ಗದಗ: ಸಿಎಂ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ತ್ರೀ ಈಡಿಯಟ್ಸ್ ಗಳನ್ನು ತಯಾರು ಮಾಡಿದ್ದು ಅವರಿಂದ ಧರ್ಮವನ್ನು ಒಡೆಯಲು ಸಾಧ್ಯವಿಲ್ಲ ಎಂದು ಆಂದೋಲ ಶ್ರೀಗಳು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ಗದಗ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ವೀರಶೈವ ಲಿಂಗಾಯತ ಜನಜಾಗೃತಿ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ವೀರಶೈವ ಧರ್ಮ ಒಡೆಯಲು ಸಿಎಂ ತ್ರೀ ಈಡಿಯಟ್ಸ್ ನಾಯಕರನ್ನು ತಯಾರು ಮಾಡಿದ್ದಾರೆ ಎಂದು ಸಚಿವ ಎಂ.ಬಿ.ಪಾಟೀಲ್, ಬಸವರಾಜ್ ಹೊರಟ್ಟಿ, ವಿನಯ್ ಕುಲಕರ್ಣಿ ಅವರನ್ನು ತ್ರೀ ಈಡಿಯಟ್ಸ್ ಎಂದು ಜರಿದರು. ಆದರೆ ಇವರಿಂದ ಧರ್ಮ ಒಡೆಯಲು ಸಾಧ್ಯವಿಲ್ಲ. ಮತ ವಿಭಜಿಸಿ ಮತ್ತೆ ಅಧಿಕಾರ ಹಿಡಿಯುವ ಸಂಚು ಫಲಿಸಲ್ಲ. ಗುರು ಮುನಿದರೆ ಸಿಎಂ ಸಿದ್ದರಾಮಯ್ಯ ಅವರನ್ನು ಯಾರು ಕಾಯಲ್ಲ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಗದಗನಲ್ಲಿ ಸಮಾವೇಶ ನಡೆಸಿದರೆ ರಾವಣರಂತಹ ರಾಕ್ಷಸರ ಕಾಟ ಬಹಳವಯ್ಯ, ಗದುಗಿನಲ್ಲಿ ಕೆಲವು ರಾವಣರಿದ್ದಾರೆ. ಮನೆಯಲ್ಲಿ ಕೊಳ್ಳಿ ಇಟ್ಟು ಧರ್ಮ ವಿಭಜನೆಯ ಪ್ರಯತ್ನ ಫಲಿಸದು ಎಂದು ಗದಗ ತೋಂಟದ ಸಿದ್ಧಲಿಂಗ ಶ್ರೀಗಳ ವಿರುದ್ಧ ವಾಗ್ದಾಳಿ ನಡೆಸಿದರು.
ಇನ್ನು ವೀರಶೈವ-ಲಿಂಗಾಯತ ಎರಡೂ ಒಂದೇ ಎಂಬ ಸಂದೇಶ ಸಾರುವ ಸಲುವಾಗಿ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು. ಈ ಸಮಾವೇಶದಲ್ಲಿ ಪಂಚಪೀಠ ಪೀಠಾಧಿಪತಿಗಳು, ನಿರಂಜ ವಿರಕ್ತ ಸ್ವಾಮಿಜಿಗಳು ಸೇರಿದಂತೆ ಸುಮಾರು 12 ನೂರು ವೀರಶೈವ ಧರ್ಮದ ಹರಗುರು ಚರಮೂರ್ತಿ ಸ್ವಾಮಿಜಿಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ವಿಶೇಷ ಭಾಗವಾಗಿ ಹಿಂದೂ ಮುಸ್ಲಿಂ ಭಾವೈಕ್ಯ ಮೆರೆಯಲು ಗದಗ ನಗರದ ಹಲವು ಮುಸ್ಲಿಂ ಸಮುದಾಯದವರು ಒಟ್ಟಾಗಿ ಬೃಹತ್ ಹೂ ಮಾಲೆ ಅರ್ಪಿಸಿ ಮಾನವ ಧರ್ಮ ಒಂದೆ, ಮಾನವ ಧರ್ಮಕ್ಕೆ ಜೈವಾಗಲಿ ಎಂದು ಘೋಷಣೆ ಕೂಗಿದರು.