ಉಡುಪಿಯಲ್ಲಿ ಗೋಲ್ಡನ್ ಬುಕ್ ಆಫ್ ರೆಕಾರ್ಡ್‍ಗೆ ಸೇರಿತು ವಂದೇ ಮಾತರಂ

Public TV
3 Min Read

ಉಡುಪಿ: ವಿಶ್ವಾದ್ಯಂತ ಸ್ವಾಮಿ ವಿವೇಕಾನಂದರ ಜನ್ಮ ದಿನ ಆಚರಿಸಲಾಗುತ್ತಿದೆ. ದೇಶದಲ್ಲಿ ಸರ್ಕಾರವೂ ಸ್ವಾಮೀಜಿಯ 155ನೇ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸಿದೆ. ಉಡುಪಿಯಲ್ಲಿ ಈ ದಿನ ಗೋಲ್ಡನ್ ಬುಕ್ ಆಫ್ ರೆಕಾರ್ಡ್‍ಗೆ ಸಾಕ್ಷಿಯಾಯ್ತು. 5000 ಮಂದಿ ವಂದೇ ಮಾತರಂ ಹಾಡುವ ಮೂಲಕ ತಮ್ಮ ಹೆಸರುಗಳನ್ನು ವಿದ್ಯಾರ್ಥಿಗಳು ದಾಖಲೆ ಪುಸ್ತಕದಲ್ಲಿ ಬರೆಸಿದ್ದಾರೆ.

ಭಾರತ್ ಮಾತಾಕಿ ಜೈ.., ಸ್ವಾಮೀ ವಿವೇಕಾನಂದರಿಗೆ ಜೈ.., ವಂದೇ ಮಾತರಂ.., ವಂದೇ ಮಾತರಂ. ಇವಿಷ್ಟು ಘೋಷ ವಾಕ್ಯಗಳನ್ನು ಬಿಟ್ಟು ಉಡುಪಿಯ ಮಲ್ಪೆಯಲ್ಲಿ ಬೇರೇನೂ ಇರಲೇ ಇಲ್ಲ. ಬರೀ ವಂದೇ ಮಾತರಂ ಘೋಷವಾಕ್ಯವಷ್ಟೆ ಕಿವಿಗಪ್ಪಳಿಸುತ್ತಿತ್ತು. ಕಣ್ಣಮುಂದೆ ತಿರಂಗ ಪಟಪಟಿಸುತ್ತಿತ್ತು.

ಸ್ವಾಮಿ ವಿವೇಕಾನಂದರ 155ನೇ ಜನ್ಮದಿನೋತ್ಸವವನ್ನು ಉಡುಪಿಯಲ್ಲಿ ವಿಭಿನ್ನವಾಗಿ ಆಚರಿಸಲಾಯ್ತು. ಇಳಿ ಸಂಜೆಯಲ್ಲಿ ಮಲ್ಪೆ ಕಡಲ ತೀರದಲ್ಲಿ ಐದು ಸಾವಿರ ಮಂದಿ ವಿದ್ಯಾರ್ಥಿಗಳು ವಂದೇ ಮಾತರಂ ಹಾಡಿನ ಗಾಯನ ಮಾಡಿದ್ರು. `ಸೇವ್ ನೇಚರ್ ಫಾರ್ ಫ್ಯೂಚರ್’ ಎಂಬ ಲೋಗೋವನ್ನು ಹಾಡಿದ ಎಲ್ಲಾ ವಿದ್ಯಾರ್ಥಿಗಳು ಧರಿಸಿದ್ದರು. ಇದೇ ಮೊದಲ ಬಾರಿಗೆ ಸಂಪೂರ್ಣ ಹಾಡನ್ನು ಇಷ್ಟು ದೊಡ್ಡ ಗುಂಪಿನಲ್ಲಿ ಹಾಡಲಾಯ್ತು.

ಹಿನ್ನೆಲೆ ಸಂಗೀತಕ್ಕೆ ವಿದ್ಯಾರ್ಥಿಗಳು, ಕಲಾವಿದರು ಸುಶ್ರಾವ್ಯವಾಗಿ ಹಾಡಿದರು. ಸೇರಿದ್ದ ಜನ- ಗಣ್ಯರು ಎದ್ದು ನಿಂತು ವಂದೇ ಮಾತರಂಗೆ ಗೌರವ ಕೊಟ್ಟರು. ಸಾಮೂಹಿಕ ವಂದೇ ಮಾತರಂ ಮತ್ತು ಒಂದೇ ರೀತಿಯ ಲೋಗೋ ಧರಿಸಿದ್ದು ಗೋಲ್ಡನ್ ಬುಕ್ ಆಫ್ ರೆಕಾರ್ಡ್‍ಗೆ ಸೇರ್ಪಡೆಯಾಗಲು ಕಾರಣವಾಯಿತು.

ಈ ವಿಭಿನ್ನ ಕಾರ್ಯಕ್ರಮದಲ್ಲಿ ಉಡುಪಿ ದಕ್ಷಿಣ ಕನ್ನಡ ಜಿಲ್ಲೆಯ 24 ಕಾಲೇಜಿನ 5000 ವಿದ್ಯಾರ್ಥಿಗಳು ಪಾಲ್ಗೊಂಡರು. ಸುಮಾರು 15 ಸಾವಿರ ಮಂದಿ ಸಾರ್ವಜನಿಕರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು. ಇದೊಂದು ಅವಿಸ್ಮರಣೀಯ ದಿನ ಅನ್ನೋದು ಪಾಲ್ಗೊಂಡ ವಿದ್ಯಾರ್ಥಿಗಳ ಖುಷಿಯ ಮಾತು.

