ಕ್ರೇನ್ ಮೂಲಕ ಸಚಿವ ಶಿವಕುಮಾರ್ ಗೆ 300 ಕೆ.ಜಿ ತೂಕದ ಸೇಬಿನ ಹಾರ ಹಾಕಿ ಸನ್ಮಾನ!

Public TV
1 Min Read

ಮಂಡ್ಯ: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ನೂರಾರು ಸೇಬು ಹಣ್ಣುಗಳುವುಳ್ಳ ಬೃಹತ್ ಹಾರವನ್ನು ಹಾಕಿ ಸನ್ಮಾನಿಸಲಾಗಿದೆ.

ಶ್ರೀರಂಗಪಟ್ಟಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಇಂಡವಾಳು ಸಚ್ಚಿದಾನಂದ್ ಅವರು ಈ ಹಾರವನ್ನು ಹಾಕಿಸಿದ್ದಾರೆ. ಕ್ರೇನ್ ಮೂಲಕ 300 ಕೆ.ಜಿ. ತೂಕವುಳ್ಳ ಸೇಬಿನ ಹಾರ ಹಾಕುತ್ತಿದ್ದಂತೆ ಡಿ.ಕೆ.ಶಿವಕುಮಾರ್ ಸೇಬನ್ನು ಕಿತ್ತು ತಿಂದು ಜನರತ್ತ ಸಂತೋಷದಿಂದ ಕೈ ಬೀಸಿದರು. ಸೇಬಿನ ಹಾರಕ್ಕೆ ಬರೋಬ್ಬರಿ 1 ಲಕ್ಷದ 60 ಸಾವಿರ ರೂ. ಖರ್ಚಾಗಿದೆ ಅಂತಾ ತಿಳಿದು ಬಂದಿದೆ.

ಕ್ಷೇತ್ರದಲ್ಲಿನ ನಾಯಕರ ಬಂಡಾಯ ಶಮನ ಮಾಡಲು ಸಚಿವರು ಶ್ರೀರಂಗಪಟ್ಟಣ ಕ್ಷೇತ್ರಕ್ಕೆ ಆಗಮಿಸಿದ್ದರು. ಈ ವೇಳೆ ಟಿಕೆಟ್ ಆಕಾಂಕ್ಷಿಯಾಗಿರುವ ಸಚ್ಚಿದಾನಂದ್ ಅವರು ಅದ್ಧೂರಿ ಸ್ವಾಗತದ ಮೂಲಕ ಸಚಿವರನ್ನು ಓಲೈಕೆಗೆ ಮುಂದಾಗಿದ್ದಾರೆ. ಸುಮಾರು 10 ಕಿ.ಮೀ.ವರೆಗೆ ನಡೆದ ಮೆರವಣಿಗೆಯಲ್ಲಿ ಕ್ರೇನ್ ಮೂಲಕ ಹೂ ಮಳೆ ಸುರಿಸುವ ಮೂಲಕ ಸಚ್ಚಿದಾನಂದ್ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ರು.

ಬೃಹತ್ ಮತ್ತು ವಿಭಿನ್ನ ಹಾರ ಹಾಕಿದ್ದಕ್ಕೆ ಪರ-ವಿರೋಧಗಳು ಚರ್ಚೆ ಆಗ್ತಿವೆ. ಹಣವುಳ್ಳವರ ರಾಜಕೀಯ ಅಂತಾ ಕೆಲವರು ಟೀಕಿಸಿದ್ರೆ, ಇನ್ನು ಕೆಲವರು ಅಭಿಮಾನದ ಹಾರ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಚಿವರಿಗೆ ಹಾರ ಹಾಕಿದ ನಂತರ ಸ್ಥಳದಲ್ಲಿ ನೆರೆದಿದ್ದ ಕಾರ್ಯಕರ್ತರು ಸೇಬು ಹಣ್ಣಿಗಾಗಿ ಕಿತ್ತಾಡಿದ ಘಟನೆಯೂ ನಡೆಯಿತು.

Share This Article
Leave a Comment

Leave a Reply

Your email address will not be published. Required fields are marked *