ಕುಂದಾಪುರದಲ್ಲಿ ಸರ್ಕಾರದಿಂದ ಬಡವರ ಮನೆ ತೆರವು – ಬೀದಿಗೆ ಬಿತ್ತು ನೂರಾರು ದಲಿತ ಕುಟುಂಬ

Public TV
1 Min Read

ಉಡುಪಿ: ಸರ್ಕಾರಿ ಜಮೀನಿನಲ್ಲಿದ್ದ 150 ಮನೆಯನ್ನು ಏಕಾಏಕಿ ಸರ್ಕಾರ ತೆರವು ಮಾಡಿದೆ.

ಕುಂದಾಪುರದ ಕಂದಾವರದಲದ 25 ಎಕರೆ ಜಮೀನಿನಲ್ಲಿ ಮನೆ ಕಟ್ಟಿಕೊಂಡಿದ್ದ 150 ದಲಿತರ, ಕಾರ್ಮಿಕರ ಮನೆಗಳನ್ನು ತಹಶೀಲ್ದಾರ್ ತೆರವು ಮಾಡಿಸಿದ್ದಾರೆ. ಮನೆಗಳು ಬೀಳುತ್ತಿದ್ದಂತೆ ಸಂತ್ರಸ್ತರು ಪ್ರತಿಭಟನೆ ಮಾಡಿದರು. ಆದ್ರೆ ಪೊಲೀಸರ ಭದ್ರತೆಯಲ್ಲಿ ತಹಶೀಲ್ದಾರ್ ಕಾರ್ಯಾಚರಣೆಗೆ ಬುಲ್ಡೋಜರ್ ಗಳ ಬೆಂಬಲ ಸಿಕ್ಕಿತು.

ಮನಬಂದಂತೆ ಸರ್ಕಾರಿ ಅಧಿಕಾರಿಗಳು ಮನೆಗಳನ್ನು ಉರುಳಿಸಿದರು. ಸ್ವಂತ ಜಮೀನಿಲ್ಲದ ಕುಂದಾಪುರದ ನಿವಾಸಿಗಳು ಕೆಲ ತಿಂಗಳ ಹಿಂದೆ ಸರ್ಕಾರಿ ಜಮೀನಲ್ಲಿ ಗುಡಿಸಲು ಕಟ್ಟಿಕೊಂಡಿದ್ದರು. 25 ಎಕರೆ ಜಮೀನಿನಲ್ಲಿ ಕೊರಗ, ದಲಿತರು, ಹಿಂದುಳಿದವರೇ ಹೆಚ್ಚು. ಕೂಲಿ ಕಾರ್ಮಿಕರು ಕೂಡಾ ಗುಡಿಸಲು ಹಾಕಿ ಜೀವನ ಶುರು ಮಾಡಿದ್ದರು. ಸರ್ಕಾರದ ಕಾರ್ಯಾಚರಣೆಗೆ ತಡೆಯೊಡ್ಡಿದ 8 ಮಂದಿ ಸಂತ್ರಸ್ತರ ಬಂಧನ ಕೂಡಾ ಆಗಿದೆ.

ಇತ್ತ ಮನೆ ಕಳೆದುಕೊಂಡವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಸಂತ್ರಸ್ಥರಿಗೆ ಸಿಪಿಎಂ ನಾಯಕರು ಬೆಂಬಲಿಸಿದರು. ಪೊಲೀಸರು ಸಂತ್ರಸ್ತರನ್ನು ಬಂಧಿಸಿ ಮಾನವ ಹಕ್ಕನ್ನು ಉಲ್ಲಂಘನೆ ಮಾಡಿದ್ದಾರೆ. ಬದುಕುವ ಹಕ್ಕನ್ನು ಸರ್ಕಾರ ಕಿತ್ತುಕೊಂಡಿದೆ ಎಂದು ಕಾರ್ಮಿಕ ಮುಖಂಡ ವೆಂಕಟೇಶ ಕೋಣಿ ಘಟನೆಯನ್ನು ಖಂಡಿಸಿದ್ದಾರೆ.

ಸಂತ್ರಸ್ತೆ ವಿಮಲ ಕಂದಾವರ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ನಾವು ವಿಷ ಕುಡಿಯಬೇಕು ಅಂತ ಅಂದ್ರೆ ಅಧಿಕಾರಿಗಳೇ ಹೇಳಲಿ, ಕುಡಿದು ಸಾಯ್ತೇವೆ. ನಾವು ಸಾಲ ಮಾಡಿ ಸಿಮೆಂಟ್ ಬ್ಲಾಕ್ ತಂದು ಗುಡಿಸಲು ಕಟ್ಟಿದ್ದೇವೆ. ಏಕಾಏಕಿ ಈ ತರ ದಾಳಿ ಮಾಡಿದ್ದಾರೆ. ನಮ್ಮ ಕಣ್ಣೆದುರೇ ಮನೆಗಳ ನೆಲಸಮ ಮಾಡಿದ್ದಾರೆ. ಚಿಕ್ಕ-ಚಿಕ್ಕ ಮಕ್ಕಳು, ಮಹಿಳೆಯರು ಬೀದಿಗೆ ಬಂದಿದ್ದೇವೆ. ಜಿಲ್ಲಾಧಿಕಾರಿಗಳೇ, ಎಸ್‍ಪಿಯವರೇ ಇದಕ್ಕೆ ಉತ್ತರ ಕೊಡಬೇಕಾಗಿದೆ ಎಂದು ಕಣ್ಣೀರು ಹಾಕಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *