ಹತ್ತುವಾಗ ಕೆಳಗೆ ಬಿದ್ದು ಚಿರತೆ ಮೃತಪಟ್ಟಿದೆ ಎಂದು ಅರಣ್ಯ ಅಧಿಕಾರಿಗಳು ಪ್ರಥಮ ಮಾಹಿತಿ ನೀಡಿದ್ದಾರೆ. ಆದರೆ ಇದನ್ನು ಕೊಲ್ಲಲಾಗಿದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.