ಬಾಬಾ ಬುಡನ್‍ಗಿರಿ ದರ್ಗಾದ ಆಡಳಿತ ಶಾಖಾದ್ರಿಗೆ – ಸುಪ್ರೀಂ ಅನುಮೋದನೆ

Public TV
1 Min Read

ಚಿಕ್ಕಮಗಳೂರು: ಮೂರು ದಶಕಗಳ ಬಾಬಾಬುಡನ್‍ಗಿರಿ ವಿವಾದಕ್ಕೆ ಸುಪ್ರೀಂಕೋರ್ಟ್ ಅಂತ್ಯ ಹಾಡಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್ ಸಮಿತಿ ನೀಡಿದ ವರದಿಯನ್ನು ಸುಪ್ರೀಂಕೋರ್ಟ್ ಅನುಮೋದಿಸಿದ್ದು ಅನುಷ್ಠಾನಕ್ಕೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾ.ರಂಜನ್ ಗೊಗಯ್, ನ್ಯಾ.ಭಾನುಮತಿ ನೇತೃತ್ವದ ದ್ವಿಸದಸ್ಯ ಪೀಠ, ಶ್ರೀಗುರು ದತ್ತಾತ್ರೇಯ ಬಾಬಾ ಬುಡನ್ ದರ್ಗಾದ ಆಡಳಿತ ಉಸ್ತುವಾರಿಯನ್ನು ಶಾಖಾದ್ರಿಗೆ ಹೊಣೆ ವಹಿಸಿದೆ. ಪೂಜಾ ಕೈಂಕರ್ಯ, ನಮಾಜ್ ಸೇರಿದಂತೆ ಎಲ್ಲ ಕಾರ್ಯ ಚಟುವಟಿಕೆಗಳ ಶಾಖಾದ್ರಿ ನೇತೃತ್ವದಲ್ಲಿ ನಡೆಯಬೇಕು. ಇದೊಂದು ಭಾವನಾತ್ಮಕ ವಿಷಯ. ಯಾವುದೇ ಕೋಮಿಗೆ ಧಕ್ಕೆಯಾಗಬಾರದು. ಹಿಂದೂ-ಮುಸ್ಲಿಂ ಎರಡೂ ಧರ್ಮಗಳ ಧಾರ್ಮಿಕ ಕೆಲಸಗಳನ್ನು ಶಾಖಾದ್ರಿ ನಿರ್ವಹಣೆ ಮಾಡಲಿ ಅಂತ ಹೇಳಿದೆ.

1977ರ ಹಿಂದೆ ಶಾಖಾದ್ರಿಗಳ ನೇತೃತ್ವದಲ್ಲಿ ಊರೂಸ್ ನಡೆಯುತ್ತಿತ್ತು, ಯಾವುದೇ ರೀತಿಯ ಹೋಮ-ಹವನ ನಡೆಯುತ್ತಿರಲಿಲ್ಲ ಎಂದು ನಾಗಮೋಹನ್ ದಾಸ್ ನೀಡಿರುವ ಅನ್ವಯ ಸುಪ್ರೀಂ ಕೋರ್ಟ್, 1977ರ ಹಿಂದೆ ಅಲ್ಲಿ ನಡೆಯುತ್ತಿದ್ದ ಪೂಜಾ-ವಿಧಿ-ವಿಧಾನಗಳನ್ನ ಮುಂದುವರೆಸಿಕೊಂಡು ಹೋಗುವಂತೆ ಸೂಚಿಸಿದೆ. ಇನ್ನು ಮುಂದೆ ಬಾಬಾ ಬುಡನ್‍ಗಿರಿ ದರ್ಗಾದಲ್ಲಿ ಮುಜಾವರ್ ನೇತೃತ್ವದಲ್ಲಿ ಪೂಜೆ-ಪುನಸ್ಕಾರಗಳು ನಡೆಯಲಿವೆ.

ಸುಪ್ರೀಂ ಕೋರ್ಟ್ ನ್ಯಾಯಾಲಯ ನಾಗಮೋಹನ್ ದಾಸ್ ವರದಿಯನ್ನು ಎತ್ತಿ ಹಿಡಿದಿರುವ ಕಾರಣ ಕಾಫಿನಾಡಿನಲ್ಲಿ ಪರ-ವಿರೋಧದ ಚರ್ಚೆ ಆರಂಭವಾಗಿದೆ. ಸುಪ್ರೀಂ ಈ ತೀರ್ಪನ್ನು ಜಿಲ್ಲೆಯ ಕೋಮು ಸೌಹಾರ್ದ ವೇದಿಕೆ ಹಾಗೂ ಕೆಲ ಸಂಘಟನೆಗಳು ಸ್ವಾಗತಿಸಿವೆ. ದತ್ತಪೀಠವನ್ನು ಕೇಸರಿಕರಣ ಮಾಡುವ ಹೋದ ಕೋಮು ಶಕ್ತಿಗಳಿಗೆ ಹಿನ್ನಡ ಉಂಟಾಗಿದೆ ಎಂದು ಅಭಿಪ್ರಾಯ ಪಟ್ಟಿವೆ.

ನ್ಯಾಯಾಲಯದ ತೀರ್ಪಿನ ವಿರುದ್ಧ ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷದ್ ಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ್ದು, ಚಿಕ್ಕಮಗಳೂರಿನಲ್ಲಿ ದತ್ತಪೀಠವೇ ಬೇರೆ, ಬಾಬಾಬುಡನ್ ದರ್ಗಾವೇ ಬೇರೆ. ದತ್ತಪೀಠ ಸಂಪೂರ್ಣ ಹಿಂದುಗಳಿಗೆ ಸಲ್ಲಬೇಕು, ಸುಪ್ರೀಂ ತೀರ್ಪೀನ ವಿರುದ್ಧ ಮೇಲ್ಮನವಿ ಸಲ್ಲಿಸಲಾಗುತ್ತದೆ ಎಂದು ಹಿಂದೂ ಸಂಘಟನೆಗಳು ತಿಳಿಸಿವೆ.

ಇದೇ ವೇಳೆ ರಾಜ್ಯ ಸರ್ಕಾರ ರಚಿಸಿರುವ ನಾಗಮೋಹನದಾಸ್ ವರದಿ ಮ್ಯಾಚ್ ಫಿಕ್ಸಿಂಗ್ ಎಂದು ಆರೋಪಿಸಿರುವ ಬಿಜೆಪಿ ನಾಯಕ ಸಿಟಿ ರವಿ, ಈ ಕುರಿತು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *