ಮಾವುತರನ್ನು ಬಿಟ್ಟು ಹೋಗಲು ನಿರಾಕರಿಸಿ ಕಾವೇರಿ ನದಿಯ ಮಧ್ಯಭಾಗದಲ್ಲಿ ಹೋಗಿ ನಿಂತ ಆನೆ!

Public TV
1 Min Read

ಮಡಿಕೇರಿ: ದುಬಾರೆ ಸಾಕಾನೆ ಶಿಬಿರ ಮಾವುತರು ಹಾಗೂ ಕಾಡಾನೆಗಳ ಭಾವನಾತ್ಮಕ ಸಂಬಂಧಕ್ಕೆ ಸಾಕ್ಷಿಯಾಯಿತು.

ದುಬಾರೆ ಆನೆ ಶಿಬಿರದಿಂದ ಛತ್ತೀಸ್‍ಗಢಕ್ಕೆ ಮೂರು ಆನೆಗಳನ್ನು ಸ್ಥಳಾಂತರ ಮಾಡಲು ಸರ್ಕಾರ ಅನುಮತಿ ನೀಡಿತ್ತು. ಅದರಂತೆ ಜನವರಿ 22ರಂದು ಪರಶುರಾಮ ಹಾಗೂ ತೀರ್ಥರಾಮ ಎನ್ನುವ ಆನೆಗಳನ್ನು ಕಳುಹಿಸಿದ್ದರು. ಆದರೆ ಮಾವುತರ ಅಚ್ಚುಮೆಚ್ಚಿನ ಆನೆ ಅಜ್ಜಯ್ಯ ಮಾತ್ರ ಲಾರಿ ಹತ್ತಲಿಲ್ಲ.

ಅರಣ್ಯ ಸಿಬ್ಬಂದಿ ಸಾಕಷ್ಟು ಕಸರತ್ತು ನಡೆಸಿದರೂ ಕೂಡ 30 ವರ್ಷ ವಯಸ್ಸಿನ ಆನೆ ಅಜ್ಜಯ್ಯ ಮಾತ್ರ ಒಪ್ಪಲಿಲ್ಲ. ಬಳಿಕ ದಸರಾ ಅಭಿಮನ್ಯು ಆನೆಯನ್ನು ತಂದು ಲಾರಿಗೆ ಹತ್ತಿಸುವ ಯತ್ನ ನಡೆಸಿದರು.

ಈ ವೇಳೆ ಆನೆಗಳ ನಡುವಿನ ಜಟಾಪಟಿಯಲ್ಲಿ ಅಜ್ಜಯ್ಯ 2 ಬಾರಿ ನೆಲಕ್ಕುರುಳಿದ ಪರಿಣಾಮ ಅಜ್ಜಯ್ಯನ ದೇಹದ ಹಲವೆಡೆ ಗಾಯಗಳಾಗಿದೆ. ಗಾಬರಿಗೊಂಡ ಅಜ್ಜಯ್ಯ ಕಾಲಿಗೆ ಹಾಕಿದ್ದ ಸರಪಳಿಯನ್ನು ತುಂಡರಿಸಿಕೊಂಡು ರಾತ್ರಿ 12 ಗಂಟೆ ವೇಳೆಯಲ್ಲಿ ಕಾಡಿಗೆ ತಪ್ಪಿಸಿಕೊಂಡು ಹೋಗಿದೆ.

ಬೆಳಗ್ಗೆ ಸಿಬ್ಬಂದಿ ಅಜ್ಜಯ್ಯನ ಹುಡುಕಾಟ ನಡೆಸಿದಾಗ ಕಾವೇರಿ ನದಿಯ ಮಧ್ಯಭಾಗದಲ್ಲಿ ನಿಂತಿತ್ತು. ಆದರೆ ದಡಕ್ಕೆ ಬರಲು ಒಪ್ಪಲೇ ಇಲ್ಲ. ಕೊನೆಗೆ ಹಿರಿಯ ಮಾವುತರೊಬ್ಬರು ಅಜ್ಜಯ್ಯನ ಮನವೊಲಿಸಿ ದಡಕ್ಕೆ ಕರೆತಂದು ಉಪಚಾರ ಮಾಡುತ್ತಿದ್ದಾರೆ.

ಘಟನೆ ನಡೆದ ಬಳಿಕ ಅಸಮಾಧಾನಗೊಂಡ ಮಾವುತರು, ನಾವು ಸಾಕಿ ಸಲಹಿದ ಆನೆಗಳನ್ನು ಬೇರೆ ರಾಜ್ಯಗಳಿಗೆ ನೀಡಲ್ಲ ಎಂದು ಹೇಳುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *