ಬೆಂಗಳೂರು: ಕಿರುತೆರೆ ನಟ ಕಿರಣ್ ರಾಜ್ ವಿರುದ್ಧ ಮುಂಬೈ ಮಾಡೆಲ್ ಸುಮಯಾ (ಹೆಸರು ಬದಲಾಯಿಸಲಾಗಿದೆ) ದೂರು ನೀಡಿದ್ದು, ಈಗ ಕಿರಣ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಕಿರಣ್ ರಾಜ್, ಕಿನ್ನರಿ ಧಾರವಾಹಿಯ ಹೀರೋ. ಮುಂಬೈನ ಒಶಿವಾರ ಠಾಣೆಯಲ್ಲಿ ಸುಮಯಾ ದೂರು ದಾಖಲಿಸಿದ್ದಾರೆ. ಕಿರಣ್ ಮುಂಬೈಗೆ ಕರೆದೊಯ್ದು ಕಾರಿನಲ್ಲಿ ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲದೇ ಅಕ್ರಮ ಬಂಧನದಲ್ಲಿಟ್ಟಿದ್ದ ಎಂದು ಸುಮಯಾ ದೂರು ದಾಖಲಿಸಿದ್ದಾರೆ.
ಮುಂಬೈ ಪೊಲೀಸರು ಸುಮಯಾ ಅವರ ದೂರನ್ನು ಆಧರಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಮುಂಬೈನಲ್ಲಿ ಕೇಸ್ ದಾಖಲಾಗುತ್ತಿದ್ದಂತೆ ಬೆಂಗಳೂರಿನ ಆರ್.ಆರ್.ನಗರ ಠಾಣೆಯಲ್ಲಿ ಕಿರಣ್ ಪ್ರತಿ ದೂರು ದಾಖಲಿಸಿದ್ದಾರೆ.
ಕಿರಣ್, ಸುಮಯಾ ಪಠಾಣ್ ವಿರುದ್ಧ ಪ್ರತಿ ದೂರು ನೀಡಿದ್ದಾರೆ. ಅಷ್ಟೇ ಅಲ್ಲದೇ ನಾನು ಹಲ್ಲೆ ನಡೆಸಿಲ್ಲ. ನನ್ನ ತಂದೆ-ತಾಯಿ ಮೇಲೆ ಸುಮಯಾ ಹಲ್ಲೆ ನಡೆಸಿದ್ದಾರೆ. ನನ್ನ ಪೋಷಕರನ್ನು ಗೃಹಬಂಧನದಲ್ಲಿಡುವ ಪ್ರಯತ್ನ ಮಾಡಿದ್ದಾಳೆ ಎಂದು ಕಿರಣ್ ರಾಜ್ ಪ್ರತಿ ದೂರು ನೀಡಿದ್ದಾರೆ.
ಆರ್.ಆರ್.ನಗರ ಪೊಲೀಸರು ದೂರು ಆಧರಿಸಿ ಎಫ್ಐಆರ್ ದಾಖಲಿಸಿದ್ದಾರೆ.