ಕಾರು ಬೈಕ್ ನಡುವೆ ಅಫಘಾತ, ಬೈಕ್ ಸವಾರ ಸಾವು- ಬೈಕ್ ನ ಹಿಂಬದಿಯಲ್ಲಿ ಕೂತಿದ್ದ ಪ್ರಿಯತಮೆ ವಿರುದ್ಧವೇ ಕೊಲೆ ಆರೋಪ

Public TV
1 Min Read

ಚಿಕ್ಕಬಳ್ಳಾಪುರ: ಕಾರು ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರನೋರ್ವ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಅಣಕನೂರು ಗೇಟ್ ಬಳಿ ನಡೆದಿದೆ.

ಕಾಮಶೆಟ್ಟಿಹಳ್ಳಿ ಗ್ರಾಮದ ಆನಂದ್ (26) ಮೃತ ಬೈಕ್ ಸವಾರ. ಆದರೆ ಪ್ರಕರಣ ತಿರುವು ಪಡೆದುಕೊಂಡಿದ್ದು, ಇದು ಅಪಘಾತ ಅಲ್ಲ ಕೊಲೆ ಎಂದು ಆರೋಪಿಸಲಾಗುತ್ತಿದೆ. ಬೈಕ್ ನ ಹಿಂಬದಿಯಲ್ಲಿದ್ದ ಆನಂದ್ ನ ಪ್ರಿಯತಮೆ ಗಾಯತ್ರಿ ಕೊಲೆ ಮಾಡಿ ಈ ರೀತಿ ಅಪಘಾತದ ನಾಟಕವಾಡುತ್ತಿದ್ದಾಳೆ ಎಂದು ಮೃತ ಆನಂದ್ ಸಂಬಂಧಿಕರು ದೂರಿದ್ದಾರೆ.

ಈ ಘಟನೆಯಲ್ಲಿ ಗಾಯತ್ರಿಗೆ ಯಾವುದೇ ಗಾಯಗಳಾಗಿಲ್ಲ. ಇದರಿಂದ ಗಾಯತ್ರಿ ಮೇಲೆ ಅನುಮಾನ ಮತ್ತಷ್ಟು ಜಾಸ್ತಿಯಾಗಿದೆ. ಆಸಲಿಗೆ ಮೃತ ಆನಂದ್‍ಗೆ ಮದುವೆಯಾಗಿ ಮಗು ಇದ್ದರೂ ಗಂಡ ಬಿಟ್ಟಿದ್ದ ಗಾಯತ್ರಿ ಜೊತೆ ಆನಂದ್ ಅಕ್ರಮ ಸಂಬಂಧ ಹೊಂದಿದ್ದನು.

ಈ ಬಗ್ಗೆ ಪೊಲೀಸರ ವಿಚಾರಣೆ ವೇಳೆ ಪ್ರತಿಕ್ರಿಯಿಸಿರುವ ಗಾಯತ್ರಿ ನನ್ನ ಗಂಡ ಬಿಟ್ಟ ನಂತರ ನಾನು ಅನಂದ್ 6 ವರ್ಷಗಳಿಂದ ಜೊತೆಯಾಗಿದ್ದೇವೆ. ಆದರೆ ಕಳೆದ ಒಂದು ತಿಂಗಳಿನಿಂದ ಆನಂದ್ ಹಾಗೂ ನನ್ನ ನಡುವೆ ವೈಮನಸ್ಸು ಉಂಟಾಗಿತ್ತು. ಹೀಗಾಗಿ ಸೋಮವಾರ ಚಿಕ್ಕಬಳ್ಳಾಪುರದಲ್ಲಿ ನಾನು ಆನಂದ್‍ಗೆ ಸಿಕ್ಕಿದಾಗ, ನನ್ನ ಮೇಲೆ ಬೇರೋಬ್ಬರ ಜೊತೆ ಆಕ್ರಮ ಸಂಬಂಧ ಆರೋಪಿಸಿ ಹಲ್ಲೆ ಮಾಡಿದ. ಬಳಿಕ ನನ್ನನ್ನ ತನ್ನ ಬೈಕಿನಲ್ಲಿ ಕೂರಿಸಿಕೊಂಡ. ಕೊನೆಗೆ ನಾನು ಅಪ್ಪಿ ತಪ್ಪಿ ಓಡಿ ಹೋಗಬಾರದು ಎಂದು ನನ್ನ ವೇಲ್‍ನಿಂದ ಆತನ ಸೊಂಟಕ್ಕೆ ಕಟ್ಟಿಕೊಂಡ. ಆದರೆ ಅಣಕನೂರು ಬಳಿ ನಾವು ತೆರಳುತ್ತಿದ್ದ ವೇಳೆ ಬೈಕಿಗೆ ಕಾರು ಡಿಕ್ಕಿ ಹೊಡೆಯಿತು. ತದನಂತರ ನನಗೆ ಪ್ರಜ್ಞೆ ತಪ್ಪಿದ್ದು ಅಮೇಲೆ ಏನಾಯಿತು ಅಂತ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಮತ್ತೊಂದೆಡೆ ಅಪಘಾತ ಮಾಡಿದ ಕಾರು ಸಹ ಕಾಣೆಯಾಗಿರುವುದು ಬಹಳಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

Share This Article
Leave a Comment

Leave a Reply

Your email address will not be published. Required fields are marked *