ರಾಹುಲ್‍ಗೆ ಎನ್‍ಸಿಸಿ ಟ್ರೈನಿಂಗ್ ಬಗ್ಗೆ ಗೊತ್ತೇ ಇಲ್ಲ-ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆದ ರಾಗಾ

Public TV
3 Min Read

ಮೈಸೂರು: ಮೈಸೂರು ಕರ್ನಾಟಕ ಪ್ರಾಂತ್ಯದಲ್ಲಿ ಕಾಂಗ್ರೆಸ್ ಬಲವರ್ಧನೆಗಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭರ್ಜರಿ ಕ್ಯಾಂಪೇನ್ ನಡೆಸ್ತಿದ್ದಾರೆ. ಈ ವೇಳೆ ಮೈಸೂರಿನ ಮಹಾರಾಣಿ ಕಲಾ ಮತ್ತು ವಿಜ್ಞಾನ ಕಾಲೇಜ್ ವಿದ್ಯಾರ್ಥಿನಿಯರ ಜೊತೆ ರಾಹುಲ್ ಗಾಂಧಿ ಸಂವಾದ ನಡೆಸಿದ್ರು. ವಿದ್ಯಾರ್ಥಿನಿಯರು ರಾಹುಲ್ ಗಾಂಧೀ ಅವರಿಗೆ ನೇರ ಪ್ರಶ್ನೆಗಳನ್ನು ಕೇಳಿ ಉತ್ತರವನ್ನು ಪಡೆದುಕೊಂಡರು.

ಸಂವಾದದಲ್ಲಿ ವಿದ್ಯಾರ್ಥಿನಿ ನೀವು ಅಧಿಕಾರಕ್ಕೆ ಬಂದರೆ ಎನ್‍ಸಿಸಿ ಯ ‘ಸಿ’ ಸರ್ಟಿಫಿಕೇಟ್ ಪಡೆದವರಿಗೆ ಯಾವ ಸೌಲಭ್ಯ ಕಲ್ಪಿಸುತ್ತೀರಿ? ಅಂತಾ ಪ್ರಶ್ನೆ ಮಾಡಿದ್ರು. ಎನ್‍ಸಿಸಿ ಯ ತರಬೇತಿಯ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ. ಆದರೆ, ದೇಶದ ಯುವ ಪೀಳಿಗೆಯ ವಿದ್ಯಾಭ್ಯಾಸ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ಕೆಲಸ ಮಾಡುತ್ತೇವೆ ಅಂತಾ ಅಂದ್ರು. ಇದೇ ಪ್ರಶ್ನೆಯನ್ನು ದಾಳವಾಗಿ ಬಳಸಿಕೊಂಡ ಕೆಲವರು ಎನ್‍ಸಿಸಿ ಗೊತ್ತಿಲ್ಲದವ್ರು ದೇಶದ ಪ್ರಧಾನಿ ಆದೆರೆ ಹೇಗೆ ಅಂತಾ ಟ್ರೋಲ್ ಮಾಡಲಾರಂಭಿಸಿದ್ದಾರೆ. ಇದನ್ನೂ ಓದಿ: ಕನ್ನಡದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿನಿಗೆ ರಾಹುಲ್ ಗಾಂಧಿ ಹೀಗಂದ್ರು

ರಾಹುಲ್ ಗಾಂಧಿ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ ಹೀಗಿತ್ತು:

ರಾಹುಲ್ ಸರ್ ಅಂತಾ ಪ್ರಶ್ನೆ ಆರಂಭಿಸಿದ ವಿದ್ಯಾರ್ಥಿನಿಗೆ…ನನ್ನನ್ನು ಕೇವಲ ರಾಹುಲ್ ಅಂತಾ ಸಂಬೋಧಿಸಿ ಎಂದ ರಾಹುಲ್ ಗಾಂಧಿ. ತಕ್ಷಣ ಎಸ್… ರಾಹುಲ್ ಅಂತಾ ಸಂಬೋಧಿಸಿದ ವಿದ್ಯಾರ್ಥಿನಿ.

ಪ್ರಶ್ನೆ: ನಿಮಗೆ ದೇಶ ಕಟ್ಟುವ ವಿಚಾರದಲ್ಲಿ ಇರುವ ಸೂತ್ರ ಏನು?
ರಾಹುಲ್ ಗಾಂಧಿ: ಬಿಜೆಪಿದು, ಆರ್ ಎಸ್ ಎಸ್ ದು ಒಂದು ದೇಶ, ಒಂದು ಐಡಿಯಾ. ಕಾಂಗ್ರೆಸ್ ದು ಒಂದು ದೇಶ, ಹಲವು ಅಭಿಪ್ರಾಯ. ಇಲ್ಲಿ ಎಲ್ಲರಿಗೂ ಅವರದೇ ಚಿಂತನೆಗಳು ಇರುತ್ತವೆ. ಅವರದೇ ಅಭಿಪ್ರಾಯ ಇರುತ್ತವೆ ಅದನ್ನು ನಾವು ಗೌರವಿಸುತ್ತೇವೆ. ಬಿಜೆಪಿ ಆರ್ ಎಸ್ ಎಸ್ ಗೆ ತಾನು ಒಪ್ಪಿರುವ ಅಭಿಪ್ರಾಯ ಎಲ್ಲಾ ಒಪ್ಪಬೇಕು ಎಂಬ ಧೋರಣೆ ಇದೆ.

ಪ್ರಶ್ನೆ: ಕನ್ನಡದಲ್ಲಿ ಪ್ರಶ್ನೆ ಕೇಳಿದ ವಿದ್ಯಾರ್ಥಿನಿ. ಇಂಗ್ಲೀಷ್ ನಲ್ಲಿ ಪ್ರಶ್ನೆ ಕೇಳೋಕೆ ಮಾತ್ರ ಅವಕಾಶ ಎಂದು ಅಧ್ಯಾಪಕರು.
ರಾಹುಲ್‍ಗಾಂಧಿ: ನೀವು ಕನ್ನಡದಲ್ಲೆ ಮಾತನಾಡಿ. ನಾನು ಅದನ್ನು ಇಂಗ್ಲಿಷ್ ಗೆ ತರ್ಜುಮೆ ಮಾಡಿಸಿ ಕೊಳ್ತಿನಿ.

ಪ್ರಶ್ನೆ: ಎಲ್ಲಾ ವಿದ್ಯಾರ್ಥಿಗಳನ್ನು ಯಾಕೆ ನಿಮ್ಮ ಸರ್ಕಾರ  ಸಮಾನವಾಗಿ ಕಾಣುವುದಿಲ್ಲ. ಉದಾಹರಣೆಗೆ ಲ್ಯಾಪ್ ಟ್ಯಾಪ್ ನೀಡುವ ವಿಚಾರ.
ರಾಹುಲ್ ಗಾಂಧಿ: ನಿಮ್ಮ ಪ್ರಶ್ನೆ ಕರ್ನಾಟಕ ರಾಜ್ಯ ಸರ್ಕಾರಕ್ಕಾ..? ಹಾಗಾದರೆ ಸಿಎಂ ಉತ್ತರ ಕೊಡುತ್ತಾರೆ.
ಸಿಎಂ: ಆರ್ಥಿಕ ಅಸಮಾನತೆ ನಿವಾರಣೆ ದೃಷ್ಟಿಯಿಂದ ಹೀಗೆ ಮಾಡಬೇಕಾಗುತ್ತೆ. ಇದು ಸಾಮಾಜಿಕ ನ್ಯಾಯ ಒದಗಿಸುವ ಪರಿ. ಆದರೆ ಮುಂದಿನ ಏಪ್ರಿಲ್ ನಿಂದ ಪಿಯು ಪಾಸಾದ ಎಲ್ಲಾ ವಿದ್ಯಾರ್ಥಿ ನಿಯರಿಗೂ ಲ್ಯಾಪ್ ಟಾಪ್ ಕೊಡುತ್ತೇವೆ.

ಪ್ರಶ್ನೆ : ಸಿಂಗಾಪುರ್ ನಲ್ಲಿ ಒಂದು ಬಗೆಯ ಟ್ಯಾಕ್ಸ್ ಕಟ್ಟಿಕೊಂಡು ದೇಶದ ಎಲ್ಲಾ ಜನರಿಗೂ ಆರೋಗ್ಯ ವಿಮೆ ನೀಡಲಾಗುತ್ತೆ. ನಮ್ಮಲ್ಲಿ ಇಷ್ಟು ಬಗೆಯ ಟ್ಯಾಕ್ಸ್ ಕಟ್ಟಿಕೊಂಡು ಯಾಕೆ ಸೌಲಭ್ಯ ಕೊಡಲು ಆಗುತ್ತಿಲ್ಲ. ಜಿಎಸ್ ಟಿ ಬಗ್ಗೆ ನಿಮ್ಮ ನಿಲುವೇನು?
ರಾಹುಲ್ ಗಾಂಧಿ: ನೀವು ತಪ್ಪು ವ್ಯಕ್ತಿಯ ಬಳಿ ಪ್ರಶ್ನೆ ಕೇಳುತ್ತಿದ್ದೀರಿ. ಈ ಪ್ರಶ್ನೆಯನ್ನ ಮೋದಿಜಿ ಬಳಿ ಕೇಳಿ ಎಂದ ರಾಗಾ, ತಕ್ಷಣ ನೀವು ಪ್ರಧಾನಿಯಾದರೇ ಜಿಎಸ್‍ಟಿ ಹೇಗಿರುತ್ತೆ ಎಂದ ವಿದ್ಯಾರ್ಥಿನಿ.? ಕಾಂಗ್ರೆಸ್ 2019ರಲ್ಲಿ ಅಧಿಕಾರಕ್ಕೆ ಬಂದರೆ ಗಬ್ಬರ್ ಸಿಂಗ್ ಟ್ಯಾಕ್ಸ್ ಇರೋದಿಲ್ಲ. ಈಗ ಜಿಎಸ್‍ಟಿಯಲ್ಲಿರುವ 5 ವಿಭಾಗಗಳು ಇರೋಲ್ಲ. ಕಾಂಗ್ರೆಸ್ ನಿಲುವು ಒಂದೆ ಅದು ‘ಒಂದೇ ದೇಶ, ಒಂದೇ ತೆರಿಗೆ.’ ಅದು ಸಹ 28% ಇರೋದಿಲ್ಲ.

ಪ್ರಶ್ನೆ : ಓದು ಮುಗಿದ ಮೇಲೆ ಸ್ವಂತ ಉದ್ಯೋಗ ಮಾಡಲು ಬ್ಯಾಂಕ್ ಗಳಲ್ಲಿ ಸುಲಭವಾಗಿ ಲೋನ್ ಸಿಗುವಂತೆ ಮಾಡಿ.
ರಾಹುಲ್ ಗಾಂಧಿ: ನೀರವ್ ಮೋದಿ ತರಹದ ವ್ಯಕ್ತಿಗಳಿಗೆ ಈ ದೇಶದ ಬ್ಯಾಂಕ್ ಗಳಲ್ಲಿ ಸುಲಭವಾಗಿ ಲೋನ್ ಸಿಗುತ್ತೆ. ಸಣ್ಣ, ಮಧ್ಯಮ ವರ್ಗದ ಉದ್ಯಮಿಗಳಿಗೆ ಬ್ಯಾಂಕ್ ಗಳಲ್ಲಿ ಸುಲಭವಾಗಿ ಲೋನ್ ಸಿಗಲ್ಲ. ಇದು ದುರಂತ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಇದನ್ನು ತಪ್ಪಿಸಲಿದೆ.

ಪ್ರಶ್ನೆ : ನೀವ್ ಯಾಕೆ ರಾಜಕೀಯಕ್ಕೆ ಬಂದ್ರೀ…? ಇದನ್ನು ಬಿಟ್ಟು ಬೇರೆ ವೃತ್ತಿ ಮಾಡಬೇಕು ಅಂತಾ ಯಾವತ್ತಾದರೂ ಅನ್ನಿಸಿದೆಯಾ?
ರಾಹುಲ್ ಗಾಂಧಿ: ನಮ್ಮದು ರಾಜಕೀಯದ ಕುಟುಂಬ. ನನ್ನ ತಂದೆ ಕೊಲೆಯಾದ ಮೇಲೆ ನನಗೆ ರಾಜಕೀಯಕ್ಕೆ ಬರಬೇಕಾಯಿತು. ಇದು ನನಗೆ ವೃತ್ತಿಯಲ್ಲ. ನನ್ನ ಜೀವನ. ನಾನು ಇಲ್ಲಿ ಸಂತೋಷವಾಗಿದ್ದೀನಿ. ಬೇರೆ ಪರ್ಯಾಯ ವೃತ್ತಿ ಬಗ್ಗೆ ಚಿಂತಿಸಿಲ್ಲ.

ಪ್ರಶ್ನೆ: ಯುವ ಜನರು ರಾಜಕೀಯಕ್ಕೆ ಬರಬಹುದಾ..?
ರಾಹುಲ್‍ಗಾಂಧಿ: ನೀವೆಲ್ಲಾ ಖಂಡಿತಾ ರಾಜಕೀಯಕ್ಕೆ ಬನ್ನಿ. ದೇಶ ಕಟ್ಟಲು ಯುವ ಪೀಳಿಗೆಯ ಚಿಂತನೆಗಳು ರಾಜಕೀಯಕ್ಕೆ ಅವಶ್ಯಕತೆ ಇದೆ.

ಸಂವಾದದ ಬಳಿಕ ವಿದ್ಯಾರ್ಥಿನಿಯರೆಲ್ಲಾ ತಮ್ಮ ನೆಚ್ಚಿನ ನಾಯಕ ರಾಹುಲ್ ಗಾಂಧಿ ಜೊತೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ರು.

Share This Article
Leave a Comment

Leave a Reply

Your email address will not be published. Required fields are marked *