ರಾಜ್ಯದ ಹಲವೆಡೆ ಭಾರೀ ಮಳೆ- ಸಿಡಿಲಿಗೆ ಇಬ್ಬರು ಬಲಿ

Public TV
1 Min Read

ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ನಗರ ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆಯಾಗಿದ್ದು, ಚಿಕ್ಕಬಳ್ಳಾಪುರದಲ್ಲಿ ಸಿಡಿಲಿಗೆ ಇಬ್ಬರು ಬಲಿಯಾಗಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ರಾಮನೊಡ್ಡಂಪಲ್ಲಿ ಗ್ರಾಮದ ಸದಾಶಿವ (48) ಜಿ.ನರಸಿಂಹಪ್ಪ (68) ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಗುಡುಗು ಮಿಂಚುವಿನಿಂದ ಪಾರಾಗಲು ಕೆರೆ ಏರಿ ಮೇಲಿನ ದೇಗುಲದ ಬೇವಿನ ಮರದ ಕೆಳಗೆ ಆಶ್ರಯ ಪಡೆದಿದ್ದಾಗ ಸಿಡಿಲು ಹೊಡೆದಿದೆ.

ಮೃತ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದ್ದು, ಸ್ಥಳಕ್ಕೆ ಬಾಗೇಪಲ್ಲಿ ತಹಶೀಲ್ದಾರ್ ಮಹಮದ್ ಅಸ್ಲಾಂ ಭೇಟಿ ನೀಡಿ ತಲಾ 4 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ. ಬಾಗೇಪಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮತ್ತೊಂದೆಡೆ ಚಿಕ್ಕಬಳ್ಳಾಪುರ ತಾಲೂಕಿನ ಮಂಡಿಕಲ್ ಹೋಬಳಿ ಯಲ್ಲಿ ಆಲಿಕಲ್ಲು ಸಹಿತ ಭರ್ಜರಿ ಮಳೆಯಾಗಿದೆ. ರಾಶಿ ರಾಶಿ ಆಲಿಕಲ್ಲು ಕಂಡ ಜನ ಅಚ್ಚರಿಗೊಂಡಿದ್ದಾರೆ. ಆಲಿಕಲ್ಲು ಮಳೆಗೆ ದ್ರಾಕ್ಷಿ ಬೆಳೆ, ಸೇರಿದಂತೆ ತರಕಾರಿ, ಹಣ್ಣು, ಹೂ ತೋಟಗಳೆಲ್ಲಾ ಹಾನಿಗೊಳಗಾಗಿದ್ದು ಕೋಟ್ಯಾಂತರ ರೂಪಾಯಿ ನಷ್ಟ ಸಂಭವಿಸಿದೆ.

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕೋಳಿಕ್ಯಾಪ್ ರೈತರೊಬ್ಬರು ಸಿಡಿಲಿಗೆ ಗಾಯಗೊಂಡಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ದುರ್ಘಟನೆ ನಡೆದಿದೆ. ಹಾಸನದಲ್ಲಿ ಜೆಡಿಎಸ್ ವಿಕಾಸ ಪರ್ವ ಯಾತ್ರೆಗೆ ವರುಣನ ಅಡ್ಡಿ ಪಡಿಸಿದ್ದು, ಮಳೆಯ ನಡುವೆಯೇ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ರೋಡ್ ಶೋ ನಡೆಸಿದ್ದಾರೆ. ರಾಜ್ಯದ ಕೋಲಾರ, ರಾಯಚೂರು, ಹಾಸನ ಜಿಲ್ಲೆಯ ಕೆಲ ಪ್ರದೇಶದಲ್ಲಿ ಭಾರೀ ಮಳೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *