ವೆಂಕಟರೆಡ್ಡಿ ಮುದ್ನಾಳ್ ಕ್ಷೇತ್ರ ಬದಲಾಯಿಸಬಾರದೆಂದು ವಿಷ ಸೇವಿಸಿದ ಬಿಜೆಪಿ ಕಾರ್ಯಕರ್ತ

Public TV
1 Min Read

ಯಾದಗಿರಿ: ವೆಂಕಟರೆಡ್ಡಿ ಮುದ್ನಾಳ್ ಅವರನ್ನು ಗುರುಮಠಕಲ್ ಕ್ಷೇತ್ರದಿಂದ ಬದಲಾವಣೆ ಮಾಡಬಾರದು ಎಂದು ಬಿಜೆಪಿ ಕಾರ್ಯಕರ್ತನೋರ್ವ ವಿಷ ಸೇವನೆಗೆ ಯತ್ನಿಸಿದ ಘಟನೆಯು ಯಾದಗಿರಿ ನಗರದ ಮುದ್ನಾಳ ಲೇಔಟ್ ನಲ್ಲಿ ನಡೆದಿದೆ.

ಗುರುಮಠಕಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ವೆಂಕಟರೆಡ್ಡಿ ಮುದ್ನಾಳ್ ಅವರು ಬಿಜೆಪಿ ಪಕ್ಷದ ಇನ್ನೊರ್ವ ಆಕಾಂಕ್ಷಿ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ ಎನ್ನುವ ವದಂತಿ ಹಬ್ಬಿತ್ತು. ಕಾರ್ಯಕರ್ತರು ತಪ್ಪಾಗಿ ಅರ್ಥೈಸಿಕೊಳ್ಳಬಾರದೆಂದು ವೆಂಕಟರೆಡ್ಡಿ ಅವರು ಸಭೆ ಕರೆದಿದ್ದರು.

ಬಿಜೆಪಿ ಹೈಕಮಾಂಡ್ ಮಾತನ್ನು ಕೇಳಬೇಕೇ ಅಥವಾ ಗುರಮಠಕಲ್ ಕ್ಷೇತ್ರದ ಕಾರ್ಯಕರ್ತರ ಮಾತನ್ನು ಕೇಳಬೇಕೇ ಎನ್ನುವ ಗೊಂದಲದಲ್ಲಿ ವೆಂಕಟರೆಡ್ಡಿ ಮುದ್ನಾಳ್ ಇದ್ದು, ಸಭೆಯಲ್ಲಿ ಕಣ್ಣೀರು ಹಾಕಿದ್ದಾರೆ.

2013ರ ಚುನಾವಣೆಯಲ್ಲಿ ವೆಂಕಟರೆಡ್ಡಿಯವರು ಕೆಜೆಪಿ ಪಕ್ಷದಿಂದ ಗುರುಮಠಕಲ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಕೆಜೆಪಿ ಪಕ್ಷ ಬಿಜೆಪಿ ಜೊತೆಗೆ ವಿಲೀನವಾದ ಬಳಿಕ ಈ ಬಾರಿ ಬಿಜೆಪಿ ಪಕ್ಷದಿಂದ ವೆಂಕಟರೆಡ್ಡಿ ಗುರುಮಠಕಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

2013 ರ ಚುನಾವಣೆಯಲ್ಲಿ ವೆಂಕಟರೆಡ್ಡಿಯವರು 32,362 ಮತಗಳನ್ನು ಪಡೆದು ಮೂರನೇ ಸ್ಥಾನದಲ್ಲಿದ್ದರು. 3,689 ಮತಗಳ ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಎದರು ಸೋಲನ್ನುಕಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *