ಫೆಬ್ರವರಿ 04 ಬೆಂಗಳೂರು ಬಂದ್ ಇಲ್ಲ: ವಾಟಾಳ್ ನಾಗರಾಜ್

Public TV
2 Min Read

ಬೆಂಗಳೂರು: ಫೆ.4 ರಂದು ಬೆಂಗಳೂರು ಬಂದ್‍ಗೆ ಹೈಕೋರ್ಟ್ ತಡೆ ಹಿನ್ನೆಲೆ ಬೆಂಗಳೂರು ಬಂದ್ ನಡೆಸುವುದಿಲ್ಲ. ಆದರೆ ಮಹದಾಯಿಗಾಗಿ ನಮ್ಮ ಹೋರಾಟ ಮುಂದುವರೆಯಲಿದ್ದು, ಮೋದಿ ರಾಜ್ಯಕ್ಕೆ ಬರುವ ದಿನವನ್ನು ಕರಾಳ ದಿನವಾಗಿ ಆಚರಣೆ ಮಾಡುವುದಾಗಿ ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ಅಸಮರ್ಪಕ ಬಂದ್ ರದ್ದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಹೈಕೋರ್ಟ್ ಬಂದ್ ಗೆ ತಡೆ ನೀಡಿತ್ತು. ಈ ಕುರಿತು ನಗರದ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಬಂದ್ ನಡೆಸದಿರುವ ಕುರಿತು ಮಾಹಿತಿ ನೀಡಿದರು. ಕಳೆದ ಮೂರು ವರ್ಷಗಳಿಂದ ಮಹದಾಯಿ ಹೋರಾಟ ನಡೆಸಲಾಗುತ್ತಿದೆ. ಈ ಕುರಿತು ಪ್ರಧಾನಿಗಳ ಗಮನ ಸೆಳೆಯಲು ಫೆಬ್ರವರಿ 4 ರಂದು ಬಂದ್ ಗೆ ಕರೆ ನೀಡಲಾಗಿತ್ತು ಎಂದರು.

ನನ್ನ ವಿರುದ್ಧ ಅಪಪ್ರಚಾರ: ನಮ್ಮ ಬಂದ್ ಕನ್ನಡದ ನಾಡು ನುಡಿಗಾಗಿ ಮಾಡುತ್ತಿದ್ದೇವೆ, ವಿನಃ ಯಾವುದೇ ಪಕ್ಷದ ಹಿತಾಸಕ್ತಿಯಿಂದ ಅಲ್ಲ. ನನ್ನ ಹೋರಾಟ ಜೀವನದಲ್ಲಿ ಇದೇ ಮೊದಲ ಬಾರಿಗೆ ಒಬ್ಬ ವ್ಯಕ್ತಿಯ ಬಗ್ಗೆ ಕೂತು ಮಾತನಾಡುವ ಸ್ಥಿತಿ ಎದುರಾಗಿದೆ. ನ್ಯಾಯಾಲಯದಲ್ಲಿ ನನ್ನ ವಿರುದ್ಧ ಅರ್ಜಿ ಸಲ್ಲಿಸಲಾಗಿದ್ದು, ಈ ಕುರಿತು ನನಗೆ ಕೋರ್ಟ್ ನಿಂದ ನೋಟಿಸ್ ಜಾರಿಯಾಗಿದೆ. ಬಂದ್ ಗೆ ಕರೆ ನೀಡಿದ್ದು ಕನ್ನಡ ಚಳುವಳಿ ವಾಟಾಳ್ ಪಕ್ಷ ಅಲ್ಲ, ಕನ್ನಡ ಒಕ್ಕೂಟಗಳು ಆದರೆ ನನ್ನ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ನ್ಯಾಯಾಲಯದ ತೀರ್ಪನ್ನು ನಾವು ಗೌರವಿಸುತ್ತೇವೆ. ಆದರೆ ಈ ವೇಳೆ ನನಗೆ ತಂದೆ ತಾಯಿ ಸಾವನ್ನಪ್ಪಿದ ವೇಳೆ ಉಂಟಾಗುತ್ತಿರುವ ನೋವು ಆಗುತ್ತಿದೆ. ಅದ್ದರಿಂದ ನಾವು ನ್ಯಾಯಾಲಯದ ತೀರ್ಪಿಗೆ ತಲೆಬಾಗಿ ಬಂದ್ ರದ್ದು ಮಾಡುತ್ತಿದ್ದೇವೆ. ಆದರೆ ಭಾನುವಾರ ಕರಾಳ ದಿನವಾಗಿ ಆಚರಣೆ ಮಾಡುತ್ತೇವೆ. ಫ್ರೀಡಂ ಪಾರ್ಕ್ ನಿಂದ ಮೋದಿ ಅವರ ಸಭೆಗೆ ಜಾಥ ನಡೆಸಿ ಪ್ರಧಾನಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದರು.

ಬಂದ್ ಸಂವಿಧಾನ ವಿರೋಧಿ ಎಂದು ತೀರ್ಪು ನೀಡಿದ ನ್ಯಾಯಾಲಯದ ತೀರ್ಪಿನ ವಿರುದ್ಧ ಮೂಲಭೂತ ಹಕ್ಕಿಗಾಗಿ ಹೋರಾಟ ನಡೆಸುವುದಾಗಿ ತಿಳಿಸಿದರು. ನಮ್ಮ ದೇಹದಲ್ಲಿ ಒಂದು ತೊಟ್ಟು ರಕ್ತ ಇರುವರೆಗೂ ರಾಜ್ಯಕ್ಕಾಗಿ ಹೋರಾಟ ಮಾಡುತ್ತೇವೆ. 25 ರ ಬಂದ್ ರಾಜ್ಯದ ಜನರ ಕಣ್ಣು ತೆರೆಸಿದೆ ಅಂತಾ ಅಂದ್ರು.

ಬಿಜೆಪಿ ನಾಯಕರ ವಿರುದ್ಧ ಆಕ್ರೋಶ: ಈ ವೇಳೆ ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದ ಅವರು, ಬಿಜೆಪಿಯವರು ನಾಲಿಗೆ ಬಿಗಿ ಹಿಡಿದುಕೊಂಡು ಮಾತನಾಡಬೇಕಿದೆ. ನಮ್ಮನ್ನು ಕಾಂಗ್ರೆಸ್ ಏಜೆಂಟರು ಎನ್ನುವ ರೀತಿ ಮಾತನಾಡುತ್ತಾರೆ. ಮೈಸೂರನಲ್ಲಿ ಅಮೀತ್ ಶಾ ಅವರು ಮಹಾದಾಯಿ ಬಗ್ಗೆ ಯಾಕೆ ಏನು ಮಾತಾನಾಡಿಲ್ಲ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು. ಕರ್ನಾಟಕ ರಾಜ್ಯದ ಬಿಜೆಪಿ ನಾಯಕರು ಯಾರ ಪರ ಇದ್ದೀರಾ. ಸಂಸತ್ ನಲ್ಲಿ ರಾಜ್ಯದ ಬಿಜೆಪಿ ಸಂಸದರು ಒಮ್ಮೆಯೂ ಮಹದಾಯಿ ಬಗ್ಗೆ ಮಾತಾಡಿಲ್ಲ. ಪ್ರಧಾನ ಮಂತ್ರಿಯರವರ ಗಮನ ಸೆಳೆಯಲು 25 ಕ್ಕೆ ಬಂದ್ ಮಾಡಿದ್ದು, ಫೆಬ್ರವರಿ 4 ಕ್ಕೆ ಪ್ರಧಾನಿ ಬೆಂಗಳೂರಿಗೆ ಬರುತ್ತಿದ್ದಾರೆ. ಅವರ ಗಮನ ಸೆಳೆಯಲು ನಮ್ಮ ಹೋರಾಟ ಮುಂದುವರೆಯುತ್ತದೆ. ನಾವು ಮೋದಿ ಅವರ ವಿರುದ್ಧ ಪ್ರತಿಭಟನೆ ನಡೆಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

Share This Article
Leave a Comment

Leave a Reply

Your email address will not be published. Required fields are marked *