ಡಿಸಿ, ಎಸ್‍ಪಿ ಮನೆ ಪಕ್ಕದಲ್ಲೇ ಗಾಂಜಾ ಹೊಡೆದು ಗಲಾಟೆ- ಬಿಯರ್ ಬಾಟಲಿನಿಂದ ವ್ಯಕ್ತಿಯ ತಲೆಗೆ ಹೊಡೆದ್ರು

Public TV
1 Min Read

ಚಿಕ್ಕಬಳ್ಳಾಪುರ: ಡಿಸಿ, ಎಸ್‍ಪಿ ಮನೆಯ ಪಕ್ಕದಲ್ಲೇ ಗಾಂಜಾ ಹೊಡೆದು ಗಲಾಟೆ ಮಾಡಿದ ನಾಲ್ವರು, ವ್ಯಕ್ತಿಯೊರ್ವನ ತಲೆಗೆ ಬಿಯರ್ ಬಾಟಲಿನಿಂದ ಹೊಡೆದು ಕೊಲೆ ಮಾಡಲು ಯತ್ನಿಸಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ದೀಪ್ತಿ ಅದಿತ್ಯಾ ಕಾನಡೆ ಹಾಗೂ ಎಸ್‍ಪಿ ಕಾರ್ತಿಕ್ ರೆಡ್ಡಿ ಅವರ ಮನೆಗಳ ಪಕ್ಕದಲ್ಲೇ ಇರುವ ಸಿಟಿಜನ್ ಕ್ಲಬ್ ಆವರಣದಲ್ಲಿ ಈ ಘಟನೆ ನಡೆದಿದೆ. ಸಿಟಿಜನ್ ಕ್ಲಬ್ ನ ಕಟ್ಟಡದಲ್ಲಿ ಸದ್ಯ ಮಹಿಳಾ ಪ್ರಥಮ ದರ್ಜೆ ಕಾಲೇಜು ನಡೆಯುತ್ತಿದ್ದು, ಈ ಸಿಟಿಜನ್ ಕ್ಲಬ್ ಆವರಣ ಪುಂಡ ಪೋಕರಿಗಳ ಅನೈತಿಕ ಚಟುವಟಿಕೆಗಳ ತಾಣವಾಗಿ ಬದಲಾಗಿದೆ. ಇಂದು ಬೆಳ್ಳಂ ಬೆಳಿಗ್ಗೆ ಆವರಣದಲ್ಲೇ ಗಾಂಜಾ ಹೊಡೆದು ಮದ್ಯ ಸೇವನೆ ಮಾಡಿರೋ ಕಿರಾತಕರು ನಗರಗೆರೆ ಗ್ರಾಮದ ಗಂಗಾಧರ್ ಎಂಬಾತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.

ಗಂಗಾಧರ್ ಪರಿಚಯಸ್ಥ ರಾಮು ಎಂಬಾತ ಫೋನ್ ಕರೆ ಮಾಡಿ ಈತನನ್ನ ಅಲ್ಲಿಗೆ ಕರೆಸಿಕೊಂಡು ಈ ಕೃತ್ಯ ಎಸಗಿದ್ದಾನೆ. ಗಂಗಾಧರ್ ಬಂದ ಕೂಡಲೇ ರಾಮು ಸೇರಿದಂತೆ ಮೂವರು ಅಪರಿಚಿತರು ಗಂಗಾಧರ್ ಮೇಲೆ ಮುಗಿಬಿದ್ದು ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ.

ಸದ್ಯ ಗಾಯಾಳು ಗಂಗಾಧರ್ ತಲೆಗೆ ಗಂಭೀರವಾದ ಗಾಯವಾಗಿದ್ದು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಯಲ್ಲಿ ಗಂಗಾಧರ್ ಬಳಿ ಇದ್ದ 5000 ರೂ. ನಗದು ಹಾಗೂ ಮೊಬೈಲನ್ನ ಕಿಡಿಗೇಡಿಗಳು ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಪೊಲೀಸರು ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಸಿ ಎಸ್‍ಪಿ ಮನೆ ಪಕ್ಕದಲ್ಲೇ ಇರೋ ಕಾಲೇಜಲ್ಲಿ ಈ ರೀತಿ ನಡೆದ್ರೆ ಜನಸಮಾನ್ಯರ ಗತಿ ಏನು ಅಂತ ಪ್ರತ್ಯಕ್ಷದರ್ಶಿಗಳು ಪ್ರಶ್ನಿಸಿದ್ದಾರೆ. ಆದ್ರೆ ಪ್ರಕರಣದಲ್ಲಿ ಈತನ ಪಾತ್ರ ಏನು? ಯಾಕೆ ಹಲ್ಲೆ ಮಾಡಿದ್ರು ಅನ್ನೋ ಸತ್ಯಾಂಶ ಪೊಲೀಸರ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *