ಪುತ್ರನಿಂದ ಹಲ್ಲೆ ಪ್ರಕರಣ ಕುರಿತು ಶಾಸಕ ಹ್ಯಾರಿಸ್ ಪ್ರತಿಕ್ರಿಯಿಸಿದ್ದು ಹೀಗೆ

Public TV
2 Min Read

ಬೆಂಗಳೂರು: ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೋರೆಂಟ್ ನಲ್ಲಿ ಊಟ ಮಾಡುವ ವಿಷಯಕ್ಕಾಗಿ ಕಿರಿಕ್ ತೆಗೆದು ಯುವಕನೋರ್ವನ ಮೇಲೆ  ಹಲ್ಲೆ ನಡೆಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಶಾಂತಿನಗರ ಕ್ಷೇತ್ರದ ಶಾಸಕ ಹ್ಯಾರಿಸ್ ಪ್ರತಿಕ್ರಿಯಿಸಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಹ್ಯಾರಿಸ್, ಗಲಾಟೆ ಆಗಿರೋದು ನಿಜ. ನಾನು ನಲಪಾಡ್ ಜೊತೆ ಮಾತಾಡಿದ್ದೇನೆ, ಬೈದಿದ್ದೇನೆ. ಮಗ ಎಲ್ಲಿದ್ದಾನೆ ಅನ್ನೋದು ಗೊತ್ತಿಲ್ಲ, ನನ್ನ ಸಂಪರ್ಕಕ್ಕೂ ಸಿಗುತ್ತಿಲ್ಲ. ಲೋಕನಾಥ್ ನನ್ನ ಸ್ನೇಹಿತ. ನಾನು ಅವರ ಜೊತೆ ಮಾತನಾಡಿದ್ದೀನಿ. ಶನಿವಾರ ಆಸ್ಪತ್ರೆ ಬಳಿ ಹೋಗಿ ಬಂದೆ. ಎಫ್‍ಐಆರ್ ಆಗಿದೆ. ಕಾನೂನಿನ ಮೂಲಕವೇ ಸರಿಪಡಿಸೋಣ. ಮಕ್ಕಳ ಜಗಳದಿಂದ ನಮ್ಮಿಬ್ಬರಿಗೆ ತೊಂದರೆ ಆಗಿದೆ. ಈ ರೀತಿಯ ಘಟನೆಯನ್ನ ನಾವು ಸಹಿಸೋಕೆ ಆಗಲ್ಲ. ಕೂತು ಮಾತನಾಡಿ ಸರಿ ಮಾಡ್ತೀವಿ ಅಂತ ಹೇಳಿದ್ರು.

ಸಿಎಂ ಸೂಚನೆ: ಶಾಸಕ ಹ್ಯಾರಿಸ್ ಅವರ ಪುತ್ರನ ಹಲ್ಲೆ ಪ್ರಕರಣ ಸಂಬಂಧ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈಗಾಗಲೇ ಪ್ರಕರಣ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿರುವ ಸಿಎಂ, ತಪ್ಪು ಮಾಡಿದವರು ಯಾರೇ ಆಗಲಿ ಕಾನೂನು ಪ್ರಕಾರ ಶಿಕ್ಷೆಯಾಗಬೇಕು. ತಕ್ಷಣ ಕ್ರಮ ಜರುಗಿಸುವಂತೆ ನಗರ ಪೊಲೀಸ್ ಆಯುಕ್ತರಿಗೂ ಸೂಚಿಸಿದ್ದಾರೆ.

ಏನಿದು ಘಟನೆ?: ಶಾಂತಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹ್ಯಾರಿಸ್ ಅವರ ಮಗ ಮಹಮ್ಮದ್ ನಲಪಾಡ್ ಯುಬಿ ಸಿಟಿ ರೆಸ್ಟೊರೆಂಟ್ ನಲ್ಲಿ ಊಟ ಮಾಡುವ ವಿಷಯಕ್ಕಾಗಿ ಕಿರಿಕ್ ತೆಗೆದು ಯುವಕನೋರ್ವನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಉದ್ಯಮಿ ಲೋಕ್‍ನಾಥ್ ಪುತ್ರ ವಿದ್ವತ್ ಹಲ್ಲೆಗೊಳಗಾದ ಯುವಕನಾಗಿದ್ದು, ಇವರು ಇತ್ತೀಚೆಗೆ ವಿದ್ವತ್ ಸಿಂಗಪೂರ್‍ನಲ್ಲಿ ಪದವಿ ಮುಗಿಸಿ ನಗರಕ್ಕೆ ಆಗಮಿಸಿದ್ದರು. ಶನಿವಾರ ರಾತ್ರಿ ಸುಮಾರು 11 ಗಂಟೆಗೆ ವಿದ್ವತ್ ಊಟಕ್ಕೆಂದು ಯುಬಿ ಸಿಟಿ ರೆಸ್ಟೊರೆಂಟ್ ಗೆ ತೆರಳಿದ್ದರು. ಈ ವೇಳೆ ಊಟ ಮಾಡುವ ವಿಷಯಕ್ಕಾಗಿ ವಿದ್ವತ್ ಮತ್ತು ಮಹಮ್ಮದ್ ನಲಪಾಡ್ ನಡುವೆ ಜಗಳ ನಡೆದಿದೆ. ಈ ಜಗಳ ತಾರಕಕ್ಕೇರಿ ಹ್ಯಾರಿಸ್ ಅವರ ಪುತ್ರ ಮಹಮ್ಮದ್ ಮತ್ತು ಆತನ ಸ್ನೇಹಿತರು ವಿದ್ವತ್ ಮುಖಕ್ಕೆ ಪಂಚ್ ಕೊಟ್ಟು, ಮನಸ್ಸೋ ಇಚ್ಛೆ ಥಳಿಸಿದ್ದಾರೆ.

ಹಲ್ಲೆಗೊಳಗಾದ ವಿದ್ವತ್ ರನ್ನು ನಗರದ ಮಲ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಷ್ಟಕ್ಕೆ ಸುಮ್ಮನಾಗದ ಶಾಸಕರ ಪುತ್ರ ಮತ್ತು ಆತನ ಗ್ಯಾಂಗ್ ಆಸ್ಪತ್ರೆಗೆ ನುಗ್ಗಿ ವಿದ್ವತ್ ಮೇಲೆ ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಯಲ್ಲಿದ್ದ ವಿದ್ವತ್ ಸಹೋದರ ಸಾತ್ವಿಕ್ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಇದೀಗ ವಿದ್ವತ್ ಮಲ್ಯ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡಿಯುತ್ತಿದ್ದಾರೆ. ಈ ಸಂಬಂಧ ಮಹಮ್ಮದ್ ನಲಪಾಡ್ ಹ್ಯಾರಿಸ್ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ದೂರು ದಾಖಲಾಗುತ್ತಿದ್ದಂತೆ ಪ್ರಮುಖ ಆರೋಪಿಯಾಗಿರುವ ಶಾಸಕರ ಪುತ್ರ ಮಹಮ್ಮದ್ ನಲಪಾಡ್ ಪರಾರಿಯಾಗಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *