ನೆಚ್ಚಿನ ಜನನಾಯಕ ಬರ್ಲಿಲ್ಲವೆಂದು 2 ಬಾರಿ ಮದುವೆ ಕ್ಯಾನ್ಸಲ್ ಮಾಡಿದ್ದ ವ್ಯಕ್ತಿಯ ಮದುವೆಗೆ ಆಗಮಿಸಿದ ಶ್ರೀರಾಮಲು!

Public TV
1 Min Read

ಕೊಪ್ಪಳ: ಬಳ್ಳಾರಿ ಸಂಸದ ಶ್ರೀರಾಮುಲು ಬರದೆ ಇದ್ದರೆ ಮದುವೆಯೇ ಆಗಲ್ಲ ಎಂದು ಹೇಳುತ್ತಿದ್ದ ಹುಡುಗರಿಬ್ಬರಿಗೆ ಕಡೆಗೂ ಕಂಕಣ ಬಲ ಕೂಡಿಬಂದಿದೆ. ಮದುವೆಗೆ ಬಂದ ಶ್ರೀರಾಮುಲು ನವ ವಧು-ವರರಿಗೆ ಆಶೀರ್ವದಿಸಿ ಶುಭಾಶಯ ಕೋರಿದ್ದಾರೆ.

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ವಡಿಕಿ ಗ್ರಾಮದಲ್ಲಿ ಇತ್ತೀಚೆಗೆ ಹುಡುಗರಿಬ್ಬರು ಶ್ರೀರಾಮುಲು ನಮ್ಮ ಮದುವೆಗೆ ಬರಲೇಬೇಕು ಎಂದು ವಿಚಿತ್ರವಾದ ಹಠ ಹಿಡಿದಿದ್ದರು. ಶ್ರೀರಾಮುಲು ಬಾರದ್ದಕ್ಕೆ ಸತತ ಎರಡು ಬಾರಿ ನಿಶ್ಚಯವಾಗಿದ್ದ ಮದುವೆಯನ್ನು ಸಹೋದರರಿಬ್ಬರು ಕ್ಯಾನ್ಸಲ್ ಮಾಡಿ ಮನೆಯವರು ಕಕ್ಕಾಬಿಕ್ಕಿಯಾಗುವಂತೆ ಮಾಡಿದ್ದರು.

ನಂತರ ಈ ವಿಷಯ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತೆ ಇವರ ಈ ಹಠವನ್ನು ನೋಡಿದ ಜನರು ಸಹ ಯಾರಪ್ಪ ಈ ಮಹಾನುಭಾವರು ಎಂದು ಕೇಳುವಂತೆ ಆಗಿತ್ತು. ಕೊನೆಗೂ ಆ ಯುವಕರ ಹಠಕ್ಕೆ ಮನಸೋತ ಸಂಸದ ಶ್ರೀರಾಮುಲು ಸಹೋದರರಿಬ್ಬರ ಮದುವೆಗೆ ಆಗಮಿಸಿದ್ದಾರೆ. ಸತತ ಎರಡು ಬಾರಿ ಕ್ಯಾನ್ಸಲ್ ಆಗಿದ್ದ ಮದುವೆಗೆ ಶ್ರೀರಾಮುಲು ಬಂದು ನವಜೋಡಿಗಳಿಗೆ ಆಶೀರ್ವದಿಸಿದ್ದಾರೆ.

ತಮ್ಮ ನೆಚ್ಚಿನ ನಾಯಕ ಮದುವೆಗೆ ಆಗಮಿಸಿದ್ದರಿಂದ ದಿಲ್ ಖುಷ್ ಆಗಿರೋ ಮಂಜುನಾಥ್ ಮತ್ತು ಹನುಮೇಶ್ ಮದುವೆಯಲ್ಲಿ ಶ್ರೀರಾಮುಲು ಜೊತೆ ಫೋಟೋ ತಗೆಸಿಕೊಂಡು ಆನಂದದ ಕಡಲಲ್ಲಿ ತೇಲಾಡಿದ್ದಾರೆ. ಶ್ರೀರಾಮುಲು ಜೊತೆ ಮದುವೆಗೆ ಬಂದಿರೋರು ಸಹ ಹುಡುಗನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದಿದ್ದರು.

ಶ್ರೀರಾಮುಲು ಮದುವೆಗೆ ಬರೋದು ಮುಂಚೆನೇ ಗೊತ್ತಾಗಿದ್ದರಿಂದ ಮದುವೆಗೆ ಭಾರೀ ಜನಸ್ತೋಮ ಹರಿದುಬಂದಿತ್ತು. ಆದ್ರೆ ಶ್ರೀರಾಮುಲು ಗ್ರಾಮಕ್ಕೆ ಬರೋದು ಸ್ವಲ್ಪ ಲೇಟ್ ಆಗಿದ್ದರಿಂದ ಶ್ರೀರಾಮುಲುಗಾಗಿ ಕಾದು ಕಾದು ಜನ ಸುಸ್ತಾಗಿದ್ದರು.

ಮದುವೆಯಾದ ಹುಡುಗರಿಬ್ಬರು ಅಣ್ಣಾ ಬರೋತನಕ ಊಟ ಮಾಡೋದಿಲ್ಲಾ ಎಂದು ಮುಂಜಾನೆಯಿಂದ ಉಪವಾಸವಿದ್ದರು. ಕೊನೆಗೂ ಮದುವೆಗೆ ನೆಚ್ಚಿನ ನಾಯಕ ಬಂದಿದ್ದಕ್ಕೆ ಮದುಮಕ್ಕಳು ಹರ್ಷವನ್ನು ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ತಾನು ಮೆಚ್ಚಿದ ಜನನಾಯಕ ಬರಲಿಲ್ಲವೆಂದು 2 ಬಾರಿ ಮದುವೆ ಕ್ಯಾನ್ಸಲ್ ಮಾಡಿದ ವರ

Share This Article
Leave a Comment

Leave a Reply

Your email address will not be published. Required fields are marked *