ಚಿಕ್ಕಬಳ್ಳಾಪುರ: ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಮೇಲೆ ಜೆಡಿಎಸ್ ಕಾರ್ಯಕರ್ತರು ಮುಗಿಬಿದ್ದು ಹಲ್ಲೆ ನಡೆಸಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ದೇವಿಶೆಟ್ಟಿಹಳ್ಳಿ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಜೆಡಿಎಸ್ ಕಾರ್ಯಕರ್ತ ರಮೇಶ್ ಹಾಗೂ ಆತನ ಕಡೆಯವರು, ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅರುಣ್ ಎಂಬಾತನ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಏನಿದು ಘಟನೆ: ಕಳೆದ ಗುರುವಾರ ರಾತ್ರಿ ಜೆಡಿಎಸ್ ಕಾರ್ಯಕರ್ತ ರಮೇಶ್ ಎಂಬಾತ ಗ್ರಾಮದಲ್ಲೇ ತನ್ನ ಬೈಕ್ ನಿಂದ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಈ ವೇಳೆ ಬೈಕ್ ನಿಂದ ಬಿದ್ದ ರಮೇಶ್ ನನ್ನ ಕಾಂಗ್ರೆಸ್ ಕಾರ್ಯಕರ್ತ ಅರುಣ್ ಮೇಲೆತ್ತಿದ್ದಾನೆ. ಆದರೆ ಕುಡಿದ ಅಮಲಿನಲ್ಲಿದ್ದ ರಮೇಶ್, ಅರುಣ್ ತನ್ನನ್ನು ಬೈಕಿನಿಂದ ಕೆಳಗೆ ಬೀಳಿಸಿದ್ದಾನೆ ಎಂದು ಗಲಾಟೆ ನಡೆಸಿದ್ದಾನೆ. ಬಳಿಕ ಘಟನೆ ಕುರಿತು ಶುಕ್ರವಾರ ಬೆಳಿಗ್ಗೆ ಮತ್ತೆ ಜಗಳ ಶುರುವಾಗಿದ್ದು ಅರುಣ್ ಮೇಲೆ ರಮೇಶ್ ಕಡೆಯವರು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ಈ ಘಟನೆ ಸಂಬಂಧ ಪರಸ್ಪರರು ನಂದಿಗಿರಿಧಾಮ ಪೊಲೀಸರ ಸಮ್ಮುಖದಲ್ಲಿ ರಾಜಿ ಸಂಧಾನ ಮಾಡಿಕೊಂಡು ಇತ್ಯರ್ಥ ಮಾಡಿಕೊಂಡಿದ್ದಾರೆ. ಆದರೆ ಚುನಾವಣಾ ಸಮಯದಲ್ಲಿ ಜೆಡಿಎಸ್ ಕಾರ್ಯಕಯರ್ತರು ಮಾಡಿದ್ದು ಎಷ್ಟು ಸರಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ.
https://www.youtube.com/watch?v=iGtS_fAQiug