ವಿದ್ಯಾರ್ಥಿನಿ ಮಧುಮತಿ ಮತ್ತು ಮಮತಾ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಈ ದಿನ ನಮ್ಮ ಜೀವನದಲ್ಲಿ ಎಂದೂ ಮರೆಯಲಾಗದ ದಿನ. ಕರಾವಳಿಯಲ್ಲಿ ಕೋಮು ಸಂಘರ್ಷ ಹೆಚ್ಚಾಗಿದ್ದು, ಪರಸ್ಪರ ಆತ್ಮೀಯತೆಯ ಭಾವನೆ ಕ್ಷೀಣಿಸಿದೆ. ದೇಶಭಕ್ತಿ ಇಲ್ಲವಾಗಿದ್ದು ಘರ್ಷಣೆ ಹೆಚ್ಚಾಗಿದೆ. ವಂದೇ ಮಾತರಂ ಹಾಡನ್ನು ಎಂದೂ ಸಂಪೂರ್ಣವಾಗಿ ನಾನು ಕೇಳಿಲ್ಲ. ಮೊದಲ ಬಾರಿ ಈ ಅನುಭವವಾಗಿದೆ. ವಂದೇ ಮಾತರಂ ಹಾಡುವಾಗ ತನ್ಮಯತೆ ಬರುತ್ತದೆ. ವಿಶೇಷ ದಿನದಂದು ವಂದೇ ಮಾತರಂ ಹಾಡಿದ್ರೆ ಯುವ ಜನರಲ್ಲಿ ದೇಶ ಭಕ್ತಿಯ ಜಾಗೃತಿ ಬರುತ್ತದೆ ಎಂದರು.

ಗೋಲ್ಡನ್ ಬುಕ್ ಆಫ್ ರೆಕಾರ್ಡ್ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಸಂವೇದನಾ ಫೌಂಡೇಶನ್‍ಗೆ ಸರ್ಟಿಫಿಕೇಟನ್ನು ಹಸ್ತಾಂತರ ಮಾಡಿದರು. ಸಂಸ್ಥೆಯ ಅಧಿಕಾರಿ ಸಂತೋಷ್ ಅಗರ್ವಾಲ್ ಮಾತನಾಡಿ, ಇದೊಂದು ಅಭೂತಪೂರ್ವ ಆಯೋಜನೆ. ವಿಶೇಷ ರೀತಿಯ ಸಾಧನೆ ಕೂಡಾ. ನಮ್ಮ ಸಂಸ್ಥೆಯಿಂದ ಗೌರವವನ್ನು ಕೊಡುತ್ತಿದ್ದೇವೆ. ಸಂವೇದನಾ ಸಂಸ್ಥೆಗೆ ಮಾತ್ರವಲ್ಲ, ಇದೊಂದು ದೇಶಕ್ಕೆ ಸಂದ ಗೌರವ ಎಂದು ಹೇಳಿದರು.

ರಮೇಶ್ ಚಂದ್ರ, ಸುಹಾನಾ ಸೈಯ್ಯದ್, ಯಶವಂತ್, ಸೇರಿದಂತೆ ಸರಿಗಮಪ ಮತ್ತು ರಿಯಾಲಿಟಿ ಶೋನ ಹಾಡುಗಾರರು ಈ ರೆಕಾರ್ಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಳೆದ ಒಂದು ತಿಂಗಳಿಂದ ಸಂವೇದನಾ ಸಂಸ್ಥೆ ಮತ್ತು ಹಿರಿಯ ಸಂಗೀತ ಕಲಾವಿದರು ವಿದ್ಯಾರ್ಥಿಗಳಿಗೆ ಹಾಡು ಕಲಿಸಿಕೊಟ್ಟಿದ್ದರು.

ಕಾರ್ಯಕ್ರಮದ ಆಯೋಜನೆ ಮಾಡಿದ ಪ್ರಕಾಶ್ ಮಲ್ಪೆ ಮಾತನಾಡಿ, ಇಷ್ಟೊಂದು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಲು ಕಾರಣಕರ್ತರಾದ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪ್ರಾಂಶುಪಾಲರಿಗೆ ಧನ್ಯವಾದ ಸಲ್ಲಿಸಿದ್ರು.

ಕಾರ್ಯಕ್ರಮಕ್ಕೆ ಮೊದಲು ನಾಲ್ಕು ಕಿಲೋಮೀಟರ್ ಶೋಭಾಯಾತ್ರೆ ಮಾಡಲಾಯ್ತು. 40ಕ್ಕೂ ಹೆಚ್ಚು ಭಜನಾ ತಂಡಗಳು, ಟ್ಯಾಬ್ಲೋ, 1750 ಅಡಿ ಉದ್ದದ ತಿರಂಗವನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಾಯ್ತು. ಸಾವಿರಾರು ವಿದ್ಯಾರ್ಥಿಗಳು ಅರ್ಧ ಕಿಲೋಮೀಟರ್ ಉದ್ದದ ತಿರಂಗ ಹೊತ್ತು ಸಾಗಿದ್ದು ರಾಷ್ಟ್ರಧ್ವಜ ನದಿ ರೂಪದಲ್ಲಿ ಹರಿದಂತಾಯ್ತು.

ಯುವಕರಲ್ಲಿ ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮತ್ತು ವಿವೇಕಾನಂದರ ಆಶಯಗಳನ್ನು ಭಿತ್ತರಿಸುವ ವಿಭಿನ್ನ ಕಾರ್ಯಕ್ರಮ ಉಡುಪಿಯಲ್ಲಿ ಎಲ್ಲರ ಗಮನ ಸೆಳೆದಿದೆ. ವಂದೇ ಮಾತರಂ ರೆಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *