ಸಿಬಿಎಸ್‍ಸಿ ಪ್ರಶ್ನೆಪತ್ರಿಕೆ ಸೋರಿಕೆ- ಇಬ್ಬರು ಶಿಕ್ಷಕರು, ಕೋಚಿಂಗ್ ಸೆಂಟರ್ ಮಾಲೀಕನ ಬಂಧನ

Public TV
1 Min Read

ನವದೆಹಲಿ: ಸಿಬಿಎಸ್‍ಸಿ ದ್ವಿತೀಯ ಪಿಯುಸಿ ಅರ್ಥಶಾಸ್ತ್ರ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ರಿಶಬ್ (ಭೌತ ಶಾಸ್ತ್ರ) ಮತ್ತು ರೋಹಿತ್ (ಗಣಿತ) ಬಂಧಿತ ಶಿಕ್ಷಕರು. ಕೋಚಿಂಗ್ ಸೆಂಟರ್ ಮಾಲೀಕನನ್ನು ತಖ್ವೀರ್ ಎಂದು ಗುರುತಿಸಲಾಗಿದೆ. ಇಬ್ಬರು ಶಿಕ್ಷಕರು ಬೆಳಗ್ಗೆ 9:15 ಸಮಯಕ್ಕೆ ಪ್ರಶ್ನೆ ಪತ್ರಿಕೆಯ ಫೋಟೋಗಳನ್ನು ತೆಗೆದು ಕೋಚಿಂಗ್ ಸೆಂಟರ್ ಮಾಲೀಕನಿಗೆ ಕಳುಹಿಸಿದ್ದಾರೆ. ಮಾಲೀಕನು ವಿದ್ಯಾರ್ಥಿಗಳಿಗೆ ಕಳಿಸಿದ್ದಾನೆ ಎಂಬ ಮಾಹಿತಿಗಳು ಲಭ್ಯವಾಗಿವೆ.

ಎರಡು ರೂಪದಲ್ಲಿ ಸೋರಿಕೆ: ಪ್ರಶ್ನೆಪತ್ರಿಕೆ ಎರಡು ರೂಪದಲ್ಲಿ ಸೋರಿಕೆಯಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ. ಒಂದು ಮುದ್ರಿತ ಪ್ರಶ್ನೆ ಪತ್ರಿಕೆ ವಾಟ್ಸಪ್ ಮೂಲಕ ಹಾಗೂ ಕೈ ಬರಹದ ಪ್ರಶ್ನೆಪತ್ರಿಕೆ ಕೂಡ ಹರಿದಾಡಿದೆ. ದೆಹಲಿಯ ಬವನಾದಲ್ಲಿ ಕೋಚಿಂಗ್ ಸೆಂಟರ್ ಅನ್ನು ನಡೆಸುತ್ತಿದ್ದಾರೆ. ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಸಿಬಿಎಸ್‍ಸಿ ಮತ್ತು ಕೇಂದ್ರ ಸರ್ಕಾರ ದ್ವಿತೀಯ ಪಿಯುಸಿ ಅರ್ಥಶಾಸ್ತ್ರದ ಮರು ಪರೀಕ್ಷೆಗೆ ಆದೇಶಿಸಿದೆ.

ದೇಶಾದ್ಯಂತ ಏಪ್ರಿಲ್ 25 ರಂದು ದ್ವಿತೀಯ ಪಿಯುಸಿ ಅರ್ಥಶಾಸ್ತ್ರದ ಮರುಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿ ದೊರೆಯುವರೆಗೂ 10ನೇ ತರಗತಿ ಗಣಿತಶಾಸ್ತ್ರದ ಮರು ಪರೀಕ್ಷೆ ನಿರ್ಧಾರವನ್ನು ಮುಂದೂಡಿದ್ದೇವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸೋರಿಕೆಯ ಹೆಚ್ಚಿನ ಮಾಹಿತಿ ದೊರೆತ ನಂತರ 10ನೇ ತರಗತಿ ಗಣಿತಶಾಸ್ತ್ರದ ಮರು ಪರೀಕ್ಷೆ ದೆಹಲಿ, ಹರಿಯಾಣ ವಲಯದಲ್ಲಿ ಮಾತ್ರ ನಡೆಯಲಿದೆ. ಮರುಪರೀಕ್ಷೆ ಜುಲೈನಲ್ಲಿ ನಡೆಯುವ ಸಾಧ್ಯತೆಗಳಿವೆ ಎಂದು ಸಚಿವರು ತಿಳಿಸಿದ್ದಾರೆ.

ಸಿಬಿಎಸ್‍ಸಿ 10ನೇ ತರಗತಿ ಗಣಿತ ಪ್ರಶ್ನೆಪತ್ರಿಕೆ ಸೋರಿಕೆ ವಿಚಾರವಾಗಿ ಜಾರ್ಖಂಡ್ ಪೊಲೀಸರು ಚಾತ್ರ ಜಿಲ್ಲೆಯಲ್ಲಿ 12 ಜನ ವಿದ್ಯಾರ್ಥಿಗಳು ಹಾಗೂ ಕೋಚಿಂಗ್ ಸೆಂಟರ್ ಸಿಬ್ಬಂಧಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *