ಹಳಿ ದಾಟುವಾಗ ಡಿಕ್ಕಿ ಹೊಡೆದ ರೈಲು-ಒಂದೂವರೆ ವರ್ಷದ ಮಗು ಸೇರಿ ಮೂವರ ಸಾವು

Public TV
1 Min Read

ಮಂಗಳೂರು: ರೈಲ್ವೇ ಹಳಿ ದಾಟುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿ ಮೂರು ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕಾಸರಗೋಡು ಬಳಿಯ ಮಂಜೇಶ್ವರದಲ್ಲಿ ನಡೆದಿದೆ.

ಮಂಜೇಶ್ವರ ರೈಲ್ವೆ ನಿಲ್ದಾಣದ ಬಳಿಯೇ ಘಟನೆ ನಡೆದಿದ್ದು ಇಬ್ಬರು ಮಹಿಳೆಯರು ಸೇರಿದಂತೆ ಒಂದೂವರೆ ವರ್ಷದ ಮಗು ಸಾವನ್ನಪ್ಪಿದೆ. ಮಂಜೇಶ್ವರದಲ್ಲಿ ಮುಖ್ಯ ರಸ್ತೆಯಿಂದ ಇನ್ನೊಂದು ದಾರಿಗೆ ರೈಲ್ವೆ ಹಳಿಯನ್ನು ದಾಟಬೇಕಾದ ಅನಿವಾರ್ಯತೆ ಇರೋದ್ರಿಂದ ಎಂದಿನಂತೆ ಇಂದು ಸ್ಥಳೀಯರು ರೈಲ್ವೇ ಹಳಿ ದಾಟುತ್ತಿದ್ದರು. ಒಂದು ರೈಲು ಪಾಸಾದ ನಂತ್ರ ಹಳಿ ದಾಟುತ್ತಿದ್ದ ವೇಳೆ ಮತ್ತೊಂದು ಹಳಿಯಲ್ಲಿ ವೇಗವಾಗಿ ಬಂದ ರೈಲು ಮೂವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸಾವನ್ನಪ್ಪಿದ್ದ ಮಹಿಳೆಯರು ಗುರುತು ಪತ್ತೆಯಾಗಿಲ್ಲ.

ಅಪಘಾತದ ತೀವ್ರತೆಗೆ ಮಗು ಸೇರಿದಂತೆ ಮಹಿಳೆಯರಿಬ್ಬರ ದೇಹ ಸಂಪೂರ್ಣ ನಜ್ಜುಗುಜ್ಜಾಗಿದೆ. ರೈಲ್ವೆ ಹಳಿ ದಾಟಲು ಓವರ್ ಬ್ರಿಡ್ಜ್ ಆಗಬೇಕೆಂದು ಸ್ಥಳೀಯರು ಹಲವಾರು ವರ್ಷಗಳಿಂದ ಒತ್ತಾಯಿಸುತ್ತಿದ್ರೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಜನರ ಬೇಡಿಕೆ ಈಡೇರಿರಲಿಲ್ಲ. ಇದೀಗ ಸರ್ಕಾರದ ನಿರ್ಲಕ್ಷ್ಯದಿಂದ ಒಂದೇ ಕ್ಷಣದಲ್ಲಿ ಮೂರು ಮಂದಿಯ ಪ್ರಾಣ ಪಕ್ಷಿ ಹಾರಿಹೋಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಮಂಜೇಶ್ವರ ರೈಲ್ವೇ ಪೊಲೀಸರು ಮತ್ತು ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *