ಸಿದ್ದರಾಮಯ್ಯ ತಲೆತಿರುಕ, ಹುಚ್ಚನಂತೆ ಮಾತನಾಡ್ತಾನೆ: ಬಿಎಸ್‍ವೈ

Public TV
1 Min Read

ಚಿತ್ರದುರ್ಗ: ಸಿಎಂ ಸಿದ್ದರಾಮಯ್ಯ ತಲೆತಿರುಕ ಬಾಯಿಗೆ ಬಂದಂತೆ ಹುಚ್ಚನಂತೆ ಮಾತನಾಡುತ್ತಾನೆ, ಯೋಗಿ ಆದಿತ್ಯನಾಥ್ ಬಗ್ಗೆ ಮಾತನಾಡುವ ನೈತಿಕತೆ ಸಿದ್ದರಾಮಯ್ಯಗೆ ಇಲ್ಲವೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ಕೋಟೆನಾಡು ನಡೆಯುತ್ತಿರುವ ಬಿಜೆಪಿ ಪರಿವರ್ತನಾ ಯಾತ್ರೆಗೂ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೋಮಾಂಸ ಮಾತ್ರವಲ್ಲ ಸಿಎಂ ಸಿದ್ದರಾಮಯ್ಯ ತಿನ್ನದೆ ಇರೋದು ಏನಿದೆ? ಜೈಲಿಗೆ ಹೋಗಿ ಬಂದವರೆಂದು ಪದೇ ಪದೇ ಸಿಎಂ ಹೇಳಿದರೆ ಜನ ಬಡಿಗೆ ತೆಗೆದುಕೊಳ್ಳುತ್ತಾರೆ. ಆಗ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎಚ್ಚರವಿರಲಿ ಎಂದರು.

ರಾಜ್ಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದ್ದು, ಕೊಲೆ ಸುಲಿಗೆ ಅತ್ಯಾಚಾರ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗುತ್ತಿವೆ. ದಾನಮ್ಮ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ದಲಿತರು ವಿಜಯಪುರ ಚಲೋ ಹೋರಾಟವನ್ನು ತಡೆಯುತ್ತಿರುವ ಸರ್ಕಾರದ ನಿರ್ಧಾರ ತಪ್ಪಾಗಿದೆ. ಅವರಿಗೆ ಶಾಂತಿಯುತ ಹೋರಾಟಕ್ಕೆ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.

ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ರೈತ ಪರ ನಿಲ್ಲುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿಲ್ಲ. ಮುಂಬರುವ ಚುನಾವಣೆಯಲ್ಲಿ 224 ಕ್ಷೇತ್ರದಲ್ಲಿ ನಾವು ಸ್ಪರ್ಧಿಸುತ್ತೇವೆ 150 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿಯಿಂದ ಧರ್ಮಾಧಾರಿತ ರಾಜಕೀಯ ಎಂದಿರುವ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೂ ಪ್ರತಿಕ್ರಿಯಿಸಿದ ಅವರು, ಯಾವುದೇ ಪಕ್ಷದ ಜೊತೆ ನಾವು ಹೊಂದಾಣಿಕೆ ಮಾಡಿಕೊಳ್ಳಲ್ಲ. ಜೆಡಿಎಸ್‍ನ ಆ ಪುಣ್ಯಾತ್ಮನ ಬಗ್ಗೆ ನಾನು ಮಾತನಾಡಲ್ಲ. ಬೃಹಸ್ಪತಿಗಳ ಬಗ್ಗೆ ಮಾತನಾಡಲು ಏನಿಲ್ಲ. ನಾವು ಧರ್ಮವನ್ನು ಮುಂದಿಟ್ಟುಕೊಂಡು ಪರಿವರ್ತನಾ ಯಾತ್ರೆ ಮಾಡುತ್ತಿಲ್ಲ. ರಾಜ್ಯದ ಜನರ ಸಾಮಾಜಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಯಾತ್ರೆ ನಡೆಸುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಬೂಟಾಟಿಕೆಗೆ ಖಾವಿ ಹಾಕ್ತಾನೆ, ಯೋಗಿ ಯಾವತ್ತಾದ್ರೂ ಸಗಣಿ ಹೊತ್ತಿದ್ದಾನಾ: ಸಿಎಂ ಸಿದ್ದರಾಮಯ್ಯ

Share This Article
Leave a Comment

Leave a Reply

Your email address will not be published. Required fields are marked *