ಮುಂಬೈ: ದುಬೈನಲ್ಲಿ ಹೃದಯಾಘಾತದಿಂದ ನಿಧನ ಹೊಂದಿರುವ ನಟಿ ಶ್ರೀದೇವಿ ಅವರ ಪಾರ್ಥಿವ ಶರೀರ ಇಂದು ರಾತ್ರಿ 11 ಗಂಟೆಗೆ ಮುಂಬೈಗೆ ತರಲಾಗುತ್ತಿದೆ.
ದುಬೈನಲ್ಲಿ ಮರಣೋತ್ತರ ಶವಪರೀಕ್ಷೆಗಳು ತಡವಾಗಿದ್ದರಿಂದ ಭಾರತಕ್ಕೆ ಹಿಂದಿರುಗಲು ವಿಳಂಬವಾಗಿದೆ ಎನ್ನಲಾಗಿದೆ. ಶ್ರೀದೇವಿಯವರ ಪಾರ್ಥಿವ ಶರೀರವನ್ನು ಅನಿಲ್ ಅಂಬಾನಿ ಒಡೆತನದ ವಿಶೇಷ ಜೆಟ್ ವಿಮಾನದ ಮೂಲಕ ತರಲಾಗುತ್ತಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ. ಇದನ್ನೂ ಓದಿ: ಹೃದಯಾಘಾತವಾಗಿ ಶ್ರೀದೇವಿ ನಿಧನ- ಹೃದಯಾಘಾತವಾಗಲು ಕಾರಣವೇನು? ಅಂಥ ಸಮಯದಲ್ಲಿ ಏನು ಮಾಡಬೇಕು? ಈ ಸುದ್ದಿ ಓದಿ
ಸೋಮವಾರ ನಗರದ ವಿಲೆ ಪಾರ್ಲೆಯ ಪವನ್ ಹಂಸ್ ನಲ್ಲಿ ಶ್ರೀದೇವಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಶ್ರೀದೇವಿಯವರು ವಾಸವಿದ್ದ ಅಂಧೇರಿಯ ನಿವಾಸದ ಮುಂದೆ ಅಭಿಮಾನಿಗಳು ಸೇರುತ್ತಿದ್ದಾರೆ. ಮುನ್ನೇಚ್ಚರಿಕೆಯ ಕ್ರಮವಾಗಿ ಮನೆಯ ಮುಂಭಾಗದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ ಮಾಡಲಾಗಿದೆ. ಇದನ್ನೂ ಓದಿ: ಅಮಿತಾಬ್ ಬಚ್ಚನ್ಗೆ ಶ್ರೀದೇವಿ ಸಾವಿನ ಮುನ್ಸೂಚನೆ ಸಿಕ್ಕಿತ್ತಾ?- ಬಿಗ್ ಬಿ ಈ ಟ್ವೀಟ್ ಮಾಡಿದ ಕೆಲವೇ ನಿಮಿಷಗಳಲ್ಲಿ ಶ್ರೀದೇವಿ ಸಾವು
ಶ್ರೀದೇವಿ ತಮ್ಮ ಪತಿ ಬೋನಿ ಕಪೂರ್ ಮತ್ತು ಕಿರಿಯ ಪುತ್ರಿ ಖುಷಿ ಜೊತೆ ಸಂಬಂಧಿಕರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ದುಬೈಗೆ ತೆರಳಿದ್ದರು. ಈ ಸಂದರ್ಭದಲ್ಲಿ ಹೃದಯಾಘಾತಗೊಂಡು ನಿಧನರಾಗಿದ್ದಾರೆ. ಇದನ್ನೂ ಓದಿ: ಶ್ರೀದೇವಿ ನಿಧನದ ಬಗ್ಗೆ ಕಾಂಗ್ರೆಸ್ ಟ್ವೀಟ್ಗೆ ಜನರ ಆಕ್ರೋಶ
ಶ್ರೀದೇವಿ ಅವರು 2017 ರಲ್ಲಿ ಬಾಲಿವುಡ್ “ಮಾಮ್” ಎಂಬ ಚಿತ್ರದಲ್ಲಿ ನಟಿಸಿ ಭಾರೀ ಪ್ರಶಂಸೆಯನ್ನ ಗಳಿಸಿದ್ದರು. ಈಗ ಶಾರೂಖ್ ಖಾನ್ ನಟನೆಯ ಝೀರೋ ಸಿನಿಮಾದಲ್ಲಿ ಶ್ರೀದೇವಿಯವರು ನಟಿಸುತ್ತಿದ್ದು, ಇದು ಅವರ ಕೊನೆ ಚಿತ್ರವಾಗಿದೆ. ಈ ಚಿತ್ರವು ಡಿಸೆಂಬರ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಶ್ರೀದೇವಿ ನಿಧನಕ್ಕೆ ಕಂಬನಿ ಮಿಡಿದ ನಟ ಕಿಚ್ಚ ಸುದೀಪ್
ನಾಲ್ಕನೇ ವಯಸ್ಸಿಗೇ ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶ್ರೀದೇವಿಯವರು ಆಗಸ್ಟ್ 13ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದ್ದರು. ಶ್ರೀದೇವಿಯವರ ಹುಟ್ಟು ಹೆಸರು ಶ್ರೀ ಅಮ್ಮಾಯಂಗಾರ್ ಅಯ್ಯಪ್ಪನ್. ಆರು ಫಿಲ್ಮ್ ಫೇರ್ ಅವಾರ್ಡ್ ಗಳನ್ನ ಪಡೆದುಕೊಂಡಿರುವ ಶ್ರೀದೇವಿಯವರು, ಪದ್ಮಶ್ರೀ ಪ್ರಶಸ್ತಿಯನ್ನೂ ಸಹ ಪಡೆದಿದ್ದರು. ಇದನ್ನೂ ಓದಿ: ಮಹಾ ಆಸೆ ಈಡೇರುವ ಮುನ್ನವೇ ವಿಧಿವಶರಾದ ಶ್ರೀದೇವಿ