ಎಐ ಬಗ್ಗೆ ಹೇಳೋ ಆಧುನಿಕ ತಂತ್ರಜ್ಞಾನಕ್ಕಿಂತ ಕುಂಡಲಿ ಮೇಲು: ಹೆಗಡೆ

Public TV
1 Min Read

ಹುಬ್ಬಳ್ಳಿ: ಕಂಪ್ಯೂಟರ್ ಸಹಾಯದಿಂದ ನಮ್ಮ ಕೃತಕ ಬುದ್ಧಿಮತ್ತೆ(ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಬಗ್ಗೆ ಹೇಳುವ ಆಧುನಿಕ ತಂತ್ರಜ್ಞಾನಕ್ಕಿಂತ ನಮ್ಮ ಹಿರಿಯರು ಬರೆಯುತ್ತಿದ್ದ ಕುಂಡಲಿಗಳೇ ಮೇಲು ಎಂದು ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ.

ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಆಯೋಜನೆ ಮಾಡಿದ್ದ ಇ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಐ ಬಳಸಿ ನಮ್ಮ ಸಂಪೂರ್ಣ ಮಾಹಿತಿಯನ್ನು ಕ್ರೋಢಿಕರಿಸಿ ಕೊಟ್ಟರೆ ಅದನ್ನು ಆಧುನಿಕ ತಂತ್ರಜ್ಞಾನ ಎಂದು ಒಪ್ಪಿಕೊಳ್ಳುತ್ತೇವೆ. ಆದರೆ, ಕೇವಲ ಜನ್ಮದಿನಾಂಕ, ಸಮಯ ಕೊಟ್ಟರೆ ಸಾಕು, ಆ ವ್ಯಕ್ತಿಯನ್ನೂ ನೋಡದೆ ವ್ಯಕ್ತಿತ್ವ, ಬಣ್ಣ, ನಿಲುವು, ಅವನ ಆರೋಗ್ಯ ಮತ್ತು ಅವನು ಎಂದು ಸಾಯುತ್ತಾನೆ ಎಂಬುದನ್ನು ನಮ್ಮ ಕುಂಡಲಿ ಹೇಳುತ್ತದೆ ಎಂದು ತಿಳಿಸಿದರು.

ಕುಂಡಲಿ ಹೇಳಿದ್ದನ್ನು ನಾವು ಒಪ್ಪುವುದಿಲ್ಲ. ಯಾಕೆಂದರೆ ನಮಗೆ ಹಿತ್ತಲ ಗಿಡ ಮದ್ದಲ್ಲ. ನಾವು ನಮ್ಮ ಭಾಷೆಯಲ್ಲಿ ಹೇಳಿದರೆ ಅದಕ್ಕೆ ಬೆಲೆ ಇಲ್ಲ. ಆದರೆ ಅವರ ಭಾಷೆಯಲ್ಲಿ ಹೇಳಿದರೆ ಹೊಸ ಆವಿಷ್ಕಾರ ಎಂದು ಹೇಳುತ್ತೇವೆ ಎಂದು ಅಭಿಪ್ರಾಯಪಟ್ಟರು.

ಅಧ್ಯಾತ್ಮ ತಳಹದಿಯಲ್ಲಿ ಜಗತ್ತಿಗೆ ನಾವು ಶೂನ್ಯ ಕೊಟ್ಟಿದ್ದೇವೆ. ಭಾರತ ಜಗತ್ತಿಗೆ ಶೂನ್ಯವನ್ನು ಕೊಡುಗೆಯಾಗಿ ಕೊಡದೇ ಇದ್ದರೆ, ಜಗತ್ತಿನಲ್ಲಿ ಈ ರೀತಿಯ ತಾಂತ್ರಿಕ ಆವಿಷ್ಕಾರಗಳು ನಡೆಯುತ್ತಿರಲಿಲ್ಲ. ನಾನು ಹೇಳುತ್ತಿಲ್ಲ, ವಿಜ್ಞಾನಿ ಐನ್ ಸ್ಟೈನ್ ಹೇಳಿರುವ ಮಾತು. ಆದರೆ ಈ ಮಾತನ್ನು ಅನಂತಕುಮಾರ ಹೆಗಡೆ ಹೇಳಿದ್ದರೆ ಚಡ್ಡಿ ಹಾಕಿಕೊಂಡು ಹೇಳಿದ ಎಂದು ಎಡಬಿಡಂಗಿಗಳು ಹೇಳುತ್ತಾರೆ ವ್ಯಂಗ್ಯವಾಡಿದರು.

ಈ ವೇಳೆ, ನಮ್ಮ ಇತ್ತೀಚಿನ ಕವಿಗಳು ಕನಸಲ್ಲಿ ಕಂಡದನ್ನು ಬೆಳಗಿನಲ್ಲಿ ಶಬ್ದಗಳಲ್ಲಿ ಜೋಡಿಸಿದ ಹಾಗೆ ಬರೆಯುತ್ತಾರೆ. ಅದಕ್ಕೆ ಯಾವುದೇ ಅರ್ಥ, ಛಂದಸ್ಸು, ಅಲಂಕಾರ ಇರುವುದಿಲ್ಲ ಎಂದು ಹೇಳಿ ತನ್ನನ್ನು ಟೀಕಿಸುವ ಸಾಹಿತಿಗಳಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.

 

Share This Article
Leave a Comment

Leave a Reply

Your email address will not be published. Required fields are marked *