ವಿಚಾರಣೆಗೆಂದು ಕರೆದೊಯ್ದು ಅರೆಬೆತ್ತಲೆ ಮಾಡಿ ಥಳಿಸಿದ ಲೇಡಿ ಪಿಎಸ್‍ಐ

Public TV
1 Min Read

ಬೆಳಗಾವಿ: ವಿಚಾರಣೆ ಹೆಸರಿನಲ್ಲಿ ಲೇಡಿ ಪಿಎಸ್‍ಐವೊಬ್ಬರು ಹೆಸ್ಕಾಂ ಲೈನ್ ಮನ್ ನನ್ನು ಅರೆಬೆತ್ತಲೆ ಮಾಡಿ ಥಳಿಸಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ನಗರದ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ವಿದ್ಯುತ್ ತಂತಿ ತಗುಲಿ ಕಂಬದ ಮೇಲಿಂದ ಬಿದ್ದು ಲೈನ್‍ಮನ್ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ನಿಪ್ಪಾಣಿ ಬಸವೇಶ್ವರ ಪೊಲೀಸ್ ಠಾಣೆಯ ಲೇಡಿ ಪಿಎಸ್‍ಐ ರೋಹಿಣಿ ಪಾಟೀಲ್, ವಿಚಾರಣೆಗೆಂದು ಹೇಸ್ಕಾಂ ಲೈನ್‍ಮನ್ ರಾಜು ವಾಳಕಿ ಎಂಬಾತನನ್ನು ಠಾಣೆಗೆ ಕರೆದುಕೊಂಡು ಹೋಗಿ ಹಿಗ್ಗಾ ಮುಗ್ಗಾ ಥಳಿಸಿ ಖಾಕಿ ದರ್ಪ ಮೆರೆದಿದ್ದಾರೆ.

ಶಿರಪೇವಾಡಿ ಗ್ರಾಮದಲ್ಲಿ 2 ದಿನಗಳ ಹಿಂದೆ ವಿದ್ಯುತ್ ತಗುಲಿ ಲೈನ್ ಮನ್ ಸತೀಶ ಸದಾನಂದ ಪಾಟೀಲ(25) ಸಾವನ್ನಪ್ಪಿದ್ದರು. ವಿದ್ಯುತ್ ಕಂಬದ ಮೇಲಿನ ತಂತಿ ದುರಸ್ಥಿ ಕಾರ್ಯ ಮಾಡುತ್ತಿದ್ದಾಗ ವಿದ್ಯುತ್ ತಗುಲಿ ಕಂಬದ ಮೇಲಿಂದ ಬಿದ್ದು ಮೃತಪಟ್ಟಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಸ್ಕಾಂ ಸೆಕ್ಷನ್ ಆಫೀಸರ್ ಮಿರಜೆ ಮತ್ತು ರಾಜು ವಾಳಕಿಯನ್ನು ಪೊಲೀಸ್ ಠಾಣೆಗೆ ಕರೆಸಿಕೊಂಡಿದ್ದಾರೆ.

ಪೊಲೀಸ್ ಠಾಣೆಯಲ್ಲಿ ರಾಜು ವಾಳಕಿಯನ್ನು ಅರೆಬೆತ್ತಲೆ ಮಾಡಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮಾತನಾಡಲು ಇಬ್ಬರು ನೌಕರರು, ಸರ್ಕಾರಿ ನೌಕರಿಗೆ ಹೆದರಿ ಮಾಧ್ಯಮಗಳ ಮುಂದೆ ಬರಲು ಹಿಂದೇಟು ಹಾಕಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *