ಮೈಸೂರು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ- ಬಸ್ ನಿಲ್ಲಿಸಿದ್ದಕ್ಕೆ ಆಕ್ರೋಶ

Public TV
1 Min Read

ಮೈಸೂರು: ಮಹದಾಯಿಗಾಗಿ ಇಂದು ಕರ್ನಾಟಕ ಬಂದ್‍ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತಗೊಂಡಿದ್ದು ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಸಂಸದ ಪ್ರತಾಪ್ ಸಿಂಹ ದಿಢೀರ್ ಭೇಟಿ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಸ್ ನಿಲ್ಲಿಸಿದ್ದಕ್ಕೆ ಪೊಲೀಸರಿಂದ ಪ್ರತಾಪ್ ಸಿಂಹ ಮಾಹಿತಿ ಕೇಳಿದ್ರು. ಬಸ್ ನಿಲ್ದಾಣದಲ್ಲಿ ಬಸ್ ಇಲ್ಲದೆ ಕುಳಿತಿದ್ದ ಪ್ರಯಾಣಿಕರನ್ನ ಮಾತನಾಡಿಸಿ, ಜನರ ಸಮಸ್ಯೆ ಆಲಿಸಿದ್ರು. ಸ್ಥಳದಲ್ಲೇ ಅಧಿಕಾರಿಗಳನ್ನ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡ್ರು. ಯಾರೂ ಪ್ರತಿಭಟನೆ ಮಾಡುತ್ತಿಲ್ಲ, ಯಾಕಾಗಿ ಬಸ್ ನಿಲ್ಲಿಸಿದ್ದೀರಿ ಅಂತ ಅಧಿಕಾರಿಗಳಿಗೆ ಪ್ರಶ್ನಿಸಿದ್ರು.

ಇಂದು ಬೆಳಗ್ಗೆ ಮೈಸೂರಿನಲ್ಲಿ ಯಾವುದೇ ಪ್ರತಿಭಟನೆ ನಡೆಸಿರಲಿಲ್ಲ. ಆದ್ರೆ ಸ್ವಯಂ ಪ್ರೇರಿತವಾಗಿ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಪ್ರತಾಪ್ ಸಿಂಹ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ನಂತರ ಕಾರ್ಯಕರ್ತರು ಮೈಸೂರು ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಬಂದು ಪ್ರತಿಭಟನೆ ಆರಂಭಿಸಿದ್ದಾರೆ.

ಇಂದು ಪರಿವರ್ತನಾ ಯಾತ್ರೆ ಕೂಡ ಇದ್ದು, ಮಧ್ಯಾಹ್ನದ ನಂತರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ಘಟನಾವಳಿಗಳು ಏನಾಗಲಿದೆ ಎಂಬ ಕುತೂಹಲ ಮೂಡಿದೆ.

ಬಸ್ ಸಂಚಾರ ನಿಲ್ಲಿಸಿರೋದ್ರಿಂದ ಸ್ವಲ್ಪ ಮಟ್ಟಿಗೆ ಬಂದ್ ಬಿಸಿ ತಟ್ಟಿದ್ದು ಬಿಟ್ಟರೆ ಮೈಸೂರಿನಲ್ಲಿ ಜನಜೀವನ ಎಂದಿನಂತೆ ಸಾಗಿದೆ.

Share This Article
Leave a Comment

Leave a Reply

Your email address will not be published. Required fields are marked *