ಮುಷ್ಯಗಳ ದಾಳಿಯಿಂದ 10ಕ್ಕೂ ಹೆಚ್ಚು ಮಂದಿಗೆ ಗಾಯ – ಬಡಿಗೆ ಹಿಡ್ಕೊಂಡು ಗ್ರಾಮಸ್ಥರ ಓಡಾಟ, ಶಾಲಾ ಮಕ್ಕಳ ಪರದಾಟ

Public TV
1 Min Read

ದಾವಣಗೆರೆ: ಮುಷ್ಯಗಳ ಹಾವಳಿಯಿಂದ ಗ್ರಾಮಸ್ಥರೆಲ್ಲ ಭಯದ ವಾತಾವರಣದಲ್ಲಿ ಜೀವನ ಮಾಡುತ್ತಿರುವ ಘಟನೆ ದಾವಣಗೆರೆ ಹರಿಹರ ತಾಲೂಕಿನ ನಂದಿತಾವರೆ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ತುಂಬೆಲ್ಲ ನೂರಾರು ಮುಷ್ಯಗಳು ಇದ್ದು, ಜನರು ನೆಮ್ಮದಿಯಿಂದ ಗ್ರಾಮದಲ್ಲಿ ಅಡ್ಡಾಡದಂತಾಗಿದೆ. ನಾಲ್ಕೈದು ದಿನಗಳಿಂದ ಒಂದೇ ಮುಷ್ಯ 11 ಕ್ಕಿಂತ ಹೆಚ್ಚು ಜನರ ಮೇಲೆ ದಾಳಿ ಮಾಡಿದ್ದು. ಜನರು ಕೈಯಲ್ಲಿ ಕೋಲು, ದೊಣ್ಣೆ ಹಿಡಿದು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಶಾಲಾ ಮಕ್ಕಳಂತೂ ಶಾಲೆಗೆ ಹೋಗಬೇಕೆಂದರೆ ಯಾರಾದ್ರೂ ಒಬ್ಬರು ಅವರ ಜೊತೆ ಕೋಲು ಹಿಡಿದು ಶಾಲೆಗೆ ಕಳಿಸಬೇಕಾದಂತ ಪರಿಸ್ಥಿತಿ ಉಂಟಾಗಿದೆ. ಕನ್ನೆಪ್ಪರ ಮಂಜಪ್ಪ, ಮಹೇಶ್ವರಪ್ಪ, ದೇವೇಂದ್ರಪ್ಪ, ಪುನೀತ್ ಸೇರಿದಂತೆ 11 ಜನರ ಮೇಲೆ ಮುಷ್ಯಗಳು ಈಗಾಗಲೇ ದಾಳಿ ನಡೆಸಿದ್ದು, ಮಲೇಬೆನ್ನೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿರುವ ಮುಷ್ಯಗಳನ್ನು ಹಿಡಿದು ಕಾಡಿಗೆ ಬಿಡಿ ಎಂದು ಅರಣ್ಯ ಅಧಿಕಾರಿಗಳಿಗೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.

ಅರಣ್ಯ ಅಧಿಕಾರಿಗಳು ಮೂರು ದಿನಗಳಿಂದ ಗ್ರಾಮದಲ್ಲಿ ಬೀಡು ಬಿಟ್ಟಿದ್ದು, ಮುಷ್ಯಗಳ ಸೆರೆಗೆ ಗ್ರಾಮಸ್ಥರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ. ಆದ್ರೆ ಅವುಗಳನ್ನು ಹಿಡಿಯಲು ಬಂದವರನ್ನು ಕಣ್ಣು ತಪ್ಪಿಸುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *